ಶರತ್ ಬಾಬು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಶಂಕರಾಚಾರ್ಯ' ಚಿತ್ರದ ಶೀರ್ಷಿಕೆ ಬದಲಾಗಿದೆ. ಇದೀಗ ಚಿತ್ರಕ್ಕೆ 'ಶಂಕರ ಪುಣ್ಯಕೋಟಿ' ಎಂದು ಹೆಸರಿಡಲಾಗಿದೆ. ಉಡುಪಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಸ್ಟುಡಿಯೋದಲ್ಲಿ ಧ್ವನಿ ಮುದ್ರಣ ಕಾರ್ಯ ನಡೆಯುತ್ತಿದೆ.
ಈ ಹಿಂದೆ 'ಕರುನಾಡು' ಚಿತ್ರ ನಿರ್ದೇಶಿಸಿದ್ದ ಜಿ.ಮೂರ್ತಿ 'ಶಂಕರ ಪುಣ್ಯಕೋಟಿ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆರಂಭದಲ್ಲಿ ನಟ ಶ್ರೀಧರ್ ಶಂಕಾರಾಚಾರ್ಯರ ಪಾತ್ರವನ್ನು ನಿರ್ವಹಿಸುವುದೆಂದು ನಿರ್ಧರಿಸಲಾಗಿತ್ತು. ಮಹತ್ವದ ಪಾತ್ರದಲ್ಲಿ ನಟಿಸುವ ಬಗ್ಗೆ ಶ್ರೀಧರ್ ಕೂಡಾ ಆಸಕ್ತರಾಗಿದ್ದರು. ಆದರೆ ಡೇಟ್ಸ್ ಸಮಸ್ಯೆಯಿಂದ ಅವರು ಈ ಪಾತ್ರವನ್ನು ಶರತ್ ಬಾಬುಗೆ ಒಪ್ಪಿಸಿಬಿಟ್ಟರು.
ಈ ಭಕ್ತಿಪ್ರಧಾನ ಚಿತ್ರದಲ್ಲಿ ವಿನಯ ಪ್ರಸಾದ್, ರಮೇಶ್ ಭಟ್ ಸೇರಿದಂತೆ ರಂಗಭೂಮಿಯ ಹತ್ತಾರು ಹಿರಿಯ ಕಲಾವಿದರು ನಟಿಸುತ್ತಿದ್ದಾರೆ. ಕೆ.ಎಚ್.ದಾಸ್ ಛಾಯಾಗ್ರಹಣ, ಪ್ರವೀಣ್ ಗೋಡ್ಕಿಂಡಿ ಸಂಗೀತ, ಬನ್ನಂಜೆ ಗೋವಿಂದಾಚಾರ್ಯ ಅವರ ಸಾಹಿತ್ಯ ಚಿತ್ರಕ್ಕಿದೆ.