ಕನ್ನಡಕ್ಕೆ ಬಾಯ್, ಮಲಯಾಳಂಗೆ ಹಾಯ್ ಎನ್ನಲಿರುವ ದಿನೇಶ್ ಬಾಬು
MOKSHA
ಬಿಡುಗಡೆಗೂ ಮುಂಚೆ ಭಾರೀ ಪ್ರಚಾರ ಗಿಟ್ಟಿಸಿಕೊಂಡ ವಿಷ್ಣುವರ್ಧನ್ ಅಭಿನಯದ ಬಳ್ಳಾರಿ ನಾಗ ಚಿತ್ರದ ನಿರ್ದೇಶಕ ದಿನೇಶ್ ಬಾಬು ಕನ್ನಡ ಚಿತ್ರರಂಗದ ಮೇಲೆ ಬೇಸರಗೊಂಡಿದ್ದಾರಂತೆ. ಪದೇ ಪದೇ ಬಂದ ಆರೋಪಗಳು, ನಿರ್ಮಾಪಕರ ಆಕ್ಷೇಪಗಳು ಅವರನ್ನು ಕನ್ನಡ ಚಿತ್ರರಂಗಕ್ಕೆ ಟಾಟಾ ಹೇಳುವಂತೆ ಮಾಡುತ್ತಿವೆ ಎಂಬ ಗುಲ್ಲೆಬ್ಬಿದೆ.
ಹೌದು. ನಿರ್ದೇಶಕ ದಿನೇಶ್ ಬಾಬು ಕೇರಳಕ್ಕೆ ವಾಪಸ್ ಆಗಲು ನಿರ್ಧರಿಸಿದ್ದಾರಂತೆ. ಕನ್ನಡ ಚಿತ್ರರಂಗದ ಸದ್ಯದ ವಾತಾವರಣ ತನಗೆ ಸರಿಹೊಂದುತ್ತಿರದ ಕಾರಣ ತಾನು ತನ್ನ ಕೇರಳಕ್ಕೇ ಮರಳವುದೇ ಲೇಸೆಂದು ಅವರು ಅಂದುಕೊಂಡಿದ್ದಾರಂತೆ. ಬಾಬು ಅವರಿಗೂ ಕನ್ನಡ ಚಿತ್ರರಂಗಕ್ಕೂ ಅಜಗಜಾಂತರ ಇದೆ ಅನ್ನಿಸುತ್ತಿದೆಯಂತೆ. ಅಲ್ಲದೆ ಮಲಯಾಳಂನಲ್ಲೂ ಅವರಿಗೆ ಸಿಕ್ಕಾಪಟ್ಟೆ ಆಫರ್ ಇದೆಯಾದ್ದರಿಂದ ಮತ್ತೆ ಮಲಯಾಳಂ ಕಡೆ ಬೆನ್ನು ತಿರುಗಿಸಲು ಬಾಬು ನಿರ್ಧರಿಸಿದ್ದಾರೆ.
ಮೂರು ವಾರಗಳ ಹಿಂದೆ ನಿರ್ಮಾಪಕ ಕೆ.ಮಂಜು, ಬಾಬು ವಿರುದ್ದ ಆರೋಪದ ಸುರಿಮಳೆಗೆರೆದಿದ್ದರು. ಈ ಆರೋಪಗಳಿಗೆ ಸ್ವತಃ ಸಾಹಸಸಿಂಹ ವಿಷ್ಣುವರ್ಧನರೂ ಹೂಂಗುಟ್ಟಿದ್ದರು. ಚಿತ್ರ ನಿರ್ದೇಶನವಾದ ಮೇಲೆ ಚಿತ್ರದ ಬಗ್ಗೆ ಯಾವ ಪ್ರಚಾರವೂ ಮಾಡದ ದಿನೇಶ್ ಬಾಬು ತಮಗೂ ಚಿತ್ರಕ್ಕೂ ಸಂಬಂಧವೇ ಇಲ್ಲ ಎಂಬಂತಿರುತ್ತಾರೆ ಎಂಬ ಆರೋಪ ಅವರ ಮೇಲಿತ್ತು. ಅಷ್ಟೇ ಅಲ್ಲ, ಕಲಾವಿದರಿಂದ ಕಮೀಷನ್ ಹೊಡಿತಾರೆ ಎಂಬ ಆರೋಪವೂ ಬಾಬು ಅವರ ಮೇಲಿದೆ. ಇದೆಲ್ಲದರಿಂದ ಬೇಸರಗೊಂಡ ಬಾಬು ಕೇರಳಕ್ಕೆ ಹಂತ ಹಂತವಾಗಿ ಜಾರಲು ನಿರ್ಧರಿಸಿದ್ದಾರಂತೆ. ಅದಲ್ಲದೆ ಕೇರಳದ ಸಿನಿಮಾ ಮಂದಿ ದಿನೇಶ್ ಬಾಬು ಅವರಿಗೆ, ಇಲ್ಲಿ ನಿಮ್ಮ ಕೈ ಚಳಕ ತೋರಿಸಿ ಎಂದು ಕರೆಯುತ್ತಿದ್ದಾರಂತೆ.