ಉಪ್ಪಿ ಪಾಳಯದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಬಹು ಕಾಲದಿಂದ ನಿರೀಕ್ಷಿಸುತ್ತಿದ್ದ ಉಪ್ಪಿ ಅವರ ಕಥೆ ಚಿತ್ರಕಥೆ ಇರುವ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಚಿತ್ರಕ್ಕೆ 'ಚಿತ್ರಾನ್ನ ಚಿತ್ರಾನ್ನ..' ಹಾಡಿನ ಮೊದಲ ಸಾಲನ್ನೇ ಟೈಟಲ್ ಆಗಿರಿಸುವ ಸಾಧ್ಯತೆ ಇದೆ.
ಹಿಂದಿನಿಂದಲೂ ಉಪ್ಪಿಗೆ ಬರೆಯುವುದೆಂದರೆ ತುಂಬಾ ಇಷ್ಟ. ಈಗ ಆ ಕೆಲಸಕ್ಕೆ ಮರಳಿದ್ದಾರೆ. ಇವರು ಎ, ಉಪೇಂದ್ರ ಚಿತ್ರಗಳ ನಂತರ ಬೇರೆ ಯಾವುದೇ ಚಿತ್ರಗಳಿಗೆ ಚಿತ್ರಕಥೆ ಬರೆಯಲಿಲ್ಲ. ಈಗ ಹೊಸ ಚಿತ್ರಕ್ಕೆ ಇವರೇ ನಾಯಕ. ಆದರೆ ನಿರ್ದೇಶನ ಮಾತ್ರ ತೆಲುಗಿನ ಸಂಪತ್ ಅವರದು. ಕೆ.ವಿ.ರೆಡ್ಡಿ ನಿರ್ಮಾಪಕರು.
ಈ ಚಿತ್ರ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ತಯಾರಾಗುತ್ತಿದೆ. ತೆಲುಗಿನ ವೇಣು ಮತ್ತೊಬ್ಬ ನಾಯಕ. ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ನಾಯಕಿ. ಆದರೆ ಈ ಚಿತ್ರದ ಬಗ್ಗೆ ನನಗೇನೂ ಗೊತ್ತಿಲ್ಲ ಎನ್ನುತ್ತಾರೆ ಉಪ್ಪಿ. ತೆಲುಗು ಹಾಗೂ ಕನ್ನಡದಲ್ಲಿ ಬರುತ್ತಿರುವ ಈ ಚಿತ್ರ ಬಿಗ್ ಬಜೆಟ್ನ ಚಿತ್ರ ಎನ್ನಲಾಗುತ್ತಿದೆ. ಇದು ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಒಂದು ಮೂಲದ ಪ್ರಕಾರ ಡಿ.10 ರಿಂದ ಚಿತ್ರೀಕರಣ ಆರಂಭವಾಗಲಿದೆ.