'ಸುನಾಮಿ'ಗೆ ಹಿಂಸೆಯ ಟ್ರಬಲ್

ಮಂಗಳವಾರ, 6 ಜನವರಿ 2009( 20:17 IST )
ಚಿತ್ರ ನಿರ್ಮಾಣದ ಕೊನೆಯಲ್ಲಿ ಹೆಚ್ಚಿನ ಚಿತ್ರಗಳಿಗೆ ಸೆನ್ಸಾರ್ ಸಮಸ್ಯೆ ಎದುರಾಗುತ್ತದೆ. ತಾವು ಇಷ್ಟಪಟ್ಟ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ ಹಾಕುವಾಗ ನಿರ್ದೇಶಕರಿಗೆ ಹೊಟ್ಟೆ ಉರಿ ಬರುವುದು ಸಹಜ. ಇತ್ತೀಚೆಗೆ ಸೆನ್ಸಾರ್ನೊಂದಿಗೆ ವಿವಾದ ಮಾಡಿಕೊಂಡು 'ಮೊಗ್ಗಿನ ಮನಸು' ಚಿತ್ರ ದೆಹಲಿಯ ಟ್ರಿಬ್ಯುನಲ್ ಮೊರೆ ಹೋಯಿತು. ಈಗ ಮತ್ತೊಂದು ಚಿತ್ರ ಟ್ರಿಬ್ಯುನಲ್ ಮೊರೆ ಹೋಗಿದೆ. ಅದು ಸುನಾಮಿ.
ರಾಜು ಪಾಟೀಲ್ ನಿರ್ಮಾಣದ ಸುನಾಮಿ ಚಿತ್ರಕ್ಕೂ ದಕ್ಷಿಣ ಭಾರತದ ಕರಾವಳಿ ತೀರಕ್ಕೆ ಅಪ್ಪಳಿಸಿದ ಭೀಕರ ಸುನಾಮಿ ದುರಂತಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಈ ಚಿತ್ರದಲ್ಲಿ ಹಿಂಸೆಯನ್ನು ವಿಜೃಂಭಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿದೆ. ಇದರಿಂದ ಬೇಸತ್ತ ನಿರ್ಮಾಪಕರು ಈಗ ದೆಹಲಿ ಟ್ರಿಬ್ಯುನಲ್ ಮೊರೆ ಹೋಗಿದ್ದಾರೆ. ಅಲ್ಲಿಂದ ತೀರ್ಪು ಬಂದು ಚಿತ್ರ ಬಿಡುಗಡೆಗೆ ಇನ್ನೂ ಕೆಲಕಾಲ ಕಾಯಬೇಕು.
ಈ ಚಿತ್ರವನ್ನು ಮಾಕಂ ಮನೋಹರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸದ್ಗುಣರಾಜರ ಸಂಗೀತವಿದೆ. ಚಿತ್ರಕ್ಕೆ ಥ್ರಿಲ್ಲರ್ ಮಂಜು, ಕೌರವ್ ವೆಂಕಟೆಶ್ ಹಾಗೂ ಟೈಗರ್ಮಧು ಸಾಹಸ ಸಂಯೋಜಿಸಿದ್ದಾರೆ. ತಾರಾಬಳಗದಲ್ಲಿ ರಾಜ, ಪೂನಂ, ರಂಗಾಯಣ ರಘು, ದೊಡ್ಡಣ್ಣ, ಟೆನ್ನಿಸ್ ಕೃಷ್ಣ ಬುಲೆಟ್ ಪ್ರಕಾಶ್, ರೇಖಾದಾಸ್ ನಟಿಸಿದ್ದಾರೆ.