ಮಾತಿನ ಮನೆಯಲ್ಲಿ 'ಅಂಜದಿರು'

ಶನಿವಾರ, 13 ಡಿಸೆಂಬರ್ 2008( 17:13 IST )
ಹಿರಿಯ ನಟ ಕೃಷ್ಣೇಗೌಡ ಅವರ ಪುತ್ರ ಮುರಳೀಧರ್ ನಿರ್ಮಿಸುತ್ತಿರುವ ಅಂಜದಿರು ಚಿತ್ರಕ್ಕೀಗ ಡಬ್ಬಿಂಗ್ ನಡೆಯುತ್ತಿದೆ. ತಮಿಳಿನ ಅಂಜಾದೆ ಚಿತ್ರವನ್ನು ನಿರ್ದೇಶಕ ಜನಾರ್ದನ್ ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರಿಸಿದ್ದಾರೆ. ಪೊಲೀಸ್ ಕಾಲೊನಿಯೊಂದರಲ್ಲಿ ನಡೆಯುವ ಇಬ್ಬರು ಸ್ನೇಹಿತರ ಕಥೆಯಿದು. ಇಬ್ಬರು ಭಿನ್ನ ವ್ಯಕ್ತಿತ್ವದ ಯುವಕರ ಸ್ನೇಹ, ಹಗೆತನ, ಪ್ರೀತಿ ಚಿತ್ರದ ಕಥಾವಸ್ತು.
ನಿರ್ಮಾಪಕ ಮುರಳೀಧರ್ ಪುತ್ರ ಮಧುಸೂದನ್ ದ್ವಿತೀಯ ನಾಯಕರಾಗಿ ನಟಿಸಿದ್ದಾರೆ. ಒರಟ ಪ್ರಶಾಂತ್ ಚಿತ್ರದಲ್ಲಿ ನಾಯಕರಾಗಿದ್ದಾರೆ. ನಟ ದ್ವಾರಕೀಶ್ ಚಿತ್ರದಲ್ಲಿ ಮೊದಲ ಬಾರಿಗೆ ಖಳನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಇದೊಂದು ವಿಶಿಷ್ಟ ಅನುಭವ. ಚಿತ್ರದಲ್ಲಿ ಸೆಂಟಿಮೆಂಟ್ ಚೆನ್ನಾಗಿ ವರ್ಕ್ಔಟ್ ಆಗಿದ್ದು, ಪ್ರೇಕ್ಷಕರು ಖಂಡಿತಾ ಇದನ್ನು ಮೆಚ್ಚಿಕೊಳ್ಳುತ್ತಾರೆ ಎಂದರು ದ್ವಾರಕೀಶ್.
ನಿರ್ದೇಶಕ ಜನಾರ್ದನ್ ಈ ಹಿಂದೆ ಬಾಯ್ ಫ್ರೆಂಡ್ ಚಿತ್ರ ನಿರ್ದೆಶಿಸಿದ್ದರು. ಚಿತ್ರಕ್ಕೆ ಸುಂದರ್ ಪಿ.ಬಾಬು ಸಂಗೀತ, ಸುಂದರ್ನಾಥ್ ಸುವರ್ನ ಛಾಯಾಗ್ರಹಣ, ರವಿವರ್ಮ ಸಾಹಸವಿದ್ದು, ಸುಮನ್ ರಂಗನಾಥ್ ಐಟಂ ಹಾಡೊಂದರಲ್ಲಿ ಕುಣಿದಿದ್ದಾರೆ. ಅಂಜದಿರು ನೋಡಲು ಪ್ರೇಕ್ಷಕರು ಅಂಜುತ್ತಾರೋ ಕಾದು ನೋಡಬೇಕು.