'ಅನ್ವೇಷಿ' ಅರ್ಧ ಶತಮಾನದ ಹಿಂದೆ... ನಮ್ಮಜ್ಜ, ತಾತಂದಿರ ಕಾಲವದು. 1947ರಲ್ಲಿ ಭಾರತಕ್ಕೆ ಸಾತಂತ್ರ್ಯ ಸಿಕ್ಕಾಗ ನಮ್ಮಜ್ಜಂದಿರಿಗೂ ಸ್ವಾತಂತ್ರ್ಯ ಸಿಕ್ತು. ಅದು ವಂಶ ಪಾರಂಪರ್ಯವಾಗಿ ಹರಿದು ಸ್ವಾತಂತ್ರ್ಯ ಅನ್ನೋ ಆಜನ್ಮಸಿದ್ಧ ಹಕ್ಕು ನನ್ನ ಪಾಲಿಗಾಯಿತು. ಹೌದು, ಜನ್ಮ ಪೂರ್ವತಃವಾಗಿಯೇ ನನಗೆ ಈ ಹಕ್ಕು ಲಭಿಸಿತ್ತು.
ಅಂತೂ ನಾನು ಬೆಳೆದು, ಭಾರತದ ಬಡ 'ಮತದಾರ'ನ ವಯಸ್ಸೂ ಆಯಿತು. ಆಗೊಂದು ಮನಸ್ಸೂ ಆಯಿತು. ಅದೇನೆಂದರೆ ದಿಢೀರ್ ಶ್ರೀಮಂತನಾಗಬೇಕು. ಯೋಚಿಸಿದೆ, ಏನು ಮಾಡೋಣ? ಹಾಂ.....ಒಂದು ಐಡಿಯಾ ಹೊಳೆಯಿತು. ಕಳ್ಳತನ ಮಾಡಿದರೆ ಬೇಕಾದಷ್ಟು ಗಳಿಸಬಹುದು.
ಹೌದು, ಅಂದಿನಿಂದಲೇ ನನ್ನ ಯೋಚನೆಯನ್ನು ಕಾರ್ಯರೂಪಕ್ಕಿಳಿಸಿದೆ. ಸಣ್ಣ ಪುಟ್ಟ ಕಳ್ಳತನ ಮಾಡಿದೆ. ಅದೂ ಚಾಕಚಕ್ಯತೆಯಿಂದ... ಪೊಲೀಸರ ವ್ಯಾಪ್ತಿಗೆ ಹೊರತಾದ ಕಳ್ಳತನ ಮಾಡಿದೆ. ಆದರೆ ಕೆಲವೇ ದಿನಗಳಲ್ಲಿ 'ಸಂಪಾದನೆ' ಕಡಿಮೆಯಾಯಿತೆಂದು ತೋರಿತು. ಸ್ವಲ್ಪ 'ಎತ್ತರ'ಕ್ಕೇರಿದೆ. ಮಹಡಿ ಮನೆ, ನವ್ಯ ಬಂಗಲೆಗಳುಳ್ಳವರತ್ತ ಕಣ್ಣು ಹಾಯಿಸಿದೆ. ಒಂದೆರೆಡು ಬಾರಿ ಜೈಲಿಗೆ ಹೋಗಿ ಬಂದೆ. ಅಷ್ಟೊತ್ತಿಗಾಗಲೇ ನಮ್ಮ ಊರಿನ ಸುತ್ತಮುತ್ತ ನಾನು 'ಪ್ರಸಿದ್ಧ'ನಾಗಿದ್ದೆ. ನಿಧಾನವಾಗಿ ಗ್ಯಾಂಗೊಂದನ್ನು ಕಟ್ಟಿದೆ. ಬಾಲ ಅಲ್ಲಾಡಿಸುತ್ತಾ ನನ್ನಾಜ್ಞೆಗೆ ಕಾಯುತ್ತಿರುವ ಚಮಚಾಗಳನ್ನು ಸಂಪಾದಿಸಿದೆ. ಅವಕ್ಕೊಂದಿಷ್ಟು ಬಿಸಾಕಿದರೆ ಬಾಲ ಮಡಚಿಕೊಂಡು ನನ್ನ ಕೆಲಸ ಮಾಡಿಕೊಡುತ್ತವೆ.
