'ಈ ಲೋಕವೆಲ್ಲ ನೀನೇ ಇರುವ ಪೂಜಾ ಮಂದಿರಾ; ನಾ ಕಾಣುತಿರುವಾ ನೋಟವೆಲ್ಲಾ ಸತ್ಯ-ಸುಂದರಾ.....' ಎಂಬ ಸುಂದರ-ಸುಮಧುರ ಹಾಡನ್ನು ನೀವು ಕೇಳಿರಬಹುದಲ್ಲವೇ? ಖಂಡಿತಾ ಕೇಳಿರುತ್ತೀರಿ ಮತ್ತು ಆ ಚಿತ್ರವನ್ನೂ ನೋಡಿರುತ್ತೀರಿ. ಡಾ.ರಾಜ್ಕುಮಾರ್ ಅಭಿನಯದ 'ದೇವರು ಕೊಟ್ಟ ತಂಗಿ' ಚಿತ್ರದ್ದು ಈ ಹಾಡು.
ವಿಷಯ ಏನಪ್ಪಾ ಅಂದರೆ, ಅದೇ ಹೆಸರಿನ ಮತ್ತೊಂದು ಚಿತ್ರ ಸದ್ಯದಲ್ಲಿಯೇ ಬೆಳ್ಳಿತೆರೆಗೆ ಬರಲಿದೆ. ಶಿವರಾಜ್ ಕುಮಾರ್ ಈ ಚಿತ್ರದ ನಾಯಕ. ಶಿವಣ್ಣನ ಪರ್ಮನೆಂಟ್ ತಂಗಿ ಪಾತ್ರಧಾರಿಯಾಗಿದ್ದ ರಾಧಿಕಾ ಬದಲಿಗೆ ಮೀರಾ ಜಾಸ್ಮಿನ್ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆದಿತ್ಯ ಮ್ಯೂಸಿಕ್ ಸಂಸ್ಥೆಯ ಮೂಲಕ ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಧ್ವನಿಸುರುಳಿಗಳು ಉತ್ತಮವಾಗಿ ಮಾರಾಟವಾಗುತ್ತಿವೆ ಎಂಬ ಸುದ್ದಿ ಬಂದಿದೆ. ಹಂಸಲೇಖಾರ ಸಾಹಿತ್ಯ-ಸಂಗೀತವಿದೆ ಎಂದ ಮೇಲೆ ಅದು ಸಹಜವೇ ಎನ್ನಬಹುದು. ಅಣ್ಣ-ತಂಗಿ ಚಿತ್ರದ ಹಾಡುಗಳಲ್ಲಿ, ಅದರಲ್ಲೂ, 'ಅಣ್ಣ ತಂಗಿಯರ ಈ ಬಂಧಾ, ಜನುಮ ಜನುಮದಾ ಅನುಬಂಧಾ' ಎಂಬ ಹಾಡಿನಲ್ಲಿ ವಾದ್ಯಸಂಗೀತದ ಔನ್ನತ್ಯವನ್ನು ಮೆರೆದಿದ್ದ ಹಂಸಲೇಖಾರವರು ಈ ಚಿತ್ರದಲ್ಲಿ ಏನು ಜಾದೂ ಮಾಡಿದ್ದಾರೆ ಎಂಬುದನ್ನು ನೋಡಬೇಕಿದೆ.
ಸೆಂಟಿಮೆಂಟ್ ಚಿತ್ರಗಳ ಸ್ಪೆಷಲಿಸ್ಟ್ ಸಾಯಿಪ್ರಕಾಶ್ ಚಿತ್ರದ ನಿರ್ದೇಶಕರು. ರಾಜಮ್ಮ ಸಾಯಿಪ್ರಕಾಶ್ ನಿರ್ಮಾಪಕರು. ಆರ್.ಗಿರಿಯವರ ಛಾಯಾಗ್ರಹಣ ಚಿತ್ರಕ್ಕಿದೆ.