ಮಸ್ತ್ ಮಜಾ ಮಾಡಿ’ ಚಿತ್ರಕ್ಕೆ ಪ್ರೇಕ್ಷಕರಿಂದ ದೊರೆತಿರುವ ಅಭೂತಪೂರ್ವ ಪ್ರೋತ್ಸಾಹ ಕಂಡು ಚಿತ್ರತಂಡ ಎದೆಯುಬ್ಬಿಸಿಕೊಂಡು ತಿರುಗುತ್ತಿದೆ. ಚಿತ್ರದ ನಿರ್ಮಾಪಕರಾದ ಸೌಂದರ್ಯ ಜಗದೀಶ್, ಅಣಜಿ ನಾಗರಾಜ್ ಮತ್ತು ಪ್ರತಾಪ್ ಸಹಜವಾಗಿ ಖುಷಿಯಾಗಿದ್ದಾರೆ.
ಎರಡು ತಿಂಗಳಿಂದ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಬರುತ್ತಿರಲಿಲ್ಲ. ಆದರೆ ನಮ್ಮ ಸಿನಿಮಾ ಬಿಡುಗಡೆಯಾದ ಕರ್ನಾಟಕದ ಐವತ್ತು ಕೇಂದ್ರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎನ್ನುತ್ತಾ ಸಂಭ್ರಮಿಸುತ್ತಾರೆ ಜಗದೀಶ್. ಚಿತ್ರ ನೋಡಿದ ಜನ ಸಿನಿಮಾ ನೋಡಿ ಮಸ್ತ್ ಮಜಾ ಮಾಡಿದ್ದಾರೆ ಎಂದರು.
ಐದಾರು ತಿಂಗಳುಗಳ ಹಿಂದೆ ಯಾರೆಂದೇ ಗೊತ್ತಿಲ್ಲದ ವ್ಯಕ್ತಿ ಈ ಮಟ್ಟ ತಲುಪಿದ್ದರ ಬಗ್ಗೆ ಹೆಮ್ಮ ತೋಡಿಕೊಂಡರು ನಿರ್ದೇಶಕ ಅನಂತರಾಜು. ಅದೆಲ್ಲಾ ಹಾಗಿರಲಿ. ನಟ ವಿಜಯ್ ರಾಘವೇಂದ್ರ ಜನರ ಮಧ್ಯೆ ಕುಳಿತು ಚಿತ್ರ ನೋಡಿ ಎಂಜಾಯ್ ಮಾಡುತ್ತಿದ್ದ ರೀತಿ ನೋಡಿ ಪುಳಕಿತರಾಗಿದೆ ಚಿತ್ರತಂಡ. ಅಷ್ಟೇ ಅಲ್ಲ. ಅಂತಾರಾಷ್ಟ್ರೀಯ ಮಟ್ಟದ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ನಮ್ಮ ಚಿತ್ರ ನೋಡಲು ಯಾರು ಬರುತ್ತಾರೆ ಎಂದು ಇನ್ನೊರ್ವ ನಟ ದಿಗಂತ್ ತಲೆಕೆಡಿಸಿಕೊಂಡಿದ್ದರಂತೆ. ಏನೇ ಆಗಲಿ ಚಿತ್ರ ಪ್ರೇಕ್ಷಕರನ್ನು ಮಸ್ತ್ ಮಜಾ ಮಾಡಿಸಿದೆ.