ತಾವೇ ಎತ್ತಿ ಆಡಿಸಿದ ಮೊಮ್ಮಗಳು ಮದುವೆಯಾಗುತ್ತಿದ್ದಾಳೆ. ತಮ್ಮ ಸ್ವಂತ ಮಕ್ಕಳನ್ನೂ ಅಷ್ಟು ಪ್ರೀತಿಯಿಂದ ಆಡಿಸಿದ್ದರೋ, ಇಲ್ಲವೋ ಅಷ್ಟು ಮುದ್ದಿನ ಮೊಮ್ಮಗಳು. ತಾವು ಸಾಯುವುದರೊಳಗೆ ಅವಳ ಮದುವೆಯೊಂದನ್ನು ಕಂಡು ಸಾಯಬೇಕೆಂದು ಬಯಸುವ ಅನೇಕ ಮುದುಕಿಯರಂತೆ ತಮ್ಮ ಸಾವನ್ನು ಮುಂದೂಡುತ್ತಾ ಬಂದವರವರು.
"... ಅತ್ತೆ ಕೆಳಗೆ ಬಚ್ಚಲು ಖಾಲಿ ಇದೆ. ಸ್ನಾನ ಮಾಡುತ್ತೀರಾ? "
ಅವರು ತಿರುಗಿ ನೋಡಿದರು. ಅವರ ಶಾಂತ ಸ್ವಭಾವದ ಎರಡನೇಯ ಸೊಸೆಯಾಗಲೇ ಸ್ನಾನ ಮಾಡಿ, ಅಲಂಕಾರಗೊಂಡು ನಿಂತಿದ್ದಾಳೆ.
"ನಿನ್ನ ಸ್ನಾನ ಆಯ್ತೇನೇ? ಯಾವಾಗ ಎದ್ದೇ ?"
"ಎದ್ದು ತುಂಬಾ ಹೊತ್ತೇ ಆಯಿತು. ನಿಮ್ಮದ್ಯಾಕೆ ತಡ ಆಯಿತು. ಕೆಳಗಿನ ಬಚ್ಚಲು ಖಾಲಿ ಇದೆ"
"ಇರಲೀ ಕಣೇ, ಮೆಟ್ಟಿಲು ಹತ್ತಿ ಇಳಿಯುವುದಕ್ಕೇ ನಂಗಾಗುವುದಿಲ್ಲ. ಇಲ್ಲೇ ಕಾಯ್ತೇನೆ"
ಅಷ್ಟರಲ್ಲೇ ಬಚ್ಚಲು ಬಾಗಿಲು ತೆರೆದಿದ್ದು ಸ್ನಾನಕ್ಕೆ ಹೋದರು.
ಹಳೇಗಾಲದ ಭರ್ಜರಿ ಮನೆ ಅದು. ಎಷ್ಟು ಕಂಬಗಳಿದ್ದವೋ, ಎಷ್ಟು ಮೂಲೆಗಳಿದ್ದವೋ, ಎಷ್ಟು ತೊಲೆಗಳಿದ್ದವೋ, ಎಲ್ಲಕ್ಕೂ ಬಣ್ಣ ಬಣ್ಣದ ಕಾಗದಗಳನ್ನು, ಸುನಾರಿ ಕಾಗದಗಳನ್ನು ಸುತ್ತಿ, ಇಡೀ, ಮನೆಯೇ ಅಂದಿನ ಮದುವೆ ವೀಕ್ಷಿಸಲು ಸಿದ್ಧಗೊಂಡಿತ್ತು.
ಮನೆಯ ಮತ್ತೊಂದು ಭಾಗವಾದ ಒಳಕೋಣೆಯಲ್ಲಿ ಮದುಮಗಳ ಶೃಂಗಾರ ಆಗುತ್ತಿತ್ತು. ಹೆಣ್ಣು ಮಕ್ಕಳು ಉತ್ಸಾಹದಿಂದ ಹುಡುಗಿಯನ್ನು ಶೃಂಗರಿಸುತ್ತಿದ್ದರೆ, ಉಳಿದವರೆಲ್ಲ ಹುಡುಗಿಯ ಇಮ್ಮಡಿಸುವ ಅಂದ ಚಂದದ ವೀಕ್ಷಣೆಗಾಗಿ ಅಲ್ಲಿ ನೆರೆದಿದ್ದರು.
ಕಮಲತ್ತೆಯ ಹಿರೇಮಗನ ಮಗಳಾದ ಆಕೆ ಮೊದಲೇ ಬಳಕುವ ಲಾವಣ್ಯವತಿ. ಇನ್ನು ಹಲವರ ಚಳಕದ ಅದ್ಭುತ ಅಲಂಕಾರಗಳಿಂದ ಆ ಸೌಂದರ್ಯ ಅತಿಶಯವಾಗಿ ಮೆರುಗುವುದಲ್ಲದೆ ಕುಗ್ಗುತ್ತದೆಯೇ? ತೀರ್ಥಹಳ್ಳಿಯ ಸುತ್ತಮುತ್ತಲಿನ ಕೆಲವೇ ಕೆಲವು ಶ್ರೀಮಂತ ಮನೆತನಗಳಂತಹ ಒಂದು ಮನೆಯಲ್ಲಿ, ಕಮಲತ್ತೆಯ ಹಿರೇಮಗ ಸೂರಿಯ ಅತ್ಯಂತ ಮುದ್ದಿನವಳೂ, ಮನೆಯ ಉಳಿದವರೆಲ್ಲರ ಅಚ್ಚುಮೆಚ್ಚಿನವಳೂ ಆಗಿ ಬೆಳೆದು ಬಂದ ಹುಡುಗಿಯಾಕೆ. ಬೇರೆ ಯಾವುದೇ ವಿಷಯದಲ್ಲಿ ಎಷ್ಟು ಬೊಡ್ಡಾದರೇನು, ಥಳಿಥಳಿಸುವ ಸೌಂದರ್ಯದ ವಿಷಯದಲ್ಲಿ ಆಕೆ ಅಪ್ಪಟ ಚಿನ್ನವೇ. ಹೆಣ್ಣೆಂದರೆ ಬರೀ ಸೌಂದರ್ಯ ಮಾತ್ರ ಎಂಬ ನಂಬಿಕೆಗೆ ತಕ್ಕಂತೆ, ಕಷ್ಟಕ್ಕೇ ಲಾಯಕ್ಕಾಗಿ ಹುಟ್ಟಿ ಬಂದ ಹುಡುಗಿ ಆಕೆ. ಹಾಗಾಗಿ ತನ್ನ ರೂಪದ ಜೊತೆಗೆ ಏನೇನು ಬೇಕೋ ಅವೆಲ್ಲವೂ ಆಕೆಗೆ ಸುಲಭವಾಗಿ ಲಭ್ಯವಾಗಿತ್ತು.
ಅವಳ ಸುತ್ತಾ ಅವಳಿಂದು ತೊಡಬೇಕಾಗಿದ್ದ ರಾಶಿ ರಾಶಿ ಆಭರಣಗಳ ಪೆಟ್ಟಿಗೆಗಳೇ ಬಾಯಿ ತೆರೆದು ನಿಂತಿದ್ದವು.
ಅದನ್ನು ಆಕೆಯ ಕುತ್ತಿಗೆಯಿಂದ ಹೊಕ್ಕಳವರೆಗೆ ಜೋಡಿಸಿ ತೊಡಿಸುತ್ತಿದ್ದವಳು- ಆ ಮನೆಯ ಮೂರನೇ ಸೊಸೆ. ತಾವು ಹುಟ್ಟಿಬಂದ ಮನೆಯಲ್ಲಿ ತಪ್ಪಿಯೂ ಕೂಡ ಅಂತಹದ್ದನ್ನೆಲ್ಲಾ ಕಾಣಲು ಸಾಧ್ಯವಿರದ ಆಕೆಗೆ ಆಗ ಇಂತಹ ಕಾರ್ಯಗಳಲ್ಲೆಲ್ಲಾ ಮಹಾ ಆಸಕ್ತಿ ಬಿಡಿ. "ಎಷ್ಟು ಚೆನ್ನಾಗಿದೆಯೇ? ಎಷ್ಟು ಚೆನ್ನಾಗಿ ಕಾಣುತ್ತಿದೆಯೇ? ಈ ಚಿನ್ನಗಳೆಲ್ಲಾ ನಿನಗೇ ಹೇಳಿಸಿಟ್ಟ ಹಾಗಿದೆಯಲ್ಲ!" ಎಂದು ಆಗಾಗ ಮಹಾಮುಗ್ಧರಂತೆ ಉದ್ಗರಿಸುತ್ತಾ, ಆ ಆಭರಣಗಳನ್ನೆಲ್ಲಾ ಒಮ್ಮೆ ಹತ್ತಿರದಿಂದ ಮತ್ತೊಮ್ಮೆ ದೂರದಿಂದ ಹಿಡಿದು, ಅಳೆದು, ಬೆಳಕಿಗೆ ಹೊಳೆವ ಅದರ ಕೆತ್ತನೆಗಳಿಂದ ನಿಬ್ಬೆರಗಾಗಿ ಆಕೆಯ ಕುತ್ತಿಗೆಗೆ ಒಂದೊಂದಾಗಿ ಇಳಿಬಿಡುತ್ತಿದ್ದರು.
