ಚುನಾವಣಾ ಬಿಸಿ ಎಲ್ಲರನ್ನೂ ತಟ್ಟಿದೆ. ಒಂದೆಡೆ ಅಕ್ರಮ ಮದ್ಯ, ಹಣ ಸಾಗಾಟ ಪತ್ತೆಯಾದರೆ ಇನ್ನೊಂದೆಡೆ ಬಿಡುಗಡೆಗೆ ಸಿದ್ಧವಾದ ಕೆಲವು ಚಿತ್ರಗಳಿಗೆ ಚುನಾವಣಾ ಗ್ರಹಣ ಹಿಡಿದಿದೆ. ಈ ಮಧ್ಯೆ ಹೊಸ ಚಿತ್ರಗಳಿಗೆ ಬೆಂಗಳೂರಿನಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿಲ್ಲ. ಚಿತ್ರೀಕರಣ ಸಮಯದಲ್ಲಿ ಜನ ಒಂದೆಡೆ ಸೇರಿದರೆ ಅಲ್ಲಿ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅನುಮತಿ ಸಿಗುತ್ತಿಲ್ಲ.
ಚುನಾವಣಾಧಿಕಾರಿಗಳು ತಮಗೆ ಬೇಕಾದ ಕಡೆ ಚಿತ್ರೀಕರಣ ಮಾಡಲು ಅನುಮತಿ ನೀಡದ ಕಾರಣ 'ನನ್ನವನು' ಚಿತ್ರವನ್ನು ಹೈದರಬಾದ್ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಹೈದರಾಬಾದ್ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಇಡೀ ನನ್ನವನು ಚಿತ್ರ ತಂಡವೇ ಬಿಡುಬಿಟ್ಟಿದೆ. ನಾಯಕ ಪ್ರಜ್ವಲ್, ನಾಯಕಿ ಅಂದ್ರಿತಾ ರೇ ಸೇರಿದಂತೆ ಅವಿನಾಶ್ ಕೂಡಾ ಅಲ್ಲೇ ಇದ್ದಾರೆ.
ಚಿತ್ರದ ಹಾಡಿನ ದೃಶ್ಯಗಳನ್ನು ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿರುವ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಜೊತೆಗೆ ಕೋರ್ಟ್ ಸನ್ನಿವೇಶವನ್ನು ಕೂಡಾ ಫಿಲ್ಮ್ ಸಿಟಿಯೊಳಗಡೆಯೇ ಚಿತ್ರೀಕರಿಸಲಾಗುತ್ತಿದೆ. ಚುನಾವಣಾ ಅಯೋಗದ ಕಟ್ಟುನಿಟ್ಟಿನ ಕ್ರಮದಿಂದ ನಮ್ಮಂತವರಿಗೆ ಇಲ್ಲಿ ಚಿತ್ರೀಕರಣ ಮಾಡುವುದೇ ಕಷ್ಟವಾಗಿದೆ ಎನ್ನುತ್ತಾರೆ ನನ್ನವನು ಚಿತ್ರದ ನಿರ್ದೇಶಕ ಶ್ರೀನಿವಾಸರಾಜು.
|