ಗಾಂಧಿನಗರದಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ವಿಷ್ಣುವರ್ಧನ್ ಅಭಿನಯದ 199ನೇ ಚಿತ್ರ 'ನಾನೇ ಬೇರೆ ನನ್ನ ಸ್ಟೈಲೇ ಬೇರೆ' ಚಿತ್ರದ ನಿರ್ದೇಶಕರು ಬದಲಾಗಿದ್ದಾರೆ. ಈ ಚಿತ್ರವನ್ನು ಸಿಹಿಕಹಿ ಚಂದ್ರು ನಿರ್ದೇಶಿಸಬೇಕಿತ್ತು. ಆದರೆ ಈಗ ಅವರ ಜಾಗಕ್ಕೆ ದಿನೇಶ್ ಬಾಬು ಬಂದಿದ್ದಾರೆ. ಟೈಟಲ್ನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಆದರೆ ಕಥೆ, ಚಿತ್ರಕಥೆ, ಸಂಭಾಷಣೆಯ ಮಾತ್ರ ದಿನೇಶ್ ಬಾಬು ಅವರದ್ದು.
ಈ ಹಿಂದೆ ವಿಷ್ಣು ಅವರನ್ನು ಸ್ಟೈಲಿಶ್ ಆಗಿ ತೋರಿಸುವುದರಲ್ಲಿ ದಿನೇಶ್ ಬಾಬು ಕ್ಲಿಕ್ಕಾಗಿದ್ದಾರೆ. ಇದೇ ಉದ್ದೇಶದಿಂದ ನಿರ್ಮಾಪಕ ಮಂಜು ತಮ್ಮ ಚಿತ್ರದ ಹೊಣೆಯನ್ನು ದಿನೇಶ್ ಬಾಬುಗೆ ವಹಿಸಿದ್ದಾರೆ ಎಂಬುದು ಗಾಂಧಿನಗರ ಪಂಡಿತರ ಲೆಕ್ಕಾಚಾರ.
ಮೊದಲು ಚಿತ್ರಕ್ಕೆ ಹಾಸ್ಯದ ನಿರೂಪಣೆಯಿರುತ್ತದೆ ಎನ್ನಲಾಗಿತ್ತು. ಇದೀಗ ಚಿತ್ರಕಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಸಾಹಸಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ವಿಷ್ಣು ಅವರ ಸಾಹಸ ಸಿಂಹ ಇಮೇಜಿಗೆ ತಕ್ಕಂತೆ ಈ ಚಿತ್ರ ನಿರ್ಮಿಸುತ್ತೇವೆ. ಪ್ರೇಕ್ಷಕರು ಚಿತ್ರದಲ್ಲಿ ಮೈ ನವಿರೇಳಿಸುವಂತಹ ಸಾಹಸ ದೃಶ್ಯಗಳನ್ನು ನೋಡಬಹುದೆನ್ನುತ್ತಾರೆ ನಿರ್ಮಾಪಕ ಮಂಜು.