ಮುಖ್ಯ ಪುಟ  ವಿವಿಧ > ಸಾಹಿತ್ಯ > ಕಥೆಗಳು
 
ಕಥೆ: ನಾಗಮುರಿಗೆ
ಅವರ ಮೊಮ್ಮಗಳ ತಾಯಿ ಅಂದರೆ ಅವರ ಹಿರೇಸೊಸೆಯ ಅಕ್ಕ ಮಂಗಳೂರಿನ ಸೂಕ್ಷ್ಮ ಕೆತ್ತನೆಯ ಚಿನ್ನದ ಲೋಲಾಕನ್ನು ಹುಡುಗಿಗೆ ಉಡುಗೊರೆಯಾಗಿ ತಂದಿದ್ದಳು. ಉಳಿದವರೆಲ್ಲಾ ಆ ಕೆತ್ತನೆಯ ಅದ್ಭುತಕ್ಕೆ, ಅದರ ಶೈಲಿಗೆ, ಮೆಚ್ಚಿಗೆ ಸೂಚಿಸಿ ತಲೆದೂಗುತ್ತಾ, ನಗುತ್ತಾ ಮಾತನಾಡುತ್ತಿದ್ದರು.

ಕೈಯಲ್ಲಿ ಹಿಡಿದು ಅಳೆದವರು ಒಬ್ಬರು. ತಮ್ಮ ಕಿವಿಗೆ ಸುಮ್ಮನೆ ಹೊರಗಿನಿಂದಲೇ ಜೋತುಬಿಟ್ಟು ಹೇಗಿದೆ ಎಂದು ಉಳಿದವರನ್ನು ವಿಚಾರಿಸಿದರು ಕೆಲವರು.

"ಹುಡುಗೀನ ಗೌರೀಪೂಜೆಗೆ ಕರೆತನ್ನಿ. ಆಮೇಲೆ ಮುಹೂರ್ತಕ್ಕೆ ಹೊತ್ತಾಗುತ್ತೆ..." ಯಾರೋ ಕೂಗಿದರು.

ಕಮಲತ್ತೆ ಕಣ್ಣಿಗೆ ಕೈ ಅಡ್ಡ ಹಿಡಿದು, ತಮ್ಮ ಅತೀ ಸಮೀಪ ನಿಂತವರನ್ನು ನೋಡಿ, ಅರೇ! ಇದು ಚಿನ್ನು, ಇವನ್ಯಾವಾಗ ಬಂದ... ಅದು ಯಶೋದೆ, ಅವಳು ಯಾವಾಗ ಬಂದಳು... ಮದುವೆಗೆ ಎಲ್ಲಿಂದಲೋ ಯಾರ್ಯಾರೋ ಬಂದಿದ್ದಾರಲ್ಲ... ಎಂದು ಅರೆಗತ್ತಲ ಆ ಕೋಣೆಯಲ್ಲಿ ನೆರೆದ ಮುಖಗಳನ್ನೇ ಮಿಕಿಮಿಕಿ ನೋಡುತ್ತಾ ತಮ್ಮ ನೆನಪಿನಲ್ಲಿ ಅವರ್ಯಾರು ಆಗಿರಬಹುದೆಂದು ಹುಡುಕುತ್ತಿದ್ದರು....

ಓಯೇ, ಮೂಲೇಲಿ ನಿಂತಿದ್ದು ವಸುಧಾ... ಬೆಂಗಳೂರಿನ ಅನ್ನಪೂರ್ಣ ಅಲ್ವಾ... ಇದು... ಇದು.... ಬೆಂಗಳೂರಿಗೆ ನಾ ಹೋದಾಗ ಊಟಕ್ಕೆ ಕರೆದಿತ್ತಲ್ಲ. ಶಂಕರೂ ಮಾವನ ಮಾಣಿಯ ಮಗ ಅಲ್ವಾ....? ಅಯ್ಯೋ ಅದು, ಭಾವಯ್ಯನವರ ಮಗಳು ಸುಭದ್ರಾ, ಬಾಂಬೆಯಿಂದ ಬಂದಿದೆಯಲ್ಲಾ.... ಎಷ್ಟು ವರುಷ ಆಯಿತು. ಇವರನ್ನೆಲ್ಲಾ ನೋಡಿ... ಹನ್ನೆರಡೋ... ಹದಿನೈದೋ....! ಅವುಗಳ ಮದುವೇಲಿ ನೋಡಿದ್ದೋ ಯೆಂತೋ.....! ಸೂರಿ ಪರವಾಗಿಲ್ಲವೇ! ಯಾವ ಸಂಬಂಧವನ್ನೂ ಬಿಟ್ಟಿಲ್ಲ...! ಎಷ್ಟೆಷ್ಟು ದೂರದಲ್ಲಿದ್ದವರಿಗೆಲ್ಲಾ ಹೇಳಿಕೆ ಮಾಡಿದ್ದಾನೆ... ಸಂಬಂಧ ಬಿಟ್ಟಿಲ್ಲ.... ಎಲ್ಲರನ್ನೂ ಕರೆದಿದ್ದಾನಲ್ಲ... ಅವರು ಮನಸ್ಸಿನಲ್ಲೇ ಕೊಂಡಾಡಿದರು- ತಮ್ಮ ಹಿರೇಮಗ ಸಂಬಂಧಗಳನ್ನೆಲ್ಲಾ ಪತ್ತೆ ಹಚ್ಚಿ ಎಲ್ಲೆಂಲ್ಲಿಂದಲೋ ಯಾರ್ಯಾರನ್ನೋ ಕರೆದು ತಂದಿದ್ದನ್ನ ನೋಡಿ... ನಗುತ್ತಾ ಒಬ್ಬೊಬ್ಬರ ಹತ್ತಿರವೂ ಹೋಗಿ ಮಾತನಾಡಿದರು.

"... ಸೌಖ್ಯನಾ ಅತ್ತೆ.....? ಹುಷಾರಿದೀರಾ ಅತ್ತೆ...! ಯಾಕೆ ಹೀಗೆ ಬತ್ತಿದೀರಿ ಅತ್ತೆ?... ನಿಮ್ಮನ್ನು ನೋಡಿ ಎಷ್ಟು ವರುಷವಾಯಿತತ್ತೆ.... ನೀವಂತೂ ನಾನಿರುವ ಕಡೆ ಬರುವುದೇ ಇಲ್ಲ. ಹೀಗೆ ಆಗೊಂದು ಈಗೊಂದು ಮದುವೇಲಿ ನೋಡುವುದಾಯಿತು. ನಿಮ್ಮನ್ನ..."

ಒಬ್ಬರೇ, ಇಬ್ಬರೇ.... ಎಲ್ಲರೂ ನಿಂತು, ನಿಂತು ಅತ್ತೆಯನ್ನು ಮಾತನಾಡಿಸುವವರೇ, ಎಲ್ಲರಿಗೂ ಮೊದಲಿನಿಂದಲೂ ಅವರು ಕಮಲತ್ತೆಯೇ, ಎಷ್ಟೋ ವರುಷದ ನಂತರ ತಮ್ಮ ಭಾವಂದಿರ, ಅಕ್ಕಂದಿರ, ಅಣ್ಣಂದಿರ ಮಕ್ಕಳನ್ನೆಲ್ಲಾ ನೋಡುತ್ತಿದ್ದೀನಲ್ಲಾ ಅಂತೆನ್ನಿಸಿ, ಸಂತೋಷದಿಂದ ಅವರ ಹೃದಯ ತುಂಬಿ, ಗಂಟಲು ಒತ್ತಿ ಬರುತ್ತಿತ್ತು.

"ದುಃಖವಾ ಅತ್ತೆ....?" ಯಾರೋ ತಪ್ಪಾಗಿ ಊಹಿಸಿ ಕೇಳಿಬಿಟ್ಟಿದ್ದರು.

