ಮಹರ್ಷಿ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಬಾಲಾಜಿ ಸ್ಟುಡಿಯೋದಲ್ಲಿ ಮಾತಿನ ಜೋಡಣಾ ಕಾರ್ಯ ನಡೆಯುತ್ತಿದೆ. ಚಿತ್ರವನ್ನು ಕೃಷ್ಣಬ್ರಹ್ಮ ನಿರ್ದೇಶಿಸುತ್ತಿದ್ದು, ಯುಗಾದಿ ಚಿತ್ರ ನಿರ್ಮಿಸಿದ ರಾಮಕೃಷ್ಣ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಒರಟ ಐ ಲವ್ ಯೂ ಚಿತ್ರದ ನಾಯಕ ಪ್ರಶಾಂತ್ ನಾಯಕನಾಗಿ ನಟಿಸುತ್ತಿದ್ದಾರೆ.
ಮಹರ್ಷಿ ಎಂದರೆ ಎಲ್ಲ ಬಲ್ಲವನು ಎಂದರ್ಥ. ಈ ಮಾತು ಇಲ್ಲಿ ನಾಯಕನ ಗುಣಕ್ಕೆ ಅನ್ವಯವಾಗುತ್ತದಂತೆ. ಒರಟ ಐ ಲವ್ ಚಿತ್ರದಲ್ಲಿ ಒರಟು ಸ್ವಭಾವದವನಾಗಿ ಅಭಿನಯಿಸಿದ ಪ್ರಶಾಂತ್ ಅವರ ಗೆಟಪ್ ಇಲ್ಲಿ ಸಂಪೂರ್ಣವಾಗಿ ಬದಲಾಗಿದೆ. ಅನಿವಾರ್ಯ ಕಾರಣದಿಂದ ನಾಯಕ ಅಂಡರ್ವರ್ಲ್ಡ್ ಪ್ರವೇಶಿಸಬೇಕಾಗುತ್ತದೆ.
ಮೊದಲ ಬಾರಿಗೆ ಆಕ್ಷನ್ ಚಿತ್ರವೊಂದರಲ್ಲಿ ಪೂಜಾಗಾಂಧಿ ನಟಿಸುತ್ತಿದ್ದಾರೆ. ಇಲ್ಲಿ ನಾಯಕ ಕಾಲೇಜಿನಲ್ಲಿ ಒಬ್ಬ ಉತ್ತಮ ವಿದ್ಯಾರ್ಥಿಯಾಗಿರುತ್ತಾನೆ. ಆದರೆ ಉತ್ತಮವರನ್ನು ಉತ್ತಮವಾಗಿ ಮುಂದುವರಿಯಲು ನಮ್ಮ ಸಮಾಜ ಬಿಡುವುದಿಲ್ಲ. ಒಂದು ದಿನ ನಾಯಕನ ತಾಯಿ ಮೇಲೆ ರೌಡಿಗಳು ದಾಳಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ನಾಯಕ ರೌಡಿಗಳೊಂದಿಗೆ ಹೊಡೆದಾಡುತ್ತಾನೆ. ಹೀಗೆ ಅನಿವಾರ್ಯ ಕಾರಣಕ್ಕಾಗಿ ನಾಯಕ ಅಂಡರ್ವರ್ಲ್ಡ್ ಪ್ರವೇಶಿಸುತ್ತಾನೆ.
|