ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟರೊಳಗೆ ನಿಷೇಧಾಜ್ಞೆ ರಾಜ್ಯಾದ್ಯಂತ ಜಾರಿಯಾಗಬೇಕಿತ್ತು. ಹೌದು ಪದ್ಮನಾಭ್ ನಿರ್ದೇಶನದ ನಿಷೇಧಾಜ್ಞೆ ಚಿತ್ರ ಸಧ್ಯಕ್ಕೆ ಕಾರಣಾಂತರಗಳಿಗೆ ಬಿಡುಗಡೆ ಸಾಧ್ಯವಾಗುತ್ತಿಲ್ಲ.
ಹಾಗಾಂತ, ಪದ್ಮನಾಭ್ ಸುಮ್ಮನೆ ಕೈ ಕಟ್ಟಿ ಕುಳಿತಿಲ್ಲ. ಆಗಲೇ ಅವರು ಇನ್ನೊಂದು ಚಿತ್ರಕ್ಕೆ ಕತೆ, ಚಿತ್ರಕತೆ ಬರೆದು ಮುಗಿಸಿದ್ದಾರೆ. ಆ ಚಿತ್ರ ಜನವರಿ ಎರಡನೇ ವಾರದಲ್ಲಿ ಸೆಟ್ಟೇರಲಿದೆ. ಚಿತ್ರದ ಹೆಸರು ಪಿಸುಮಾತು. ಶ್ರೀರಾಮ ಮಾರುತಿ ಪಿಕ್ಚರ್ಸ್ ಬ್ಯಾನರ್ ನಡಿ ಅಶ್ವತ್ಥನಾರಾಯಣಗೌಡ ಮತ್ತು ಬಿ.ಕೆ. ರಾಮಣ್ಣ ನಿರ್ಮಿಸುತ್ತಿದ್ದಾರೆ.
ಚಿತ್ರಕ್ಕೆ ಈಗಾಗಲೇ ನಾಯಕರ ಆಯ್ಕೆ ಪೂರ್ಣಗೊಂಡಿದೆ. ಹೊಸ ಹುಡುಗರನ್ನು ಪದ್ಮನಾಭ್ ಪರಿಚಯಿಸುತ್ತಿದ್ದಾರೆ. ಮಾರುತಿ ಮತ್ತು ಶ್ರೀ ಹರ್ಷ ನಾಯಕರಾಗಿ ನಟಿಸುತ್ತಿದ್ದಾರೆ. ನಾಯಕಿಯರ ಹೆಸರು ಸಿಕ್ಕಿಲ್ಲ. ಉಳಿದಂತೆ ಸಂಗೀತ ನಿರ್ದೇಶಕರಾಗಿ ತಾಜ್ ಮಹಲ್ ಅಭಿಮಾನ್ ಇದ್ದಾರೆ. ನಿಷೇಧಾಜ್ಞೆ ಸಿದ್ದವಾಗುತ್ತಿರುವ ಹೊತ್ತಿನಲ್ಲೇ ಪದ್ಮನಾಭ್ ಮತ್ತೊಂದು ಚಿತ್ರ ನಿರ್ದೇಶಿಸುತ್ತಾರೆ ಎಂಬ ಪಿಸುಮಾತು ಗಾಂಧಿನಗರದಲ್ಲಿ ಹರಡಿಕೊಂಡಿತ್ತು. ಅದೀಗ ನಿಜವಾಗಿದೇ ಅಷ್ಟೇ.