ಶ್ರೀಮಂತರ ಮದುವೆಗಳಲ್ಲಿ ಮದುವೆಯ ಸೌಂದರ್ಯ ಎಂದು ಯಾವುದನ್ನ ಅಂಥವರು ಗುರುತಿಸಿಕೊಳ್ಳಲು ಬಯಸುತ್ತಾರೋ ಅವು ಇರುವುದೇ ಹುಡುಗಿ ಹಾಕಿಕೊಳ್ಳುವ ಚಿನ್ನ, ತೊಡುವ ಸೀರೆ, ಅವರು ಬಡಿಸುವ ಊಟಗಳಲ್ಲಿ ಅಷ್ಟೇ ತಾನೇ. ಸಕಲರೀತಿಯಿಂದಲೂ ಅಂದಿನ ಮದುವೆ ನಿರಾಯಾಸವಾಗಿ ಅದೇ ಹಾದಿಯತ್ತ ಸಾಗುತ್ತಿತ್ತು.
ಮದುವೆಗೆ ಬಂದ ನೆಂಟರಿಷ್ಟರೂ ಅಷ್ಟೆ. ಅವರ ದೃಷ್ಟಿಯಲ್ಲಿ ಮಹಾ ಘನತೆ ಗೌರವ ಇರುವಂತಹವರು ಮಾತ್ರ. ತಮ್ಮ ಅಂತಸ್ತಿಗೆ ಸರಿಯಿರದೇ, ಘನತೆ ಗೌರವಕ್ಕೆ ಪಾತ್ರರಲ್ಲ ಎನ್ನಿಸಿದರೆ, ಒಡಹುಟ್ಟಿದವರನ್ನೂ ಕೂಡ ಕಡೆಗಣಿಸುವುದರಲ್ಲಿ ಕಮಲತ್ತೆಯ ಮಕ್ಕಳೇನೂ ಹಿಂದುಳಿದಿರಲಿಲ್ಲ ಬಿಡಿ; ಹಾಗಾಗಿ ಕಮಲತ್ತೆಯ ಒಬ್ಬ ಮಗಳು ಆ ಮದುವೆಯಲ್ಲಿ ನಾಪತ್ತೆ. ಮದರಾಸಿನಲ್ಲಿ ತನ್ನ ಪಾಡಿಗೆ ತಾನು ಯಾರನ್ನೋ ಕಟ್ಟಿಕೊಂಡು, ದಿನಬೆಳಗಾದರೆ, ದುಡ್ಡಿಗೆ ಏಗಲಾಡುವಂತಹ ಸಾಧಾರಣ ಜೀವನ ನಡೆಸುತ್ತಿದ್ದ ಆಕೆ ತನ್ನಂತರಂಗದಲ್ಲಿ ಮನೆಯವರ ಎಷ್ಟೋ ಗುಟ್ಟುಗಳನ್ನು ನುಂಗಿಕೊಂಡು ಸರ್ವರೀತಿಯಿಂದಲೂ ತನ್ನನ್ನು ಹುಟ್ಟಿಸಿದ ಮನೆಯ ಮರ್ಯಾದೆ ಕಾಪಾಡಿದವಳು.
ಆದ್ದರಿಂದಲೇ ಅವಳಿಂದು ಮನೆಯಿಂದ ಹೊರಗೆ. ಬಿಸಿಲಿನಲ್ಲಿ ತರಕಾರಿಗಾಗಿ ಬೀದಿ ಅಲೆಯುತ್ತಾ, ಬೆವರು ಸುರಿಸುತ್ತಿರುವ ಆ ಮಗಳಿಗೆ ಇಂದಿನ ಈ ಮದುವೆಯ ವಿಷಯವೇ ತಿಳಿದಿರಲಿಲ್ಲ. ಅದಕ್ಕಾಗಿ ಅವಳು ಕಳೆದುಕೊಂಡಿದ್ದಾಗಲೀ, ಅವಳಿಗೆ ತಿಳಿಸದೇ ಗುಟ್ಟು ಮಾಡಿ ಮದುವೆ ಮಾಡಿದ ಇವರು ಪಡೆದುಕೊಂಡಿದ್ದಾಗಲೀ ಅಷ್ಟರಲ್ಲೇ ಇತ್ತು. ಹೆಚ್ಚೆಂದರೆ ಗುಂಪಿನಲ್ಲಿ ಗೋವಿಂದ ಆಗಿ, ಎಲ್ಲೋ ಮೂಲೆಯಲ್ಲಿ ಕುಳಿತು ತನ್ನ ಬಾಳೆಲೆಗೆ ಬಂದು ಬಿದ್ದ ಚಿರೋಟಿಯನ್ನೋ ಫೇಣಿಯನ್ನೋ ತಿಂದುಕೊಂಡು ಹೋಗುತ್ತಿದ್ದಳು ಅಷ್ಟೇ. ಪ್ರಾಯಶಃ ಆ ಒಂದು ಚಿರೋಟಿಯಲ್ಲೋ, ಫೇಣಿಯಲ್ಲೋ ಅವರ ಮಾನ ಉಳಿಯುವುದಾದರೆ ಉಳಿಯಲಿ, ಪಾಪ. ಶ್ರೀಮಂತ ಮನೆತನವದರಿಗೆ ಅಷ್ಟೂ ಮರ್ಯಾದೆ ಬೇಡವೇ?
|