ಸುದೀಪ್ ನಿರ್ದೇಶನ ಮಾಡಿ ಅಭಿನಯಿಸಿದ ವೀರ ಮದಕರಿ ಈ ವರ್ಷದ ಬಿಗ್ ಹಿಟ್ ಚಿತ್ರವಾಗಿ ಯಶಸ್ವಿ ನೂರು ದಿನ ಪೂರೈಸಿದೆ. ಚಿತ್ರದ ನಿರ್ಮಾಪಕರಾದ ದಿನೇಶ್ ಗಾಂಧಿ ನೂರು ದಿನದ ಸಂಭ್ರಮವನ್ನು ಹಾಸನದ ಶ್ರೀಗುರು ಥಿಯೇಟರ್ನಲ್ಲಿ ಆಚರಿಸಲು ತೀರ್ಮಾನಿಸಿದ್ದಾರೆ. ಆದರೆ ನಟ, ನಿರ್ದೇಶಕನಾದ ಸುದೀಪ್ ಮತ್ತು ನಿರ್ಮಾಪಕ ದಿನೇಶ್ ನಡುವೆ ಈಗಾಗಲೇ ಎದ್ದು ಸರಿಯಾಗಿದೆ ಎನ್ನಲಾಗಿದ್ದ ಭಿನ್ನಾಭಿಪ್ರಾಯ ಮತ್ತೆ ತಲೆಕೊಡವಿ ಎದ್ದುನಿಂತಿದೆ.
ಸುದೀಪ್, ದಿನೇಶ್ ಗಾಂಧಿ ಆಯೋಜಿಸಿರುವ ಶತದಿನೋತ್ಸವ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಿಲ್ಲವಂತೆ. ಏಕೆಂದರೆ ಸಿನಿಮಾ ಯಶಸ್ಸಿಗೆ ಒಂದು ಭಾಗವಾಗಿ ದುಡಿದ ತಂತ್ರಜ್ಞರಿಗೆ ಮತ್ತು ಕಲಾವಿದರಿಗೆ ನಿರ್ಮಾಪಕರು ಸರಿಯಾಗಿ ಸಂಭಾವನೆ ನೀಡಿಲ್ಲವೆಂದು ಸುದೀಪ್ ದೂರಿದ್ದಾರೆ. ಹಾಗೆ ಚಿತ್ರ ಬಿಡುಗಡೆಯಾಗಿ ಯಶಸ್ಸು ಕಂಡ ನಂತರ ತಂತ್ರಜ್ಞರು ಮತ್ತು ಕಲಾವಿದರನ್ನು ಕಡೆಗಣಿಸಲಾಗಿದೆ ಎಂದು ಸುದೀಪ್ ನೊಂದುಕೊಂಡಿದ್ದಾರೆ.
MOKSHENDRA
ಚಿತ್ರ ಗೆದ್ದಿದೆ ಎಂಬ ಖುಷಿಗಿಂತ ತಮ್ಮ ನಿರ್ದೇಶನದ ಚಿತ್ರಕ್ಕಾಗಿ ಶ್ರಮ ಪಟ್ಟ ತಂತ್ರಜ್ಞರಿಗೆ ಮತ್ತು ಕಲಾವಿದರಿಗೆ ಸರಿಯಾದ ಸಂಭಾವನೆ ಸಿಗದೆ ಇರುವುದು ತಮಗೆ ತುಂಬಾ ನೋವುಂಟು ಮಾಡಿದೆ. ತಮ್ಮ ಚಿತ್ರವನ್ನು ನೋಡಿ ನೂರು ದಿನ ಪೂರೈಸಲು ಸಹಕರಿಸಿರುವ ತಮ್ಮ ಅಭಿಮಾಗಳಿಗೆ ತಲೆ ಬಾಗಿ ವಂದನೆಗಳನ್ನು ಸಲ್ಲಿಸುತ್ತೇನೆ. ಹಾಗೆ ತಮ್ಮ ಚಿತ್ರಕ್ಕಾಗಿ ದುಡಿದ ಎಲ್ಲರಿಗೂ ಅವರಿಗೆ ಸಲ್ಲಬೇಕಾದ ಹಣವನ್ನು ಕೊಡಿಸಲು ನಾನು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಸುದೀಪ್.
ಆದರೆ ನಿರ್ಮಾಪಕ ದಿನೇಶ್ ಮಾತ್ರ ತಾವು ತಂತ್ರಜ್ಞರಿಗೆ ಸೇರಬೇಕಾದ ಸಂಭಾವನೆಯನ್ನು ಕೊಟ್ಟಿದ್ದೇನೆ. ಕೆಲ ತಂತ್ರಜ್ಞರು ಮುಂಚೆ ಮಾತನಾಡಿದಕ್ಕಿಂತ ಹೆಚ್ಚು ಸಂಭಾವನೆಯನ್ನು ಚಿತ್ರ ಯಶಸ್ಸು ಗಳಿಸಿದ ನಂತರ ಕೇಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಪೂರ್ತಿ ಸಂಭಾವನೆ ಪಡೆಯದೆ ಯಾರು ಚಿತ್ರ ಮಾಡುವುದಕ್ಕೆ ಮುಂದೆ ಬರುವುದಿಲ್ಲ. 28ರಂದು ಹಾಸನದಲ್ಲಿ ನಡೆಯುವ ಶತದಿನೋತ್ಸವವನ್ನು ಚಿತ್ರಕ್ಕಾಗಿ ದುಡಿದ ಎಲ್ಲಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರು, ಹಂಚಿಕೆದಾರರು, ಮತ್ತು ತಮ್ಮ ಚಿತ್ರ ಯಶಸ್ಸಿಗೆ ಕಾರಣರಾದವರನ್ನು ಆಹ್ವಾನಿಸಿ ಅದ್ದೂರಿಯಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ.