ನಟ ಕರಿಬಸವಯ್ಯ 'ವೆಂಕಟ ಇನ್ ಸಂಕಟ' ಚಿತ್ರದಲ್ಲಿ ಸದಾ ಮುಖ ಊದಿಸಿಕೊಂಡಿರುತ್ತಾರಂತೆ. ಚಿತ್ರದಲ್ಲಿ ಅವರಿಗೆ ಉಪಪ್ರಾಂಶುಪಾಲ ಗೋಪಿನಾಥ್ ಪಾತ್ರ. ಎಲ್ಲರ ಮೇಲೂ ಕೋಪ ಮಾಡಿಕೊಳ್ಳುವ ಅವರ ಗುಣಕ್ಕೆ ಅನ್ವಯಿಸುವಂತೆ ಕೋಪಿನಾಥ್ ಎಂದು ಕರೆಯುತ್ತಾರಂತೆ. ಅವರ ಸಿಡುಕನ್ನು ಚಿತ್ರದ ಪಾತ್ರಗಳೆಲ್ಲ ದುರುಪಯೋಗ ಪಡಿಸಿಕೊಳ್ಳುತ್ತವಂತೆ.
ಕೆಎ 99 ಬಿ 333 ಚಿತ್ರದ ಅಪರೂಪದ ಪಾತ್ರಗಳ ಬಗ್ಗೆ ಕರಿಬಸವಯ್ಯ ತುಂಬಾ ಥ್ರಿಲ್ ಆಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಅನಾಥ ಹೆಣಗಳಿಗೆ ಅಂತಿಮ ಸಂಸ್ಕಾರ ನಡೆಸುವ ವೀರಭದ್ರ ಅವರ ಪಾತ್ರವನ್ನು ಆ ಚಿತ್ರದಲ್ಲಿ ಸೃಷ್ಟಿಸಲಾಗಿದೆ. ಅನಾಥ ಶವಗಳಿಗೆ ಸಂಸ್ಕಾರ ನಡೆಸುವ ಆ ಪಾತ್ರದಲ್ಲಿ ನಟಿಸುವಾಗ ಕರಿಬಸವಯ್ಯ ತುಂಬಾ ಭಾವುಕರಾಗಿದ್ದರಂತೆ.
ಅಂದಹಾಗೆ ಕರಿಬಸವಯ್ಯ ಕೇವಲ ನಟನೆಯಷ್ಟೇ ಅಲ್ಲದೇ ಹರಿಕಥಾ ವಾಚನವನ್ನು ಕೂಡಾ ನಡೆಸಿಕೊಡುತ್ತಾರೆ. ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚು ಹರಿಕಥಾ ಪ್ರಸಂಗವನ್ನು ನಡೆಸಿಕೊಟ್ಟಿದ್ದಾರೆ. ಇದು ಇವರಿಗೆ ವಂಶಪಾರಂಪರ್ಯವಾಗಿ ಬಂದಿದೆ. ಚಿಕ್ಕಂದಿನಲ್ಲಿ ಅಜ್ಜ ಹಾಗೂ ಅಪ್ಪನ ಜೊತೆ ಹರಿಕಥೆಗೆ ಹೋಗುತ್ತಿದ್ದರಂತೆ. ಇದೀಗ ಆ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಾರಂತೆ.