ಹಾಗೆ ಸುಮ್ಮನೆ ಚಿತ್ರದ ನಿರ್ದೇಶಕ ಪ್ರೀತಂ ಗುಬ್ಬಿ ಚಿತ್ರ ಬಿಡುಗಡೆಯಾದ ನಂತರ ಪತ್ರಿಕಾಗೋಷ್ಠಿ ಕರೆದು ತಮ್ಮ ಚಿತ್ರದ ಬಗ್ಗೆ ಒಂದಷ್ಟು ಹೇಳಿಕೊಂಡರು. ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಈ ಚಿತ್ರ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎಂದರು. ಮುಂಗಾರು ಮಳೆ ಸಿನಿಮಾದ ನಿರೀಕ್ಷೆಯ ಮಟ್ಟವನ್ನು ತಲುಪಲು ಪ್ರಯತ್ನ ಮಾಡಿರುವುದಾಗಿ ಹೇಳಿಕೊಂಡರು. ಅದು ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ ಎಂದು ಪ್ರೇಕ್ಷಕರು ಹೇಳಬೇಕು. ಅದಕ್ಕಾಗಿ ಕಾಯುತ್ತಿದ್ದೇನೆ ಎಂದರು.
ಒಂದು ಒಳ್ಳೆಯ ಚಿತ್ರ ಮಾಡಬೇಕೆಂಬ ಆಸೆಯಿಂದ ಲೊಕೇಷನ್ ಹುಡುಕಲು ಇಡೀ ರಾಜ್ಯವನ್ನು ಅವರು ಸುತ್ತಿದ್ದಾರಂತೆ. ಕ್ಯಾಮೆರಾಮನ್ ಕೃಷ್ಣ ಅವರ ಜೊತೆ ಹೊಸ ಸ್ಥಳವನ್ನು ಹುಡುಕಲು ಸುಮಾರು ಐದು ಸಾವಿರ ಕಿ.ಮೀ ಅಲೆದಾಡಿದರಂತೆ. ಹೊಸ ಮುಖದ ಶೋಧಕ್ಕೂ ಹೆಚ್ಚು ಕಮ್ಮಿ ಅವರು ಅಷ್ಟೇ ಕಷ್ಟಪಟ್ಟರಂತೆ. ನಾಯಕ ಕಿರಣ್ ಮೊದಲ ಸಲ ರಿಜೆಕ್ಟ್ ಆಗಿದ್ದರಂತೆ. ನಂತರ ಸ್ಕ್ರೀನ್ ಟೆಸ್ಟ್ ಮಾಡಿ, ಎರಡು ಸಲ ಮೀಟಿಂಗ್ ಮಾಡಿ ಈ ಪಾತ್ರಕ್ಕೆ ಹೊಂದುತ್ತಾರೆ ಎಂದು ನಿರ್ಧರಿಸಿ ಆಯ್ಕೆ ಮಾಡಲಾಯಿತಂತೆ.
ನಾಯಕ ನಟ ಕಿರಣ್ ಈ ಸಿನಿಮಾಕ್ಕಾಗಿ ಎರಡು ತಿಂಗಳ ಕಾಲ ತಮ್ಮನ್ನು ಮಾನಸಿಕವಾಗಿ ಕೃಷ್ಣ ಮತ್ತು ಪ್ರೀತಂ ಸಿದ್ಧಗೊಳಿಸದ್ದಾಗಿ ಹೇಳಿದರು. ನಾಯಕಿ ಸುಹಾಸಿ ಸುಮ್ಮನೆ ನಗು ಬೀರಿದರು. ಶರತ್ ಬಾಬು ಹಲವು ವರ್ಷಗಳ ನಂತರ ಪ್ರೇಕ್ಷಕರ ಜೊತೆ ಕುಳಿತು ನೋಡಿದ್ದು, ಈ ಚಿತ್ರವನ್ನಂತೆ. ಸಾಮಾನ್ಯವಾಗಿ ಪ್ರೇಮಿಗಳು ಕಷ್ಟ ಎದುರಿಸುತ್ತಾರೆ. ಆದರೆ ಇಲ್ಲಿ ಪ್ರೀತಿಗೆ ಎಲ್ಲರೂ ಪ್ರೋತ್ಸಾಹಿಸುತ್ತಾರೆ ಎಂದರು.