ಒಂದು ಲೋಡ್ ಲೈಟಿಂಗ್ಸ್ ಕಂಡು ನಿರ್ದೇಶಕ ರಘುರಾಮ್ ಖುಷಿಯಾಗಿದ್ದಾರೆ. ಏನೆಂದು ಅರ್ಥವಾಗಿಲ್ವಾ? ರಘುರಾಂ ನಿರ್ದೇಶಿಸುತ್ತಿರುವ ಚೆಲುವೆಯೇ ನಿನ್ನ ನೋಡಲು ಚಿತ್ರಕ್ಕೆ ಬಾಲಿವುಡ್ನ ಖ್ಯಾತ ಛಾಯಾಗ್ರಾಹಕ ಕಬೀರ್ಲಾಲ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಅವರು ಇತರ ನಿರ್ದೇಶಕರಿಗಿಂತ ಡಿಫರೆಂಟ್.
ತಮ್ಮ ಛಾಯಾಗ್ರಾಹಣಕ್ಕಾಗಿ ಮುಂಬೈಯಿಂದ ಒಂದು ಲಾರಿ ತುಂಬಾ ಲೈಟಿಂಗ್ಸ್ ತರಿಸಿದ್ದಾರೆ. ಇದನ್ನು ಕಂಡು ನಿರ್ದೇಶಕ ರಘುರಾಂ ಖುಷಿಯೋ ಖುಷಿ. ಅವರು ಛಾಯಾಗ್ರಹಣ ಮಾಡುವಾಗ ಅದಕ್ಕೆ ಬೇಕಾದ ಅಗತ್ಯ ಸಾಮಾಗ್ರಿ ತರುವಲ್ಲಿ ಕಬೀರ್ಲಾಲ್ ಹಿಂದೇಟು ಹಾಕುವವರಲ್ಲ.
ನಿರ್ಮಾಪಕರಾದ ಸುರೇಶ್ ಕೂಡಾ ತುಂಬಾ ಖುಷಿಯಾಗಿದ್ದಾರೆ. ಖರ್ಚು ಎಷ್ಟಾದರೂ ಪರ್ವಾಗಿಲ್ಲ. ನಮ್ಮ ಶಿವಣ್ಣ ಚೆನ್ನಾಗಿ ಕಾಣಬೇಕು ಎನ್ನುತ್ತಾರೆ ಸುರೇಶ್. ಇವೆಲ್ಲ ಸಾಮಗ್ರಿಗಳನ್ನು ಜೋಡಿಸಿ ಶೂಟಿಂಗ್ ಮಾಡಲು ಸ್ವಲ್ಪ ಸಮಯ ತಗೊಳ್ಳುವುದರಿಂದ ಶೂಟಿಂಗ್ ತಡವಾಗುತ್ತದೆ.
ಆದರೂ ಬೇಜಾರಿಲ್ಲ. ಚಿತ್ರ ಚೆನ್ನಾಗಿ ಮೂಡಿಬರಬೇಕು ಎಂಬುದು ನಿರ್ದೇಶಕ ಹಾಗೂ ನಿರ್ಮಾಪಕರ ಅಭಿಪ್ರಾಯ. ಸುಮಾರು 10 ಕೋಟಿ ರೂ.ಗಿಂತಲೂ ಹೆಚ್ಚಿನ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಬೇರೆ ಬೇರೆ ದೇಶಗಳಲ್ಲಿ ಶೂಟಿಂಗ್ ಆಗಲಿದೆ. ಚಿತ್ರದಲ್ಲಿ ಶಿವರಾಜ್ ಕುಮಾರ್, ಹರಿಪ್ರಿಯಾ ನಟಿಸುತ್ತಿದ್ದಾರೆ.