"ಛೇ! ದುಃಖವಾ? ಯಾತಕ್ಕೆ....?" ಕಮಲತ್ತೆ ದಂಗಾಗಿ ಕೇಳಿದರು.

"ಅದೇ ಅತ್ತೆ? ನಿಮ್ಮ ನಾಲ್ಕನೇ ಮಗ ಹೋದ ವರುಷ ಸತ್ತನಂತಲ್ಲ. ನಮಗೆ ಪೇಪರಿನಲ್ಲಿ ನೋಡಿಯೇ ಗೊತ್ತಾದದ್ದು, ಕೊಲೆಯಾಯಿತು ಅಂಬುವುದಲ್ಲ, ಎಲ್ಲಾ..... ಯೆಂತಕ್ಕೆ ಕೊಲೆ ಮಾಡಿದ್ದು, ಅತ್ತೆ?"

ಕಮಲತ್ತೆಯೇ ಏನಾದರೂ ಕೊಲೆ ಮಾಡಿದರೇನೋ ಎಂಬಂತಿತ್ತು ಅವಳ ಪ್ರಶ್ನೆ. ಅಲ್ಲದೆ, ಕಮಲತ್ತೆಗೆ ಅದು ಆಗಲೇ ಮರೆತೂ ಹೋಗಿತ್ತು. ಮಗ ಸತ್ತು ಒಂದು ವರುಷವೇ ಕಳೆದಿದ್ದರಿಂದ ಅದೀಗ ಹಳೆಕತೆ ಅವರಿಗೆ. ಅಷ್ಟಕ್ಕೂ ಅವರಿಗೆ ಅವನು ಅಂತಹ ಪ್ರೀತಿಪಾತ್ರ ಮಗನೇನೂ ಆಗಿರಲಿಲ್ಲವಲ್ಲ.... ಈ ಯಾವಳೋ ಇವಳು ಬಂದು ತಮ್ಮ ಸಂತೋಷವನ್ನು ಕೆಡಿಸುತ್ತಿದ್ದಾಳಲ್ಲ ಅನ್ನಿಸಿತು ಅವರಿಗೆ. "ಆಯಿತು! ಎಂತ ಮಾಡುವುದು? ಯಾರ ಕೈಯಲ್ಲಿತ್ತು ಅದು, ಹೇಳು?" ಅಂದವರೇ "ತಿಂಡಿ ಆಯಿತಾ ನಿಂದು?" ಎಂದು ಮಾತು ಬದಲಾಯಿಸಿದರು.

ಮುಹೂರ್ತ ಸಮೀಪಿಸುತ್ತಿತ್ತು. ಹುಡುಗ ಆಗಲೇ ಬಂದಿದ್ದ.

"ಮಂಟಪದಲ್ಲಿ ಯಾರೂ ಇಲ್ಲ. ಎಂತಾ ಎಲ್ಲಾ ಇಲ್ಲಿ ಸೇರಿ ಗೌಜು. ತಿಂಡಿಯಾದವರೆಲ್ಲಾ ಮಂಟಪಕ್ಕೆ ಬಂದು ಕೂರಿ, ನೋಡೋಣ" ಯಾರೋ ಅಬ್ಬರಿಸುತ್ತಿದ್ದರು: ಮತ್ಯಾರೋ ದುಡು ದುಡು ಓಡುತ್ತಾ ಮಂಟಪಕ್ಕೆ ಹೋದರು.

ಕಮಲತ್ತೆ ತೆವಳುವ ಹಾಗೆ ಹೆಜ್ಜೆ ಇಡುತ್ತಾ, ಮಂಟಪದ ಹತ್ತಿರ ನಡೆದರು.

