ಮುಂಗಾರು ಮಳೆ ಚಿತ್ರ ಗಣೇಶ್, ಯೋಗರಾಜ್ ಭಟ್, ಪೂಜಾಗಾಂಧಿ ಅವರ ಜೀವನಕ್ಕೆ ಹೊಸ ಭಾಷ್ಯ ಬರೆದರೆ, ದುನಿಯಾ ಚಿತ್ರ ಸೂರಿ, ವಿಜಯ್, ರಶ್ಮಿ ಹಾಗೂ ಯೋಗೇಶ್ ಅವರ ಜೀವನಕ್ಕೆ ಹೊಸ ಅಡಿಪಾಯ ಹಾಕಿಕೊಟ್ಟಿತು. ದುನಿಯಾ ಚಿತ್ರದ ನಂತರ ವಿಜಯ್ನನ್ನು ಜನ ಗುರುತಿಸಿದಂತೆ ಅದರ ನಟಿ ರಶ್ಮಿಯನ್ನು ಕರ್ನಾಟಕದ ಮೂಲೆ ಮೂಲೆಯಲ್ಲೂ ಗುರುತಿಸುತ್ತಿದ್ದಾರೆ.
ಈ ಬಗ್ಗೆ ರಶ್ಮಿಗೆ ಸಂತಸದ ಜೊತೆಗೆ ಹೆಮ್ಮೆಯೂ ಇದೆ. ಇಂದು ನನ್ನ ಹೆಸರು ಕರ್ನಾಟಕದ ಹೆಚ್ಚಿನ ಪ್ರೇಕ್ಷಕರಿಗೆ ಗೊತ್ತಿದೆ. ದುನಿಯಾ ನನಗೆ ಹೊಸದೊಂದು ಲೋಕವನ್ನು ತೋರಿಸಿಕೊಟ್ಟಿತು ಎಂದು ಹೇಳುವ ಈ ಬೆಡಗಿ ಈಗ ಮಂದಾಕಿನಿಯ ನೀರೀಕ್ಷೆಯಲ್ಲಿದ್ದಾಳೆ. ದುನಿಯಾ ಚಿತ್ರದ ನಂತರ ನಾಯಕಿಯ ಅಭಿನಯಕ್ಕೆ ಹೆಚ್ಚು ಅವಕಾಶವಿರುವ ಚಿತ್ರ ಮಂದಾಕಿನಿ ಎನ್ನುತ್ತಾಳೆ ರಶ್ಮಿ.
ರಶ್ಮಿಗೆ ಈಗ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಈಗಾಗಲೇ "ಅನು" ಚಿತ್ರದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಲ್ಲಿ ಕೂಡಾ ನಾಯಕಿಗೆ ಹೆಚ್ಚು ಅವಕಾಶವಿದೆ. ರಶ್ಮಿ ಮತ್ತು ಶೃತಿಯಾಗಿ ಜೊತೆ ನಟಿಸಿದ ಅಕ್ಕ-ತಂಗಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. "ಹೃದಯಗಳ ಅರಮನೆ" ಎಂಬ ಮತ್ತೊಂದು ಚಿತ್ರಕ್ಕೆ ರಶ್ಮಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮತ್ತೆರಡು ಚಿತ್ರಗಳ ಜೊತೆ ಕೂಡಾ ಮಾತು ನಡೆಯುತ್ತಿದೆ.
ಕನ್ನಡ ಚಿತ್ರರಂಗ ನನಗೆ ಮನ್ನಣೆ ನೀಡಿ ಬೆಳೆಸಿದೆ ಎನ್ನುವ ಮೈಸೂರಿನ ಈ ಹುಡುಗಿ ಇಲ್ಲಿ ಜನರ ಮನಸ್ಸಿನಲ್ಲಿ ನೆಲೆ ಕಂಡುಕೊಳ್ಳುವಂತಹ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯನ್ನು ತೋಡಿಕೊಳ್ಳುತ್ತಾರೆ. ಇವರ ಆಸೆ ಈಡೇರಲೆಂದು ಹಾರೈಸೋಣ.
|