ಆದರೂ ಅನೇಕ ಕೊಲೆ, ಸುಲಿಗೆ, ಆತ್ಯಾಚಾರ, ವಂಚನೆ ಮುಂತಾದ 'ಸಣ್ಣ ಪುಟ್ಟ' ಕೆಲಸಗಳಿಂದ ನನಗೆ ಬೇಕಾದಷ್ಟು ಸಂಪಾದಿಸಲು ಆಸಾಧ್ಯ ಎನ್ನಿಸಿತು. ಹಾಗಾದರೆ ಇನ್ನೇನು ಉಪಾಯ? ಯೋಚಿಸಬೇಕಾದ ಪರಿಸ್ಥಿತಿ ಬರಲಿಲ್ಲ. ಇದ್ದೇ ಇದೆಯಲ್ಲ....'ರಾಜಕೀಯ'! ಅದಕ್ಕೆ ಧುಮುಕುಲು ಯೋಚಿಸುತ್ತಲೇ ಇರುವಾಗ 'ರೋಗಿ ಬಯಸಿದ್ದೂ ಹಾಲನ್ನ, ವೈದ್ಯ ಹೇಳಿದ್ದೂ ಹಾಲನ್ನ' ಎಂಬಂತೆ ರಾಷ್ಟ್ರೀಯ ಪಕ್ಷದ ಅಧ್ಯಕ್ಷನೋರ್ವ ನನ್ನನ್ನು ಭೇಟಿಯಾದ. ಇದಕ್ಕೆ ಕಾರಣ ನನ್ನ ಸಿದ್ಧಿ-ಪ್ರಸಿದ್ಧಿ.
ಅದಾಗಲೇ ಕೇಂದ್ರದಲ್ಲಿನ ಆಡಳಿತ ಸರಕಾರದಲ್ಲಿ ಭಿನ್ನಮತಗಳು ಉಲ್ಬಣವಾಗಿ, ಪರಾಕಾಷ್ಠೆಗೇರಿ, ಕೊನೆಗೆ ಪಕ್ಷವು ಒಡೆದು ಚೂರು ಚೂರಾಗಿ ಸರಕಾರ ವಿಸರ್ಜನೆಯಾಗಿ ಲೋಕಸಭಾ ಚುನಾವಣೆ ಘೋಷಿಸಿಯಾಗಿತ್ತು. ನನ್ನನ್ನು ಚುನಾವಣೆಗೆ ಸ್ಪರ್ಧಿಸುವಂತೆ ನಾನು ಸೇರಿದ ಆ ಪಕ್ಷದ ಅಧ್ಯಕ್ಷ ಟಿಕೆಟು ನೀಡಿದ. ಅಬ್ಬಾ! ಆರಿಸಿ ಬಂದರೆ ಸರಕಾರವನ್ನು ಎಷ್ಟು ಬೇಕಾದರೂ ದೋಚಿ, ಹೋದ ಹಣವನ್ನೆಲ್ಲಾ ಮರು ಸಂಪಾದಿಸಬಹುದು ಎಂದು ಯೋಚಿಸಿದ್ದೇ ತಡ, ಕಾರ್ಯಪ್ರವೃತ್ತನಾದೆ. ನಾನು ಸ್ಪರ್ಧಿಸಿದ ಕ್ಷೇತ್ರದಲ್ಲಿ ಎಲ್ಲರಿಗೂ (ಬೇಕಾದವರಿಗೆ) ದಿನಂಪ್ರತಿ ತಲಾ 50 ತೊಟ್ಟೆ ಸರಾಯಿ ಸರಬರಾಜು ಮಾಡಿದೆ, ಉಳಿದವರಿಗೆಲ್ಲಾ ಹಣ, ಸೀರೆ ಹಂಚಿದೆ. ಅಂತೂ ಜನರ ಮನಸ್ಸನ್ನು ನಾನು "ಗೆದ್ದೇ" ಬಿಟ್ಟೆ.
ನನ್ನ ವಿರುದ್ದ ನಿಂತ ಆಭ್ಯರ್ಥಿಯೊಬ್ಬ "ಪ್ರಾಮಾಣಿಕ" ಎಂಬ ಅಪ್ರಯೋಜಕ ಹಣೆಪಟ್ಟಿ ಧರಿಸಿದ್ದ ಬಡಪಾಯಿಯಾಗಿದ್ದ. ಆತ ಹೋದಲ್ಲೆಲ್ಲಾ ಬೆರಳಣಿಕೆಯಷ್ಟು ಜನ ಸೇರುವುದನ್ನು ನೋಡಿ ಅಯ್ಯೋ ಅನ್ನಿಸುತ್ತಿತ್ತು. ಚುನಾವಣೆ ನಡೆದು ಫಲಿತಾಂಶ ಬಂದೇ ಬಂತು. ಫಲಿತಾಂಶ ನಿಮಗೇನೂ ಹೇಳಬೇಕಾಗಿಲ್ಲ ತಾನೇ? ನನ್ನ ಕ್ಷೇತ್ರದಲ್ಲಿ 100 ಶೇಕಡಾ ಮತ ಗಳಿಸಿ ನಾನು ಆಯ್ಕೆಯಾದೆ. 100 ಶೇಕಡಾ ಹೇಗಂತೀರಾ? ನನ್ನ ಎದುರಾಳಿಯಾದ ಪ್ರಾಮಾಣಿಕ ಅಭ್ಯರ್ಥಿಯ ಸ್ವಂತ ಮತವನ್ನೇ ನನ್ನ ಕಡೆಯವರು ಅವನಿಗಿಂತಲೂ ಮೊದಲೇ ಹೋಗಿ ಹಾಕಿ ಬಂದಿದ್ದರು. ಮತ್ತೆ ಮತ ಪೆಟ್ಟಿಗೆ ವಶ, ಬೂತ್ ವಶಗಳು ಇದ್ದದ್ದೇ ಅಲ್ವೇ! ಒಟ್ಟಿನಲ್ಲಿ ನಾನು ಆರಿಸಿ ಬಂದೆ.
ಕೊನೆಗೆ ನಾವೊಂದೆರಡ್ಮೂರು ಪಕ್ಷಗಳು ಒಟ್ಟು ಸೇರಿ ಚೌಚೌ ಸರಕಾರ ರಚಿಸಿದೆವು. ನನಗೂ ಒಂದು ಮಂತ್ರಿ ಪದವಿ ಸಿಕ್ತು. ಆದರೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಲಿಲ್ಲವೆಂದು ನಾನು ಸಿಡಿದೆದ್ದೆ. ರಾಜೀನಾಮೆ ನೀಡಲು ಮುಂದಾದೆ. ನಾನು ಹೊಸಬನಾದುದರಿಂದ, ನನ್ನತ್ತ ಯಾರೂ ಗಮನ ಹರಿಸುವುದಿಲ್ಲವೆಂದು ತಿಳಿದು ಬಂದಾಗ, ತೆಪ್ಪಗಾಗಿ 'ಸಿಕ್ಕಿದ್ದು ದೇವರ ಪುಣ್ಯ' ಎಂಬಂತೆ ಸ್ವೀಕರಿಸಿದೆ, ನಮ್ಮ ಪ್ರಧಾನಿಯವರಿಗೆ 'ಸಂಪೂರ್ಣ ಬೆಂಬಲ' ನೀಡುತ್ತೇವೆ ಎಂದು ಘೋಷಿಸಿ ಎಲ್ಲರಿಂದಲೂ ಶಹಭಾಸ್ ಪಡೆದೆ.
ಆದರೆ ನನ್ನೊಳಗಿನ ಅಸಮಾಧಾನ ಹೊಗೆಯಾಡುತ್ತಲೇ ಇತ್ತು. ಮುಂದಿನ ಬಾರಿ ಇವರಿಗೆ ಬುದ್ಧಿ ಕಲಿಸೋಣವೆಂದುಕೊಂಡು "ಮುಂದಿನ ಚುನಾವಣೆಗೆ' ತಯಾರಿ ಮಾಡಿಕೊಳ್ಳುವತ್ತ ದೃಷ್ಟಿ ನೆಟ್ಟೆ. ಹೇಗೆ? ಈಗ ಸಿಕ್ಕಿರೋ ಸಚಿವಾಲಯದಿಂದ ಖಜಾನೆಯನ್ನು ದೋಚುವುದು. ಹೇಗಿದ್ದರೂ "ಹುಟ್ಟುಗುಣ ...' ಎಲ್ಲವನ್ನು ಜೇಬಿಗಿಳಿಸಿದೆ. ರಾಜಾರೋಷವಾಗಿ ಭಾಷಣ ಬಿಗಿದು, "ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ'' ಮುಂತಾದ "ನಿಕೃಷ್ಟ' ವಾಕ್ಯ ಪ್ರಯೋಗ ಮಾಡಿ ಜನರನ್ನು ಮರುಳುಗೊಳಿಸತೊಡಗಿದೆ. ಹೋದಲ್ಲೆಲ್ಲಾ ಹಾರ ಹಾಕುವಂತೆ, ಜಯಘೋಷ ಹಾಕುವಂತೆ, ಲಾರಿಗಟ್ಟಲೆ ಜನ ಸೇರುವಂತೆ ನನ್ನ ಚಮಚಾಗಳು ನೋಡಿಕೊಂಡರು.
ನನ್ನ ಈ ಜನಪ್ರಿಯತೆಯನ್ನು ಕಂಡು ನಮ್ಮ ಪಕ್ಷಾಧ್ಯಕ್ಷ ಮೆತ್ತಗಾದ. ಮಾತ್ರವಲ್ಲ, ಇತರ ಪಕ್ಷಗಳವರೂ ನನ್ನತ್ತ ಕಣ್ಣು ಹಾಯಿಸತೊಡಗಿದರು. ಆದಾಗಲೇ ನಮ್ಮ ಸರಕಾರದಲ್ಲಿ ಭಿನ್ನಾಭಿಪ್ರಾಯಗಳೆದ್ದು ಸರಕಾರ ಉರುಳುವ ಹಂತಕ್ಕೆ ಬಂದಿತ್ತು. ಅನೇಕ ಪಕ್ಷಗಳವರು ನನ್ನನ್ನು ಸೆಳೆಯಲು ಯೋಚಿಸಿದರು. ಕೆಲವರು ನನಗೆ "ಗೌರವ"ಧನ ಕೊಡಲು ಬಂದರು. ಕೊಟ್ಟವರನ್ನೆಲ್ಲಾ ಚೆನ್ನಾಗಿ ಸತ್ಕರಿಸಿ ಅವರು ಹೇಳಿದ್ದಕ್ಕೆಲ್ಲಾ ಕೋಲೆ ಬಸವನಂತೆ ತಲೆ ಆಡಿಸಿ, ಸಿಕ್ಕಿದ್ದನ್ನೆಲ್ಲಾ ದೇವರ ಕಾರ್ಯವೆನ್ನುವಂತೆ ಜೇಬಿಗಿಳಿಸಿದೆ.
