ಗೋವಾದಲ್ಲಿನ ಚಿತ್ರೋತ್ಸವ ಮುಗಿದಿದೆ. ಕನ್ನಡ ಚಿತ್ರರಂಗದಿಂದ ಅಲ್ಲಿಗೆ ಹೋಗಿದ್ದವರೆಲ್ಲ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ. ಈ ಬಾರಿ ಅವರೆಲ್ಲ ಅಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆಯ ಮಾತುಗಳಾನ್ನಾಡಿದ್ದಾರೆ. ನಟಿ ತಾರಾ ಹಾಗೂ ವೇಣು ದಂಪತಿ ಗೋವಾದಿಂದ ಬಂದು ಅಲ್ಲಿನ ವ್ಯವಸ್ಥೆಯನ್ನು ಕೊಂಡಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಇಂಥದ್ದೊಂದು ಶಿಸ್ತುಬದ್ಧ ಉತ್ಸವ ನೋಡಿದ್ದೇ ಅಪರೂಪ. ಅದರಲ್ಲೂ ಕನ್ನಡಿಗರಿಗೆ ವಿಶೇಷವಾದ ಗೌರವ, ಆದರ, ಆತಿಥ್ಯ ಎಲ್ಲವೂ ಇತ್ತು. ಉಳಿಯಲು, ಸಭೆಯಲ್ಲಿ ಕೂರಲು ಪ್ರತ್ಯೇಕ ಜಾಗವನ್ನು ಮೀಸಲಿಟ್ಟಿದ್ದರು. ಎಲ್ಲರೂ ಪ್ರೀತಿಯಿಂದ ಉಪಚರಿಸಿದರು. ಕಳೆದ ಬಾರಿ ನಾವು ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದೆವು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ತಾರಾ ದಂಪತಿ.
ಈ ಬಾರಿ ವೇಣು ಅವರ ಕ್ಯಾಮರಾ ಕೈಚಳಕದ ಬಗ್ಗೆ ಎಲ್ಲ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಗಂಗಾ ಕಾವೇರಿ ಚಿತ್ರದಲ್ಲಿ ಅವರು ಹಿಮಾಲಯವನ್ನು ತೋರಿಸಿದ ಪರಿ ಅದ್ಬುತವಾಗಿದೆ. ಥಿಯೇಟರ್ನಲ್ಲೇ ಪ್ರೇಕ್ಷಕ ಚಳಿಯನ್ನು ಅನುಭವಿಸುವಂತಾಗಿದೆ ಎಂಬ ಮಾತುಗಳು ಕೂಡಾ ಕೇಳಿ ಬಂದಿವೆ. ಚಿತ್ರದ ನಿಜವಾದ ನಾಯಕ ವೇಣು ಎಂದು ಎಲ್ಲರು ಹೇಳುತ್ತಿದ್ದಾರೆ. ಅಂತೂ ಈ ದಂಪತಿ ಈಗ ತುಂಬಾ ಖುಷಿಯಲ್ಲಿದ್ದಾರೆ.