ಭಕ್ತಿ ಪ್ರಧಾನ ಚಿತ್ರವಾದ 'ಜ್ಞಾನಜ್ಯೋತಿ ಸಿದ್ಧಗಂಗ' ಚಿತ್ರವನ್ನು ನೋಡಿದ ಸೆನ್ಸಾರ್ ಮಂಡಲಿ ಇದನ್ನು ಮುಕ್ತಕಂಠದಿಂದ ಶ್ಲಾಘಿಸಿದೆ. ಸಿದ್ಧಗಂಗ ಕ್ಷೇತ್ರ ಹಾಗೂ ಪ್ರಸ್ತುತ ಶ್ರೀಗಳಾದ ಶ್ರೀ ಶಿವಕುಮಾರ ಸ್ವಾಮಿಗಳ ಪರಿಚಯವನ್ನು ಈ ಚಿತ್ರ ಒಳಗೊಂಡಿದೆ. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿಯ ಅಧ್ಯಕ್ಷ ಚಂದ್ರಶೇಖರ್, "ಇದೊಂದು ಅದ್ಬುತ ಚಿತ್ರ" ಎಂದು ಬಣ್ಣಿಸಿ 'ಯು' ಪ್ರಮಾಣ ಪತ್ರ ನೀಡಿದ್ದಾರೆಂದು ನಿರ್ದೇಶಕ ಓಂಕಾರ್ ಬಿ.ಎ. ಹೇಳಿದರು.
ಚಿತ್ರದಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳು ಸೇರಿದಂತೆ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಹಾಗೂ ವಿಷ್ಣುವರ್ಧನ್ ದಂಪತಿ ನಟಿಸಿದ್ದಾರೆ. ಸಿದ್ಧಗಂಗ ಮಠದಲ್ಲಿ ಆಶ್ರಯ ಪಡೆದಿರುವ 12 ಸಾವಿರಕ್ಕೂ ಹೆಚ್ಚು ಮಕ್ಕಳು ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಪಿ.ಕೆ.ಎಚ್.ದಾಸ್ ಛಾಯಾಗ್ರಾಹಕರಾಗಿ, ಯುವರಾಜ್ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ರಮೇಶ್ ಭಟ್, ಸುಂದರ್ ರಾಜ್, ತಾರಾ, ಹಾಗೂ ಮಾ. ಕಿಶನ್ ನಟಿಸಿದ್ದಾರೆ.
|