ಗಂಗಾ ಕಾವೇರಿ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಚಿತ್ರತಂಡ ಪತ್ರಿಕಾಗೋಷ್ಠಿ ಕರೆದು ತಮ್ಮ ಸಂತಸ ಹಂಚಿಕೊಂಡಿತು. ಮೊದಲ ದಿನವೇ ಫ್ಯಾಮಿಲಿ ಪ್ರೇಕ್ಷಕರು ಬಂದಿದ್ದಾರೆ. ಮುಂದೆ ಅವರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಸಂತೋಷದಿಂದ ಹೇಳಿಕೊಂಡಿತು ಚಿತ್ರತಂಡ.
ನಾಯಕ ಅಕ್ಷಯ್ ಕುಲು-ಮನಾಲಿಯಲ್ಲಿ 250 ಅಡಿ ಎತ್ತರದಿಂದ ತಣ್ಣನೆಯ ನೀರಿಗೆ ಜಿಗಿದದ್ದೊಂದು ಪವಾಡ ಎಂದು ಬಣ್ಣಿಸಿದರು. ಆ ಸನ್ನಿವೇಶ ಚಿತ್ರಕ್ಕೆ ಸೇರಿಕೊಂಡಿದ್ದು ತಡವಾಗಿ. ನಾನೇನಾದರೂ ಚಿತ್ರದಲ್ಲಿ ನಟಿಸಿದ್ದೇನೆ ಎಂದರೆ ಅದಕ್ಕೆ ಕಾರಣ ನಮ್ಮ ತಂದೆ ವೆಂಕಟಪ್ಪ ಹಾಗೂ ನಿರ್ದೇಶಕ ವಿಷ್ಣುಕಾಂತ್ ಎಂದರು ಅಕ್ಷಯ್.
ಅನೇಕ ವರ್ಷಗಳ ನಂತರ ಚಿತ್ರರಂಗಕ್ಕೆ ಮರಳಿ ಬಂದ ರೂಪಾದೇವಿ, ತಾವು ಈ ಚಿತ್ರದಲ್ಲಿ ನಟಿಸಲು ಕಾರಣ ನಿರ್ದೇಶಕ ವಿಷ್ಣುಕಾಂತ್ ಎಂದರು. ನಾಯಕಿಯರು, ಅಕ್ಷಯ್ ಪಟ್ಟ ಶ್ರಮ ಹಾಗೂ ಕೆ. ಕಲ್ಯಾಣ್ ಅವರ ಸಂಗೀತವನ್ನು ಮನಸಾರೆ ಕೊಂಡಾಡಿದರು ವಿಷ್ಣುಕಾಂತ್. ಸಂಗೀತ ನಿರ್ದೇಶಕ ಮುಗುಳ್ನಗುತ್ತಾ ಕುಳಿತಿದ್ದರು.