ಹೃದಯ ಶಿವ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅದು ಕೂಡಾ ಮೊದಲ ಸಲ. ಅವರು ವಿಶಿಷ್ಟ ಹಾಡುಗಳ ಆಲ್ಬಂ ರೂಪಿಸಲು ಹೊರಟ್ಟಿದ್ದಾರೆ. ಒಂಭತ್ತು ಪ್ರೇಮಗೀತೆಗಳು ಈ ಆಲ್ಬಂನಲ್ಲಿರುತ್ತವೆ. ಆಲ್ಬಂಗೆ ಮೊದಲ ಸಲ ಎಂದು ನಾಮಕರಣವಾಗಿದೆ. ಮನಸು ಕೈ ಕೊಟ್ಟಾಗ ಎಂಬ ಟ್ಯಾಗ್ಲೈನ್ ಕೂಡಾ ಇದೆ.
"ಮುಂಬೈನಲ್ಲಿರುವ ಸೂರಜ್ ಕಮಲ್ ಈ ಗೀತೆಗಳ ಸಂಗೀತ ಸಂಯೋಜಿಸಿದ್ದಾರೆ. ಇದು ಪ್ರೇಮಗೀತೆಗಳ ಗುಚ್ಛ. ಆಲ್ಬಂನಲ್ಲಿ ಒಂಭತ್ತು ಹಾಡುಗಳಿವೆ. ಗಾಯಕರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ, ರಾಜೇಶ್ ಕೃಷ್ಣನ್, ಹೇಮಂತ್, ಎಲ್.ಎನ್. ಶಾಸ್ತ್ತ್ರಿ, ಚೇತನ್ ಹಾಗೂ ಹೊಸ ಹುಡುಗರಾದ ಚಿನ್ಮಯ ಮತ್ತು ಸುಚೇತನ್ ಹಾಡಲಿದ್ದಾರೆ" ಎಂದರು ಹೃಯಶಿವ.
ಸಿನಿಮಾ ಹಾಡು ಬರೆಯುವಾಗ ನಿರ್ದೇಶಕರು ಹೇಳಿದಂತೆ ಕೇಳಬೇಕಾಗುತ್ತದೆ. ಆದರೆ ನಾನಿಲ್ಲಿ ಸ್ವತಂತ್ರ. ಯಾರ ಹಂಗಿಲ್ಲದೆ ನನ್ನ ಭಾವನೆಗಳನ್ನು ಹರವಿಕೊಂಡಿದ್ದೇನೆ ಎಂದರು. ಓ ಮನಸೇ ಚಿತ್ರ ನಿರ್ಮಿಸುತ್ತಿರುವ ವಿಶ್ವನಾಥ್ ಇದರ ಹಣಕಾಸಿನ ಹೊಣೆ ಹೊತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಆಡಿಯೊ ಆಲ್ಬಂ ಸಿದ್ಧವಾಗಲಿದೆ. ಆಡಿಯೊಗೆ ಸಿಗುವ ಪ್ರತಿಕ್ರಿಯೆ ನೋಡಿ ವಿಡಿಯೊ ಸಿದ್ಧಪಡಿಸಲಾಗುತ್ತದೆ ಎಂದರು ಹೃದಯ ಶಿವ.