ಕನ್ನಡದಲ್ಲಿ ಪ್ರೇಮಕಥೆಯ ಚಿತ್ರಗಳಿಗೆ ಕೊರತೆಯಿಲ್ಲ. ಆದರೆ ಈಗ ಹೊಸ ಚಿತ್ರವೊಂದು ಬರುತ್ತಿದೆ. ಇದು ಪ್ರೀತಿಯ ನಂತರದ ಕಥೆಯನ್ನು ಹೇಳುತ್ತದೆ. ಪರಸ್ಪರ ಬಿಟ್ಟಿರಲಾರದ ಸ್ಥಿತಿಯಲ್ಲಿರುವ ಪ್ರೇಮಿಗಳು ಒಂದು ಸಣ್ಣ ಮನಸ್ತಾಪದಿಂದಾಗಿ ಬೇರಾಗುತ್ತಾರೆ. ಕಾರಣ ಅರಿಯುವ ವ್ಯವಧಾನ ಅವರಿಗಿರುವುದಿಲ್ಲ. ಇದರಿಂದ ಅವರು ಎಷ್ಟು ನೋವು ಅನುಭವಿಸುತ್ತಾರೆ ಎಂಬುದನ್ನು ಜೋಕಾಲಿ ಚಿತ್ರದಲ್ಲಿ ತೋರಿಸಲಾಗುತ್ತದೆ ಎಂದರು ನಿರ್ದೇಶಕ ದೀಪಕ್.
ಚಿತ್ರಕ್ಕೆ ಈಗ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಮುಂದಿನ ಏಳೆಂಟು ದಿನಗಳಲ್ಲಿ ಹಾಡುಗಳು ಚಿತ್ರೀಕರಣ ಆರಂಭವಾಗಲಿದೆ. ಪ್ರೇಮಿಗಳು ಪ್ರೀತಿಗೆ ಮೋಸ ಮಾಡುತ್ತಾರೆಯೇ ವಿನಾಃ ಪ್ರೀತಿ ಪ್ರೇಮಿಗಳಿಗೆ ಯಾವತ್ತೂ ಮೋಸ ಮಾಡುವುದಿಲ್ಲ ಎಂಬುದು ಚಿತ್ರದ ಕಥಾ ಹಂದರ.
ಪ್ರೀತಿಯನ್ನು ನಿರಾಕರಿಸಿದಳೆಂದು ನಾಯಕಿಯ ಮೇಲೆ ವಿನಾಕಾರಣ ದ್ವೇಷ ಬೆಳೆಸಿಕೊಳ್ಳುವ ನಾಯಕಿನಿಗೆ ಕೊನೆಯಲ್ಲಿ ತನ್ನ ತಪ್ಪಿನ ಅರಿವಾಗುತ್ತದೆ. ಇಂದಿನ ಯುವಕರ ಮನಸ್ಥಿತಿಗೆ ಒಪ್ಪುವಂತಹ ಕಥೆಯನ್ನು ಆಯ್ಕೆಮಾಡಿಕೊಂಡಿದ್ದು, ಪ್ರೇಕ್ಷಕರಿಗೆ ಎಲ್ಲಿಯೂ ಬೇಸರವಾಗದಂತೆ ಚಿತ್ರ ನಿರೂಪಿಸಿದ್ದೇವೆ. ಚೆನ್ನೈ ಮೂಲದ ಉದಯತಾರಾ ಚಿತ್ರದ ನಾಯಕಿ. ಗೌರಿಶಂಕರ್ ನಾಯಕ. ರಂಗಾಯಣ ರಘು, ರವಿಕಾಳೆ, ಉಮಾಶ್ರೀ ಪೋಷಕ ಪಾತ್ರಗಳಿಗೆ ಘನತೆ ತಂದುಕೊಟ್ಟಿದ್ದಾರೆ ಎಂದರು ನಿರ್ದೇಶಕ ದೀಪಕ್. ದೀಪಕ್ ಹಿಂದೆ ಅನೇಕ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದರು. ಈ ಚಿತ್ರವನ್ನು ಅಣಜಿ ನಾಗರಾಜ್ ನಿರ್ಮಿಸುತ್ತಿದ್ದಾರೆ.