ಆದರೆ ನನ್ನ ಈ ಘನ ಕಾರ್ಯಗಳನ್ನು ತಿಳಿದ ನಮ್ಮ ಪಕ್ಷಾಧ್ಯಕ್ಷ ಅನೇಕರ ಒತ್ತಡಕ್ಕೆ ಮಣಿದು ನನ್ನನ್ನು ಪಕ್ಷದಿಂದ ಉಚ್ಚಾಟಿಸಿದ. ನಾನು ಸಿಡಿದೆದ್ದೆ. ಘರ್ಜಿಸಿದೆ. ರೋಷಗೊಂಡೆ. ಕೊನೆಗೆ ಇದ್ದೇ ಇದೆಯಲ್ಲ, ಪ್ರತ್ಯೇಕ ಪಕ್ಷ... ರಚಿಸಿದೆ. ಅದಕ್ಕೆ ಅಖಿಲ ಭಾರತ ಭ್ರಷ್ಟ ಪಕ್ಷ (ಅಭಾಭ್ರಪ) ಎಂದು ಸರ್ವತ್ರ ಪರಿಚಿತವಾಗಿರುವ ಪದವುಳ್ಳ ಹೆಸರಿಟ್ಟೆ. ಯಾಕೆಂದರೆ ಈ ದೇಶದಲ್ಲಿ 'ಭ್ರಷ್ಟ' ಎಂಬ ಶಬ್ದ ಒಂದು ಸಣ್ಣ ಮಗುವಿನ ಬಾಯಲ್ಲೂ ಕೇಳಿ ಬರುತ್ತಿರುತ್ತದೆ. ಅಷ್ಟು ಹಾಸುಹೊಕ್ಕಾಗಿದೆ ಆ ಶಬ್ದ.
ನನ್ನ ಉಚ್ಚಾಟನೆಯಾದ ಬಳಿಕ ಭಿನ್ನಮತ ತೀವ್ರವಾಗಿ ಸರಕಾರ ಉರುಳಿ ಬಿತ್ತು. ಇದರಲ್ಲಿ ನನ್ನ ಅಮೋಘ ಕೈವಾಡವಿತ್ತೆನ್ನುವುದರಲ್ಲಿ ಯಾರಿಗೂ ಸಂಶಯವಿರಲಿಲ್ಲ. ಸರಿ, ಮತ್ತೆ ಚುನಾವಣೆ ಘೋಷಿಸಲಾಯಿತು. ನನ್ನ "ಮಾಮೂಲಿ ಪ್ರಕ್ರಿಯೆ'ಗಳಿಂದ ಮತ್ತೆ ಆರಿಸಿ ಬಂದೆ. ನನ್ನ ವಿರುದ್ಧ ನಿಂತವರೆಲ್ಲಾ ಠೇವಣಿ ಕಳಕೊಂಡರು. ಈ ಬಾರಿಯ ಚುನಾವಣೆಯಲ್ಲಿ ಅನೇಕ ಪಕ್ಷಗಳ ಸದಸ್ಯರು ಸ್ವರ್ಧಿಸಿದ್ದರು. ನನ್ನ ಅಭಾಭ್ರಪದ ಓರ್ವ ಕಿರಿಯ ಸದಸ್ಯನೂ ವಿಜಯಿಯಾದ.
ಫಲಿತಾಂಶಗಳೆಲ್ಲಾ ಘೋಷಿಸಲ್ಪಟ್ಟವು. ಒಟ್ಟು 545 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಫಲಿತಾಂಶ ಮಾತ್ರ ವಿಚಿತ್ರವಾಗಿತ್ತು. ಅಭಾಭ್ರಪದ ನಮ್ಮಿಬ್ಬರನ್ನು ಹೊರತುಪಡಿಸಿ ಇತರ 540 ಎಂ.ಪಿ.ಗಳೂ 543 ವಿವಿಧ ಪಕ್ಷಗಳಿಗೆ ಸೇರಿದವರು!
|