ಚಿತ್ರರಂಗ ಎಂದ ಮೇಲೆ ಅಲ್ಲಿ ಚಿತ್ರತಂಡದ ನಡುವೆ ಮುನಿಸು, ಸಣ್ಣ-ಪುಟ್ಟ ಗೊಂದಲಗಳು ಸಹಜ. ಅದನ್ನು ನಂತರದ ಕೆಲವೇ ಕ್ಷಣಗಳಲ್ಲಿ ಮರೆಯುತ್ತಾರೆ. ಆದರೆ ನಟಿ ಹರಿಪ್ರಿಯಾ ಮಾತ್ರ ಒಮ್ಮೆ ಕಿರಿಕ್ಕಾದರೆ ಅದನ್ನೇ ಮನಸ್ಸಲ್ಲಿಟ್ಟುಕೊಂಡು ಮಂಡಿಗೆ ತಿನ್ನುತ್ತಿರುತ್ತಾರೆ.
ಅವರಿಗೂ ಈ ಸಂಭಾಷಣೆ ಚಿತ್ರ ತಂಡಕ್ಕೂ ಹಿಂದೊಮ್ಮೆ ನಡೆದ ಸಣ್ಣ ಮನಸ್ತಾಪವನ್ನು ಇನ್ನೂ ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ. ಇದರಿಂದಾಗಿ ಮೊನ್ನೆ ನಡೆದ ಈ ಸಂಭಾಷಣೆ ಚಿತ್ರದ ಧ್ವನಿಸುರುಳಿ ಕಾರ್ಯಕ್ರಮಕ್ಕೂ ಬರಲಿಲ್ಲ. ಹಿಂದೊಮ್ಮೆ ಇದೇ ಚಿತ್ರದ ಪತ್ರಿಕಾಗೋಷ್ಠಿಗೂ ಬರಲಿಲ್ಲ.
ಈ ಬಗ್ಗೆ ಕಾರಣ ಕೇಳಿದರೆ ನಿರ್ಮಾಪಕರು ನನ್ನನ್ನು ಕರೆಯಲಿಲ್ಲ ಎನ್ನುತ್ತಾರೆ. ಆದರೆ ನಿರ್ಮಾಪಕ ಶ್ರೀನಿವಾಸ್ ಪೂಜಾರ್ ಇದನ್ನು ಅಲ್ಲಗಳೆದಿದ್ದಾರೆ. ಎರಡು ವಾರದ ಹಿಂದೆ ಸ್ವತಃ ನಾನೇ ಫೋನ್ ಮಾಡಿ ಬರಲೇಬೇಕು ಎಂದು ಹೇಳಿದ್ದೇನೆ. ಅದೂ ಈ ಸಂಭಾಷಣೆ ಚಿತ್ರದ ಮೇಲಾಣೆ ಎನ್ನುತ್ತಾರೆ. ಹತ್ತು ದಿನಗಳ ಹಿಂದೆ ಇವರ ಪ್ರೊಡಕ್ಷನ್ ಮ್ಯಾನೇಜರ್ ಪ್ರಿಯಾರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಅವರು ಫೋನ್ ಎತ್ತಲಿಲ್ಲ.
ಆದರೆ ಈ ಸಂಭಾಷಣೆ ಚಿತ್ರದ ಧ್ವನಿ ಸುರುಳಿ ಬಿಡುಗಡೆ ದಿನವೇ ಚೆಲುವೆಯೇ ನಿನ್ನ ನೋಡಲು ಚಿತ್ರದ ಮುಹೂರ್ತಕ್ಕೆ ಬಂದಿದ್ದರು. ನಂತರ ನಡೆದ ಮತ್ತೊಂದು ಪತ್ರಿಕಾಗೋಷ್ಠಿಗೂ ಹೋಗಿದ್ದರು. ಆದರೆ ಸಂಭಾಷಣೆಯ ನಿರ್ಮಾಪಕರ ಕಿವಿಗೆ ಹೂ ಇಟ್ಟಿದ್ದಾರೆ.