ಚೇತನ್ ಈಗ ರವಿಚೇತನ್

ನಟ ಚೇತನ್ ತಮ್ಮ ಹೆಸರನ್ನು ರವಿಚೇತನ್ ಎಂದು ಬದಲಿಸಿಕೊಂಡಿದ್ದಾರೆ. ಮೊನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ದಿನದಿಂದ ಅವರು ತಮ್ಮನ್ನು ಈ ಹೆಸರಿನಿಂದಲೇ ಪರಿಚಯಿಸಿಕೊಳ್ಳುತ್ತಿದ್ದಾರೆ. ಸಂಖ್ಯಾಶಾಸ್ತ್ರದ ಅನ್ವಯ ಹೆಸರನ್ನು ಬದಲಿಸಿಕೊಂಡಿಲ್ಲ. ಚಿತ್ರರಂಗಕ್ಕೆ ಬಂದು ತುಂಬಾ ದಿನಗಳಾದರೂ ಒಂದು ದೊಡ್ಡ ಬ್ರೇಕ್ಗಾಗಿ ಕಾಯುತ್ತಿದ್ದೇನೆ. ಹೆಸರು ಬದಲಾದರೆ ಅದೃಷ್ಟ ಒಲಿಯಬಹುದೇನೋ ಎನ್ನುವ ಸೆಂಟಿಮೆಂಟ್ ಅಷ್ಟೇ. ಅಲ್ಲದೇ ಚಿತ್ರರಂಗದಲ್ಲಿ 'ಆ ದಿನಗಳು' ಚಿತ್ರದ ಚೇತನ್ ಇದ್ದಾರೆ. ಹಾಗಾಗಿ ಬದಲಾವಣೆ ಎನ್ನುತ್ತಾರೆ ಇವರು.ರವಿಚೇತನ್ ಹಿಂದೆ 'ಮಂದಾಕಿನಿ' ಚಿತ್ರದಲ್ಲಿ ನಟಿಸಿದ್ದರು. ಆದರೆ ಚಿತ್ರ ಮಾತ್ರ ಇನ್ನಿಲ್ಲದ ರೀತಿಯಲ್ಲಿ ಸೋಲುಂಡಿತ್ತು. ಈ ಚಿತ್ರದಲ್ಲಿ ನಟಿಸಿದ ಇವರಿಗೆ ನಿರ್ಮಾಪಕರು 75 ಸಾವಿರ ರೂ. ನೀಡಲು ಕೂಡಾ ಬಾಕಿ ಇದೆಯಂತೆ. 30 ದಿನದ ಕಾಲ್ಶೀಟ್ ಪಡೆದು 60 ದಿನ ದುಡಿಸಿಕೊಂಡರಂತೆ. ಈಗ ಇವರು ನಟಿಸಿರುವ 'ಮನಸ್ಸು ಕೊಟ್ಟಾಯ್ತು' ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿದಿದೆ.ಹಿರಿಯ ನಿರ್ದೇಶಕ ಜೋಸೈಮನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಅವರ ಪುತ್ರ ಜಿತೇಂದ್ರ ನಿರ್ದೇಶಿಸುತ್ತಿದ್ದಾರೆ. ವಿನೋದ್ಕುಮಾರ್ ಜೊತೆ ಅವರು 'ವೈರಿ' ಶೀರ್ಷಿಕೆಯ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಅವರು ನಟಿಸಿದ 'ಈ ಪ್ರೀತಿ ಒಂಥರಾ' ಚಿತ್ರ ನೆಲಕಚ್ಚಿತ್ತು. ಇದೀಗ ಅದೇ ಚಿತ್ರದ ನಿರ್ಮಾಪಕರು ಮತ್ತೊಂದು ಚಿತ್ರ ಮಾಡಲು ಯೋಚಿಸುತ್ತಿದ್ದಾರೆ. ಈ ಚಿತ್ರದಲ್ಲಿ ರವಿಚೇತನ್ ನಟಿಸಲಿದ್ದಾರೆ.