ಧಿಮಾಕು ಚಿತ್ರದ ಮಾತಿನ ಭಾಗದ ಚಿತ್ರೀಕರಣವೆಲ್ಲವೂ ಮುಗಿದಿದ್ದು ಇತ್ತೀಚೆಗಷ್ಟೇ ಕನ್ನಡದ ಕುರಿತಾದ ಹಾಡೊಂದರ ಚಿತ್ರೀಕರಣ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದ ಸಮೀಪ ಕಡು ಬಿಸಿಲಿನ ವಾತಾವರಣದಲ್ಲಿ ನಡೆಯಿತು. ಇದು ಚಿತ್ರದಲ್ಲಿ ನಾಯಕನ ಇಂಟ್ರ್ರಡಕ್ಷನ್ ಸಾಂಗ್ ಎಂದು ಚಿತ್ರತಂಡದಿಂದ ತಿಳಿದುಬಂತು.
ಇದಾದ ನಂತರ ಸೊಂಡೂರಿನಲ್ಲಿ ಮತ್ತೊಂದು ಗೀತೆಯ ಚಿತ್ರೀಕರಣ ನಡೆಯಲಿದೆ. ಈ ಹಿಂದೆ ಮಾನಸ ಸರೋವರ ಚಿತ್ರದ ನೀನೇ ಸಾಕಿದಾ ಗಿಣಿ ಹಾಡಿನ ಚಿತ್ರೀಕರಣ ಇದೇ ಸ್ಥಳದಲ್ಲಿ ನಡೆದಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ನವೀನ್ಕೃಷ್ಣ ಚಿತ್ರದ ನಾಯಕನಾಗಿದ್ದರೆ ಮುರುಗೇಶ್ ನಿರ್ದೇಶಕ.
ಬುದ್ದಿವಂತಿಕೆಯಿಂದ ನಾಯಕಿಯನ್ನು ಪ್ರೀತಿಸುವ ನಾಯಕ, ಮೊದಲು ಪ್ರೀತಿಗೆ ಒಲ್ಲೆ ಎಂದು ನಂತರ ಪ್ರೀತಿಸುವ ನಾಯಕಿ ಹೀಗೆ ಚಿತ್ರದ ಕಥೆ ಸಾಗುತ್ತದಂತೆ. ಚಿತ್ರದ ಇತರ ಪಾತ್ರಗಳಲ್ಲಿ ರಂಗಾಯಣ ರಘು, ರಮೇಶ್ ಭಟ್ ಹಾಗೂ ಜಗ್ಗೇಶ್ ಇದ್ದಾರಂತೆ. ನಾಯಕ ನವೀನ್ಕೃಷ್ಣ ಕಥೆ-ಚಿತ್ರಕಥೆ ಬರೆಯುವುದರಲ್ಲಿ ತೊಡಗಿಸಿಕೊಂಡಿರುವುದರ ಜೊತೆಗೆ ಹಾಡೊಂದನ್ನೂ ಬರೆದು ಹಾಡಿದ್ದಾರಂತೆ.
ನವೀನ್ಕೃಷ್ಣರಿಗೆ ಯಶಸ್ಸು ಕೋರೋಣವೇ?
|