ನಿರ್ದೇಶಕ ರಘು ಕಶ್ಯಪ್ ಹೆಸರಾಂತ ಲೇಖಕಿ ತ್ರಿವೇಣಿ ಅವರ ಶರಪಂಜರ ಕಾದಂಬರಿಯ ಎಳೆಯೊಂದನ್ನು ಇಟ್ಟುಕೊಂಡು ಚಿತ್ರ ತೆಗೆಯಲು ಹೊರಟಿದ್ದಾರೆ. ಇದೇ ಇವರ ನಿರ್ದೇಶನದ ಮೊದಲ ಚಿತ್ರ. ಈ ಹಿಂದೆ ಶರಪಂಜರ ಚಿತ್ರದಲ್ಲಿ ಕಲ್ಪನಾ ನಾಯಕಿಯಾಗಿ ಅಭಿನಯಿಸಿದ್ದರು.
ಈಗಾಗಲೇ ಈ ಹಿಂದೆ ಬಂದಿರುವ ಶರಪಂಜರ ಚಿತ್ರಕ್ಕಿಂತ ವಿಭಿನ್ನವಾಗಿದೆಯಂತೆ. ಇಂದಿನ ಕಾಲಕ್ಕೆ ತಕ್ಕಂತೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರಂತೆ. ಹಿಂದಿಯಲ್ಲಿ ಬಾಗ್ಬನ್, ಡಾನ್ನಂತಹ ಸಿನಿಮಾಗಳು ಮತ್ತೆ ಬರುತ್ತಿರುವಾಗ ಅಂತಹ ಚಿತ್ರಗಳನ್ನು ಕನ್ನಡಲ್ಲಿ ತೆಗೆಯಲು ಏಕೆ ಪ್ರಯತ್ನ ಮಾಡಬಾರದು ಎಂದು ರಘು ಈ ಚಿತ್ರ ಮಾಡಲು ಮುಂದಾಗಿದ್ದಾರೆ.
ಚಿತ್ರದಲ್ಲಿ ಶೇ. 25ರಷ್ಟು ಮೂಲ ಕಾದಂಬರಿಯ ವಸ್ತು ಇಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ. ಉಳಿದ ಭಾಗವನ್ನು ರಘು ಅವರೇ ತಮ್ಮ ಕಲ್ಪನೆಯ ಆಧಾರದ ಮೇಲೆ ಹೆಣೆದಿದ್ದಾರಂತೆ. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಹಾಗೆ ನಾಯಕ ನಾಯಕಿಯ ಆಯ್ಕೆ ಕೂಡ ನಡೆಯಬೇಕಿದೆ. ಜನಪ್ರಿಯ ನಾಯಕ, ನಾಯಕಿಯರ ಹೆಸರೇ ಅವರ ಮನಸ್ಸಿನಲ್ಲಿದೆಯಂತೆ. ನಿಮಾಪಕರಾಗಿ ಶಿವಣ್ಣ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಶರಪಂಜರದ ಜೊತೆ ಇನ್ಯಾವುದಾದರೂ ಒಂದು ಪದವನ್ನು ಸೇರಿಸುವ ಚಿಂತನೆ ಮಾಡಿದ್ದಾರಂತೆ ನಿರ್ದೇಶಕರು. ಹಾಗೆ ಚಿತ್ರಕ್ಕೆ ಸೆಪ್ಟೆಂಬರ್ನಲ್ಲಿ ಚಾಲನೆ ದೊರೆಯಲಿದೆಯಂತೆ.