'ಅಂತರ್ದಹನ'ದಲ್ಲಿ ಬಿರಾದಾರ್
ಗುರುವಾರ, 30 ಅಕ್ಟೋಬರ್ 2008( 15:47 IST )
ನಟ ಬಿರಾದಾರ್ಗೆ ಅಂತರ್ದಹನ ಚಿತ್ರದಲ್ಲಿ ಮತ್ತೊಮ್ಮೆ ತುಳಿತಕ್ಕೊಳಗಾದ ದಲಿತನ ಪಾತ್ರ ಸಿಕ್ಕಿದೆ. ಇಲ್ಲಿಯವರೆಗೆ ನಟಿಸಿರುವ 230ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಕಾಮಿಡಿ ಯಲ್ಲಿ ನಟಿಸಿರುವುದೇ ಹೆಚ್ಚು. ಉಳಿದಂತೆ ಪ್ರೇಕ್ಷಕರಿಗೆ ಬಿರಾದಾರ್ ನೆನಪಾಗುವುದು ದೌರ್ಜನ್ಯಕ್ಕೊಳಗಾದ ವ್ಯಕ್ತಿಯ ಪಾತ್ರದಲ್ಲಿ.
ಬಿರಾದಾರ್ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದು, ಎಂ.ಎಸ್.ಸತ್ಯು ನಿರ್ದೇಶನದ 'ಬರ' ಚಿತ್ರದ ಮೂಲಕ. ಚೊಚ್ಚಲ ಚಿತ್ರದಲ್ಲೇ ಅಸಾಹಯಕನ ಪಾತ್ರದಲ್ಲಿ ಬ್ರಾಂಡ್ ಆದ ಅವರು ಮುಂದೆ ಅಂತಹುದೇ ಪಾತ್ರಗಳಲ್ಲಿ ನಟಿಸಿದರು.
ಅಂತರ್ದಹನ ಚಿತ್ರದಲ್ಲಿ ಬಿರಾದಾರ್ ಮತ್ತೊಮ್ಮೆ ತುಳಿತಕ್ಕೊಳಗಾದ ದಲಿತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಬಹುಶಃ ನನ್ನ ಮೈಕಟ್ಟು, ಲುಕ್ ಇಂಥ ಪಾತ್ರಗಳಿಗೆ ಸೂಕ್ತ ಎನಿಸಬಹುದು. ಅಂಥ ಪಾತ್ರಗಳಲ್ಲಿ ನಾನು ಕಾಣಿಸಿಕೊಂಡಾಗ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆ.
ಅದು ನನ್ನ ಅದೃಷ್ಟ' ಎನ್ನುತ್ತಾರೆ ಬಿರಾದಾರ್. ಬಿಡುಗಡೆಗೆ ಸಿದ್ಧವಾಗಿರುವ 'ಅಕ್ಕ ತಂಗಿ' ಚಿತ್ರದಲ್ಲೂ ಇವರು ತಂದೆ ಪಾತ್ರದಲ್ಲಿ ನಟಿಸಿದ್ದಾರೆ. 1984ರಲ್ಲಿ ಇವರು ಹುಟ್ಟುಹಾಕಿದ 'ಸಂಗಮೇಶ್ವರ ಕಲಾವೃಂದ' ನಾಟಕ ಕಂಪೆನಿ ನೂರಾರು ಪ್ರದರ್ಶನಗಳನ್ನು ಕಂಡಿದೆ.