ಆದಿ ಲೋಕೆಶ್ ನಾಯಕರಾಗಿ ನಟಿಸಿದ 'ಬಿಡ್ಡ' ಚಿತ್ರ ಈ ವಾರ ತೆರೆ ಕಂಡಿದೆ. ಮಾಸ್ಗೆ ಮಾಸ್ ಎಂಬ ಟ್ಯಾಗ್ ಲೈನ್ನೊಂದಿಗೆ ರಕ್ತಪಾತ ಹರಿಸಿದ ಚಿತ್ರವನ್ನು ಜನ ಇಷ್ಟಪಡಲಿಲ್ಲ. ಚಿತ್ರದಲ್ಲಿ ಬಕೆಟ್ಗಟ್ಟಲೇ ರಕ್ತಹರಿಸಿದ ಕೂಡಲೇ ಚಿತ್ರ ಹಿಟ್ ಆಗುವಂತಿದ್ದರೆ ದೊಡ್ಡ ಬಜೆಟ್ನ ಮಾದೇಶ ಸೋಲುತ್ತಿರಲಿಲ್ಲ.
ಚಿತ್ರ ಬಿಡುಗಡೆಯಾದ ದಿನ ನಿರ್ದೇಶಕ ವಿಶ್ವ ಪತ್ರಿಕಾಗೋಷ್ಠಿ ಕರೆದಿದ್ದರು. ಬಿಡ್ಡ ಚಿತ್ರ ಸೆಟ್ಟೇರಿ ಮೂರು ವರ್ಷ ಕಳೆದರೂ ಬಿಡುಗಡೆ ತಡವಾದ ಬಗ್ಗೆ ಅವರು ಹೇಳಿಕೊಂಡರು.
ಆದಿ ಲೋಕೇಶ್ ಕಾಲ್ಶೀಟ್ ಸಿಕ್ಕಿತ್ತು. ಮುಹೂರ್ತ ಸಲೀಸಾಗಿ ಮುಗಿಯಿತು. ಆದರೆ ನಿರ್ಮಾಪಕ ರವಿ ಮಾತ್ರ ಅರ್ಧಕ್ಕೆ ಕೈ ಚೆಲ್ಲಿದರು. ಅವರ ಮಗನೇ ನಾಯಕನಾಗಬೇಕೆನ್ನುವುದು ಅವರ ಬಯಕೆಯಾಗಿತ್ತು. ಆದರೆ ಜೋಗಿ ನಂತರ ಬಿಡ್ಡ ಎಂಬ ಹೆಸರಿನಿಂದ ಆದಿ ಪ್ರಸಿದ್ಧರಾದರು. ನಿರ್ಮಾಪಕರು ಮಗನನ್ನು ಮುಂದೆ ಬಿಟ್ಟು ಕ್ಯಾತೆ ತೆಗೆದರು ಎಂದು ವಿಶ್ವ ಹೇಳುತ್ತಿದ್ದರೆ ಅವರ ಮುಖದಲ್ಲಿ ಬೇಸರ ಮೂಡಿ ಮರೆಯಾಗುತಿತ್ತು.
ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ನಿರ್ಮಾಪಕರು ಟಿವಿ, ಸ್ಯಾಟ್ಲೈಟ್ ಹಕ್ಕುಗಳನ್ನು ಮಾರಿ ಬಿಟ್ಟರು. ಕೊನೆಗೆ ಸ್ನೇಹಿತ ಚಂದ್ರಕುಮಾರ್ ಬಿಡುಗಡೆಗೆ ಬೆನ್ನೆಲುಬಾಗಿ ನಿಂತರು. ಈ ಮಧ್ಯೆ ಆದಿ ಕೂಡಾ ಬಿಜಿಯಾದರು. ದುನಿಯಾ ಬಿಡುಗಡೆಯಾದ ನಂತರ ರಂಗಾಯಣ ರಘು ಕೂಡಾ ಕೆಲ ತಿಂಗಳು ಆಟವಾಡಿಸಿದರು ಎಂದು ತಾವು ಪಟ್ಟ ಕಷ್ಟವನ್ನು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಚಂದ್ರಕುಮಾರ್ ಹಾಗೂ ವಿಶ್ವನನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ.