ನಿಖಿತಾಗೂ ನಿರ್ದೇಶಕ ಓಂಪ್ರಕಾಶ್ ರಾವ್ ಅವರಿಗೂ ಹಾವು ಮುಂಗುಸಿ ಥರ ಜಗಳವಾಗಿದೆ ಎಂದು 'ಯೋಧ' ಸಿನಿಮಾ ಬಿಡುಗಡೆಯಾಗುವ ಮೊದಲೇ ಗಾಂಧಿನಗರ ತುಂಬ ಗುಲ್ಲೆಬ್ಬಿತ್ತು. ನಿಖಿತಾ ಪತ್ರಕರ್ತರೆದುರೇ ಓಂ ಅವರನ್ನು ದೂರಿದರೂ, ಮತ್ತೆ ಅದೇ ಓಂ ಪ್ರಕಾಶ್ ರಾವ್ ಅವರ ನಿರ್ದೇಶನದ ಮುಂದಿನ ಅದ್ದೂರಿ ಚಿತ್ರ 'ಎಕೆ 56'ಗೆ ಸಹಿ ಮಾಡಿದಳು. ಪತ್ರಕರ್ತರದ್ದೆಲ್ಲಾ ಕಟ್ಟುಕಥೆ, ನಮ್ಮ ನಡುವೆ ಭಿನ್ನಾಭಿಪ್ರಾಯವೇ ಇಲ್ಲ ಎಂದು ಇಬ್ಬರೂ ಫೋಟೋಗಳಿಗೆ ಅದೇ ಪತ್ರಕರ್ತರೆದುರು ಪೋಸ್ ಕೊಟ್ಟವರು ಇದೇ ನಿಖಿತಾ ಹಾಗೂ ಓಂ ಪ್ರಕಾಶ್ ರಾವ್. ಈಗ ಮತ್ತೆ ಆ ಭಿನ್ನಾಭಿಪ್ರಾಯ ದೊಡ್ಡ ಬಿರುಕು ಕಂಡ ಲಕ್ಷಣ ಕಾಣುತ್ತಿದೆ. ಯಾಕೆಂದರೆ ಚಿತ್ರ ಆರಂಭವಾಗುವ ಮೊದಲೇ ಎಕೆ 56 ಚಿತ್ರದಿಂದ ನಿಖಿತಾ ಹೊರಬಿದ್ದಿದ್ದಾರೆ. ಓಂ ಪ್ರಕಾಶ್ ರಾವ್ ನಿಖಿತಾ ಇನ್ನೂ ತಂಡದಲ್ಲಿದ್ದಾಳೆ ಎಂದು ತೇಪೆ ಹಚ್ಚುತ್ತಿದ್ದರೂ, ಅತ್ತ ಬೇರೆ ನಾಯಕಿ ನಟಿಗಾಗಿ ಖುದ್ದು ಶೋಧನೆ ಆರಂಭಿಸಿದ್ದಾರೆ ಎಂಬ ಸುದ್ದಿ ಹರಡಿದೆ.
ಅದೇನೇ ಇರಲಿ. ನಿಖಿತಾ ಎಕೆ 56 ಚಿತ್ರಕ್ಕೆ ಫೋಟೋ ಶೂಟ್ ಮಾಡಿಸಿಕೊಂಡ ಮೇಲೂ ಚಿತ್ರದಿಂದ ಹೊರಬಿದ್ದಿದ್ಯಾಕೆ? ಎಂದರೆ, ಆಕೆ ಹೇಳೋದು ಬೇರೆನೇ. ''ನಿರ್ದೇಶಕ ಓಂ ಪ್ರಕಾಶ್ ಅವರು ನಾಯಕ ನಟನ ಜೊತೆಗೆ ತುಟಿಗೆ ತುಟಿ ಸೇರಿಸಿ ಚುಂಬಿಸುವ ದೃಶ್ಯದಲ್ಲಿ ಪಾಲ್ಗೊಳ್ಳಬೇಕು ಅಂತ ಈಗ ಹೇಳುತ್ತಿದ್ದಾರೆ. ನಾನು 'ನೋ' ಎಂದೆ. ನಿರ್ದೇಶಕರು ಹೇಳೋ ಪ್ರಕಾರ, ಇಡೀ ಚಿತ್ರದ ಹೈಲೈಟೇ ತುಟಿಗೆ ತುಟಿ ಸೇರಿಸಿ ಚುಂಬಿಸೋದು. ಆದರೆ, ನನಗೆ ಅದು ಅಂತಹ ಆಕ್ಷನ್ ಚಿತ್ರಕ್ಕೆ ಅಗತ್ಯವೇ ಇಲ್ಲವೆನಿಸಿತು. ನನ್ನನ್ನು ಅವರಿಗೆ ಬೇಕಾದಂತೆ ಯೂಸ್ ಮಾಡಿಕೊಳ್ಳುತ್ತಿದ್ದಾರೆ ಅನಿಸಿತು. ಅಷ್ಟೇ ಅಲ್ಲ, ನಾಯಕ ಸಿದ್ಧಾರ್ಥ್. ಆತ ಇನ್ನೂ ಹೊಸಬ. ಹೊಸ ನಾಯಕ ನಟನ ನಾನು ತುಟಿಗೆ ತುಟಿಯಿಟ್ಟು ಚುಂಬಿಸೋದಾ..? ಊಹೂಂ, ನನ್ನ ಕೈಲಂತೂ ಸಾಧ್ಯಾನೇ ಇಲ್ಲಪ್ಪ. ಹಾಗಂತ ನಿರ್ದೇಶಕರಿಗೇ ನೇರವಾಗಿ ಹೇಳಿ ಬಂದಿದ್ದೇನೆ'' ಎನ್ನುತ್ತಾಳೆ ನಿಖಿತಾ.
ಹಾಗಾದರೆ ಚಿತ್ರತಂಡದಿಂದ ನೀವು ಹೊರಬಿದ್ದಿದ್ದೀರಾ? ಎಂದರೆ, ''ಅದಂತೂ ನನಗೊತ್ತಿಲ್ಲ. ನಾನಂತೂ ನನ್ನ ಕಂಡೀಷನ್ ತಿಳಿಸಿದ್ದೇನೆ. ನನ್ನ ಕಂಡೀಷನ್ಗೆ ಒಪ್ಪಿ ನಿರ್ದೇಶಕರು ಚಿತ್ರತಂಡಕ್ಕೆ ಸೇರಿಸುತ್ತಾರೋ ಅಥವಾ ಕಂಡಿಷನ್ಗೆ ನೋ ಹೇಳಿ ಬೇರೆ ನಟಿಯನ್ನು ನನ್ನ ಜಾಗಕ್ಕೆ ಆಯ್ಕೆ ಮಾಡ್ತಾರೋ ಎಂಬುದು ನಿರ್ದೇಶಕರಿಗೆ ಬಿಟ್ಟಿದ್ದು'' ಎನ್ನುತ್ತಾರೆ ನಿಖಿತಾ.
ಹಾಗಾದರೆ, ಹಳೆ ನಾಯಕ ನಟರು ಸಿಕ್ಕಿದರೆ ನೀವು ಅವರ ತುಟಿಗೆ ಚುಂಬಿಸಲು ರೆಡಿ ಇದ್ದೀರಾ? ಎಂದು ತರಲೆ ಪ್ರಶ್ನೆ ಹಾಕಿದರೆ, ''ನನ್ನ ವಿಷಯ ಬಿಟ್ಟುಬಿಡಿ. ಶಿವರಾಜು ಕುಮಾರ್ ಅವರಿಗೆ ಇಂಥದ್ದೊಂದು ಪಾತ್ರ ನೀಡಿದರೆ ಅವರು ಒಪ್ಪಲಿಕ್ಕಿಲ್ಲ'' ಎಂದು ಹಾರಿಕೆಯ ಉತ್ತರ ನೀಡಿ ನಗುತ್ತಾಳೆ ನಿಖಿತಾ.