ತಂದೆ-ತಾಯಿಗೆ ಶ್ರೀಮಂತಿಕೆ, ಪ್ರತಿಷ್ಠೆಯೇ ಮುಖ್ಯವಾಗಬಾರದು. ಹೀಗಾದಾಗ ಪೋಷಕರಿದ್ದು, ಮಕ್ಕಳು ಅನಾಥರಾಗುತ್ತಾರೆ. ಮಕ್ಕಳಿಗೆ ತಿಳಿ ಹೇಳುವ ಪೋಷಕರೂ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಇಂತಹ ಕಥೆಯನ್ನೊಳಗೊಂಡು ಬಿಡುಗಡೆಗೆ ಸಿದ್ದವಾಗಿರುವ ಚಿತ್ರ ಮೇಘವರ್ಷಿಣಿ. ನಿರ್ದೇಶಕ ಕೆ.ಶಿವರುದ್ರಯ್ಯ ಅವರು ಲೇಖಕಿ ಸಾಯಿಸುತೆಯ ಕಾದಂಬರಿಯನ್ನು ಆಧರಿಸಿ ಚಿತ್ರ ಮಾಡಿದ್ದಾರೆ.
ಸಾಲು ಸಾಲು ಚಿತ್ರಗಳ ಭರಾಟೆಯಲ್ಲಿ ಅವರಿಗೆ ಥಿಯೇಟರ್ ಸಮಸ್ಯೆ ಎದುರಾಗಿದೆ. ಕೌಟುಂಬಿಕ ಚಿತ್ರವಾದ್ದರಿಂದ ಗಾಂಧಿನಗರದ ಸಾಗರ್ ಅಥವಾ ತ್ರಿವೇಣಿ ಚಿತ್ರದಲ್ಲಿ ಬಿಡುಗಡೆ ಮಾಡಬೇಕೆಂದು ಅವರು ನಿರ್ಧರಿಸಿದ್ದಾರೆ. ಚಿತ್ರದಲ್ಲಿ ಪ್ರೇಮಕತೆಯೂ ಇದೆ. ಬಹುಪಾಲು ಚಿತ್ರೀಕರಣ ಚಿಕ್ಕಮಗಳೂರು ಹಾಗೂ ಕೊಟ್ಟಿಗೆಹಾರದಲ್ಲಿ ನಡೆದಿದೆ.
ಉಡುಪಿ ಕಡಲ ಕಿನಾರೆಯಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿದ್ದಾರೆ. ಆರ್ಯ ಚಿತ್ರದ ನಾಯಕ. ಆ ದಿನಗಳು ಚಿತ್ರದ ನಾಯಕಿ ಮಲೆಯಾಳಂ ಅರ್ಚನಾ ನಾಯಕಿ. ಆಕೆಗಿಲ್ಲಿ ಪರಿಸರ ಛಾಯಾಗ್ರಾಹಕಿಯ ಪಾತ್ರ. ಹಿರಿಯ ಸಂಗೀತ ನಿರ್ದೇಶಕ ಎಸ್.ಪಿ.ವೆಂಕಟೇಶ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಶಿವರುದ್ರಯ್ಯನವರು ಭಗವತಿ ಕಾಡು ಕೃತಿಯನ್ನಾಧರಿಸಿ ಚಿತ್ರ ಮಾಡುವ ಯೋಜನೆ ಹೊಂದಿದ್ದಾರೆ.