"ಅತ್ತೆ ತಿಂಡಿ ತಿನ್ನಿ... ಬನ್ನಿ... ಊಟ ತಡವಾಗುತ್ತೆ. ಹಾಗೇ ಖಾಲಿ ಇರಬೇಡಿ" ತಿಂಡಿಯ ಕಾರ್ಯ ವಹಿಸಿಕೊಂಡಿದ್ದ ಅವರ ಕಡೇ ಸೊಸೆ ಅತ್ತೆಗೆ ಹೇಳಿದಳು.

"ಏ ಆಶಾ, ಮಗೂಗೆ ಹಸೆಗೆ ಬರುವುದಕ್ಕೆ ಮುಂಚೆ ನಾಗಮುರಿಗೆ ಹಾಕ್ಕೊಳಕ್ಕೆ ಮರೀಬೇಡಾಂತ ಹೇಳು" ಕಮಲತ್ತೆ ಧ್ವನಿ ಅವರಿಗೇ ತಿಳಿಯದ ಹಾಗೆ ಅಂಗಲಾಚುತ್ತ ಸರಿದಿತ್ತು.

"ಯಾಕೇ ಅತ್ತೆ ನಿಮಗೆ ಸಂಶಯ? ಅವಳ ಮದುವೆಗೋಸ್ಕರಾಂತಲೇ ಮಾಡಿಸಿದೀರಾ... ಹಾಕ್ಕೋಳಲ್ಲವಾ?" ಎಂದು ಅತ್ತೆಯನ್ನೇ ಪ್ರಶ್ನಿಸಿ, "ಬನ್ನಿ ಅತ್ತೆ, ಅಲ್ಲೊಂದು ಬಾಳೆಲೆ ಖಾಲಿ ಇದೆ" ಎಂದು ಅವಸರ ತೋರಿ, ಮಹಾ ಅನುಕಂಪದಿಂದ ಎಂಬಂತೆ ಕಮಲತ್ತೆಯನ್ನ ಒಂದು ಮೂಲೆಯ ಬಾಳೆ ಎಲೆ ಎದುರು ಕೂರಿಸಿದಳು.

ಎದುರು ಕುಳಿತವರು ಗಂಡಿನವರೋ, ಹೆಣ್ಣಿನವರೋ ತಿಳಿಯದ ಹಾಗೆ ಮತ್ತೆ ಮಸುಕು, ಮಸುಕು...

"ಹುಡುಗಿಯ ಅಜ್ಜಿಯಂತೆ ಇದು!". ಎದುರು ಸಾಲಿನಲ್ಲಿ ಯಾರೋ ತಮ್ಮ ಅಚ್ಚ ಬೆಂಗಳೂರು ಭಾಷೆಯಲ್ಲಿ ಕಮಲತ್ತೆ ಬಾಳಿ ಬಂದ ಘನತೆಯ ಬದುಕನ್ನು ಒಂದೇ ವಾಕ್ಯದಲ್ಲಿ ತೂಗುವ ಹಾಗೆ ಉಪಯೋಗಿಸಿದ್ದ "ಇದು!" ಅವರ ಕಿವಿಗೆ ಅಪ್ಪಳಿಸಿ, ಮನೆ ತುಪ್ಪವೇ ಹಾಕಿ ಮಗ ಮದುವೆಗಾಗಿ ತಯಾರಿಸಿದ್ದ ರುಚಿರುಚಿ ಕೇಸರಿ ಭಾತ್ ಅವರ ಗಂಟಲಿಂದ ಇಳಿಯದಾಯಿತು. ಇಡ್ಲಿಯೂ ಗಂಟಲಲ್ಲಿ ಒತ್ತಿ, ಎರಡು ಗುಟುಕು ನೀರು ಕುಡಿದರು.

"ಹೋದ ವರುಷ ಪೇಪರಲ್ಲಿ ಸುದ್ದಿ ಆಯಿತಲ್ಲ, ಇವರ ಮನೆಗೆ ಸೇರಿದ ಕೊಲೆಯಾದ ಆ ಹುಡುಗ ಈಕೆಗೆ ಏನಾಗಬೇಕಂತೆ?''

''ಈಕೆಯ ನಾಲ್ಕನೇ ಮಗನಂತೆ''
''ಮಗನಾ!?''

ಪ್ರಶ್ನೆಗಳನ್ನು ಕೇಳುತ್ತಿದ್ದ ಎದುರು ಕುಳಿತ ಒಬ್ಬಾಕೆ ತಿಂಡಿ ತಿನ್ನುವುದನ್ನೂ ನಿಲ್ಲಿಸಿ, ನಿಬ್ಬೆರಗಾಗಿ ಕಮಲತ್ತೆಯನ್ನೇ ನೇರವಾಗಿ ನೋಡಿದಾಗ ಅವರು ಇನ್ನು ತಿಂಡಿ ತಿಂದ ಹಾಗೇ ಅನ್ನಿಸಿ ಮತ್ತೊಂದೆರಡು ಗುಟುಕು ನೀರು ಕುಡಿದರು.

''ಆ ಸೊಸೆ ಬಂದಿದ್ದಾಳಾ?''

"ಇದ್ದ ಹಾಗೆ ಇಲ್ಲ''

ಮಾತು ಮುಂದುವರಿಯುತ್ತಿದ್ದಂತೇ ಅವರೆದ್ದು ಕೈ ತೊಳೆಯಲು ಹೋದರು. ವಾಂತಿ ಆಗುವಂತೆನ್ನಿಸಿ ಸ್ವಲ್ಪ ಹೊತ್ತು ಬಚ್ಚಲಲ್ಲೇ ನಿಂತರು. ನಂತರ ಸುಧಾರಿಸಿಕೊಂಡು, ''ಏ ಇವಳೇ ನಾ ಮಂಟಪದಲ್ಲಿ ಕೂತಿರುತ್ತೇನೆ'' ಎಂದು ಯಾರೂ ಕೇಳದಿದ್ದರೂ, ಕಣ್ಣ ಮುಂದೆ ಸರಿದ, ಆ ಮನೆಯ ಹುಡುಗಿ ಅನ್ನಿಸಿದ ಯಾರಿಗೋ ಹೇಳಿ ಮಂಟಪಕ್ಕೆ ಬಂದು, ಮಧ್ಯದ ಒಂದು ಜಾಗದಲ್ಲಿ ಕುಳಿತರು.

ಹುಡುಗ ಹಸೆಯಲ್ಲಿದ್ದ. ಮದುವೆಯ ಕಾರ್ಯಗಳು ನಡೆಯುತ್ತಿದ್ದವು. ಕಮಲತ್ತೆ ಒಮ್ಮೆ ಕಣ್ಣಾಡಿಸಿ, ತಾವು ಕೂತಿದ್ದನ್ನು ಯಾರಾದರೂ ನೋಡಿ, ತಮ್ಮನ್ನು ಮಾತನಾಡಿಸಲು ಬರಬಹುದೆಂದು ಕಾದರು.

