ಚಿತ್ರರಂಗದಲ್ಲಿ ಸಂಭಾವನೆಗೆ ಜಗಳ ಆಗುತ್ತಿರುವುದು ಸಾಮಾನ್ಯ. ಸರಿಯಾಗಿ ಸಂಭಾವನೆ ನೀಡಿಲ್ಲ, ಅಥವಾ ಕಡಿಮೆ ಸಂಭಾವನೆ ನೀಡಿದ್ದಾರೆ… ಹೀಗೆ ಅನೇಕ ಆರೋಪಗಳು ಪದೇ ಪದೇ ಕೇಳಿ ಬರುತ್ತಿರುತ್ತವೆ. ಆದರೆ ಸಂಭಾವನೆ ಬಗ್ಗೆ ಚಿಂತೆ ಮಾಡದೇ ಚಿತ್ರ ಲಾಭ ಗಳಿಸಿದ ಮೇಲೆ ಸಂಭಾವನೆ ಕೊಡಿ ಎನ್ನುವ ಕಲಾವಿದರಾದರೂ ಇದ್ದಾರೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಕಳ್ಳರ ಸಂತೆ ಚಿತ್ರದಲ್ಲಿ ನಟಿಸುತ್ತಿರುವ ಯಶ್ ಹಾಗೂ ಕಿಶೋರ್ ಇಂತಹ ಒಂದು ನಿರ್ಧಾರಕ್ಕೆ ಬಂದಿದ್ದಾರೆ.
ಅಗ್ನಿ ಶ್ರೀಧರ್ ಬಳಗ ನಿರ್ಮಿಸುತ್ತಿರುವ ಈ ಚಿತ್ರವನ್ನು ಸುಮನಾ ಕಿತ್ತೂರು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಇವರ ನಿರ್ದೇಶನದ ಸ್ಲಂ ಬಾಲ ಚಿತ್ರ ನಿರೀಕ್ಷಿತ ಗೆಲುವನ್ನು ಸಾಧಿಸಲಿಲ್ಲ. ಈ ಬಾರಿ ರಾಜಕೀಯ ವಿಡಂಬನಾತ್ಮಕ ಚಿತ್ರವನ್ನು ಮಾಡುತ್ತಿದ್ದಾರೆ. ಚಿತ್ರದ ಪೋಸ್ಟರ್ನಲ್ಲೂ ವಿಧಾನಸೌಧವನ್ನು ತೋರಿಸಲಾಗಿದೆ. ಅದರೊಳಗೆ ಎಂಥೆಂಥ ಮಂದಿ ಇರುತ್ತಾರೆ, ಅವರು ಹೇಗೆ ವರ್ತಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸುತ್ತಾರಂತೆ.
ಈ ಚಿತ್ರದಲ್ಲಿ ರಾಕಿ ಖ್ಯಾತಿಯ ಯಶ್ ಹಾಗೂ ಕಿಶೋರ್ ನಟಿಸುತ್ತಿದ್ದಾರೆ. ಆದರೆ ಅವರು ಸಂಭಾವನೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇಂತಹ ಪಾತ್ರಗಳಲ್ಲಿ ನಟಿಸಲು ಅವಕಾಶ ಸಿಗುವುದೇ ಒಂದು ಅದೃಷ್ಟ. ಅಂದ ಮೇಲೆ ಸಂಭಾವನೆ ಬಗ್ಗೆ ತಲೆಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಚಿತ್ರಕ್ಕೆ ಲಾಭ ಬಂದ ಮೇಲೆ ಸಂಭಾವನೆ ನೀಡಿದರೆ ಸಾಕು ಎನ್ನುತ್ತಾರೆ ಯಶ್ ಹಾಗೂ ಕಿಶೋರ್. ಚಿತ್ರದಲ್ಲಿ ನಾಯಕಿಯಾಗಿ ಹರಿಪ್ರಿಯಾ ನಟಿಸುತ್ತಿದ್ದಾರೆ.