ಯಾರೂ ಬಾರದಾಗ, ಕಣ್ಣಿಗೆ ಕಂಡವರನ್ನೆಲ್ಲಾ ಇಣಿಕಿ ನೋಡಿದರು. ತಮ್ಮ ಹೆಣ್ಣು ಮಕ್ಕಳಾದರೂ, ಯಾರಾದರೂ ಅಲ್ಲಿ ಕುಳಿತಿರುವರೇ ಹುಡುಕಿದರು. ಕಣ್ಣಿಗೆ ಯಾರೂ ಕಾಣದಾಗ ಥತ್ ಎಲ್ಲಿ ಹಾಳಾದವೋ ಎಂದು ಮನದಲ್ಲೇ ಗುಡುಗಿದರು. ಅದಾಗ-ಆಗ ಅವರ ಹೊಟ್ಟೆಯಾಳದಿಂದ ಉಮ್ಮಳಿಸಿ ಬರುವ, ಕಾದಿಟ್ಟ ನೆನಪಿನಂತೆ ಮದುವೆಗೆ ಬಾರದ ಒಂದು ಹೆಣ್ಣು ಮಗಳ ನೆನಪಾಗುತ್ತಿದ್ದಂತೇ ''ಮುಹೂರ್ತ ಸಮೀಪಿಸುತ್ತಿದೆ. ಹುಡುಗಿ ಕರೆತನ್ನಿ' 'ಎಂದು ಪುರೋಹಿತರು ಗುಡುಗಿದ ಹೊಡೆತಕ್ಕೆ, ನೆನಪಾದದ್ದು ಏನು ಎಂಬುದೂ ಮರೆತು, ನೆನಪಾಗಿ ಉಳಿದ ನಾಗಮುರಿಗೆಯನ್ನು ಮಗು ಹಾಕಿಕೊಂಡಿತೋ ಇಲ್ಲವೋ ಎಂಬುದೇ ಸದ್ಯದ ಚಡಪಡಿಕೆಯಾಗಿ, ಯಾರನ್ನಾದರೂ ಕರೆಯಬೇಕೆಂದು ನೋಡಿದರೆ... ಏನು ನೋಡುವುದು ? ಅದೆಲ್ಲಿದ್ದರೋ? ಸಟ್ಟನೆ ದೊಂಬಿಯಂತೆ ಜನರು ನಾನು ತಾನೆಂದು ಮಂಟಪಕ್ಕೆ ನುಗ್ಗಿ, ನುಗ್ಗಿ, ಬರುವವರೇ!

ಅವರು ಕುಳಿತಲ್ಲಿಂದ ಎದ್ದು, ''ಏಯೀ ಇವಳೇ, ಏಯೀ ಇವಳೇ'' ಎಂದು ಕಂಡವರನ್ನೆಲ್ಲಾ ಕರೆಯುತ್ತ, ದೌಡಾಯಿಸುತ್ತಿದ್ದ ಜನರ ನಡುವೆ ದಾರಿ ಮಾಡಿಕೊಳ್ಳುತ್ತಾ, ''ಆಶಾ....ವನಮಾಲಾ? ವಿಶಾಲಾಕ್ಷಿ, ಶಕುಂತಲಾ, ಸುಕನ್ಯಾ? ಎಂದು ಬಾಯಿಗೆ ಬಂದ ಸೊಸೆಗಳ, ಹೆಣ್ಣುಮಕ್ಕಳ ಹೆಸರುಗಳನ್ನೆಲ್ಲಾ ಕರೆಯುತ್ತಾ, ''ಏಯೀ ಶಾರದೇ...''ಎಂದು ಮಧ್ಯ ಮದುವೆಗೆ ಬಾರದ ಮಗಳ ಹೆಸರೂ ಸೇರಿ ಹೋಗಿದ್ದರ ಅರಿವೂ ಇರದೇ, ವಾಲಗದ ಸದ್ದಿನ ಜತೆ, ಪುರೋಹಿತರ ಮಂತ್ರದ ಜತೆ, ನೆರೆದವರ ಗದ್ದಲದ ಜತೆ ಹೊಂದದೇ, ಅರಚಿಕೊಳ್ಳುತ್ತಿರುವ ತಮ್ಮ ಧ್ವನಿ, ಹಾಗೇ ಒಂಟಿಯಾಗಿ ತಮ್ಮ ಕಿವಿಗೇ ವಾಪಸಾಗಿ ಬಡಿಯತೊಡಗಿದಾಗ... ಥತ್ ಹಾಳಾಗಲಿ ಎಂದು ಗೊಣಗಿಕೊಂಡು, ಗೊತ್ತಿದ್ದವರು ಯಾರು ಕಂಡಾರು ಎಂದು ಆ ಸಂದಣಿಯಲ್ಲಿ ಕಣ್ಣ ಎದುರು ಕಂಡವರ ಕೈ ಹಿಡಿದೆಳೆದು ತಂದು, ''ಯಾರು ನೀನು?'' ಯಾರು ನೀನು?'' ಎಂದು ವಿಚಾರಿಸುತ್ತಾ ಹೋದರು.

"ಯಾರು ಬಿಟ್ಟು, ಯಾರು ಬಿಟ್ಟು ನೀನ್ಯಾರು?'' ಎಂದು ಮಕ್ಕಳು ಆಡುವ ಆಟದಂತೆ ಸಿಕ್ಕವರನ್ನೆಲ್ಲಾ ಬಿಟ್ಟು, ಬಿಟ್ಟು ಸಿಗದವರನ್ನು ಹುಡುಕುತ್ತಾ ಸ್ವಲ್ಪ ಹೊತ್ತು ಸುತ್ತಿದ ಬಳಿಕ, ಸೋದರಮಾವನ ಜೊತೆ ಹಸೆಗೆ ಬರುತ್ತಿದ್ದ ಹುಡುಗಿಯೇ ಅವರಿಗೆ ಎದುರಾದಳು.

"ಏಯೀ ಇವಳೇ! ಏಯೀ ಇವಳೇ ! ಮಗೂ ನಾನು ಕಣೇ. ನಾಗಮುರಿಗೆ ಕೈಗೆ ಹಾಕಿಕೊಂಡಿಯಾ?'' ಎಂದು ಮೊಮ್ಮಗಳನ್ನು ಹಿಡಿದು ನಿಲ್ಲಿಸಿ, ಅಲುಗಿಸಿ, ಕೈಯಲ್ಲಿ ಅವಳ ತೋಳನ್ನ ಬಳಚಿ, ನಾಗಮುರಿಗೆ ಸಿಗದಾಗ ಪೆಚ್ಚಾಗಿ, ''ಯಂತಾ ಹೆಣ್ಣೇ, ಕಡೆಗೂ ಮರೆತೆಯಾ?'' ಎಂದು ಹತಾಶೆಯಿಂದ ಕೇಳಿದ್ದರು.

ಅಯ್ಯೋ ದೊಡ್ಡಮ್ಮ....ಕಡೀಗೂ ಮರ್ತೇ ಹೋಯ್ತಾ...? ಇರಿ, ಈಗ ಹಾಕ್ಕೋಳತೀನಿ....ಅವಳು ಹಿಂತಿರುಗಿ, ''...ಅತ್ತೆ....! ಓಯೀ ಶಕುಂತಲತ್ತೇ... ದೊಡ್ಡಮ್ಮಾ ಕೊಟ್ಟ ನಾಗಮುರಿಗೆ ಒಳಕೋಣೆ ಬೀರಲ್ಲಿ ಇದೆ. ಸ್ವಲ್ಪ ತಂದ್‌ಕೊಡ್‌ತೀರಾ....?'' ಎಂದು ಕೇಳಿ, ಹಾಗೇ ನಿಂತಳು.

ಅಷ್ಟು ಹೊತ್ತಿಗೆ ಪುರೋಹಿತರು ಕಿರುಚತೊಡಗಿದರು. ''ಮುಹೂರ್ತ ಬಂದಾಗಿದೆ. ಯಾರು ಅದು ಸೋದರ ಮಾವ....ಹುಡ್ಗೀನ ಕರೆತನ್ನಿ ನೋಡುವಾ....''
 << 1 | 2 | 3 | 4 | 5  >> 
ಮತ್ತಷ್ಟು
ಗುರಿಯಿಲ್ಲದ ಮನಕೆ ದಾರಿ ತೋರುವ ಗುರು
ಜೀವನ ರೂಪಿಸುವ ಶಿಕ್ಷಕರನ್ನು ಮನಸಾ ಸ್ಮರಿಸೋಣ...
ಅಗೋಚರ...
ನೋ ಆಪ್ಷನ್....!!!
ನೋ ಆಪ್ಷನ್....!!!
ಕಾರ್ಯನಿಷ್ಠೆಗೆ ದೊರೆತ ಬಹುಮಾನ