''ಅದನ್ನ ನೀ ಆಮೇಲೆ ಹಾಕ್ಕೊಳೇ. ಹೋಗೇ ಈಗ....'' ಮತ್ಯಾರೋ ಅವಳನ್ನ ದೂಡುತ್ತಾ ಅವಸರಪಡಿಸಿದರು. ಹುಡುಗಿ ಮಂಟಪಕ್ಕೆ ಹತ್ತಿರವಾಗುತ್ತಿದ್ದ ಹಾಗೇ ಇನ್ನಷ್ಟು ಮತ್ತಷ್ಟು ಮಂಗಳವಾದ್ಯಗಳು ಜೋರಾಗುತ್ತಾ ಕಿವಿಗಡಚಿಕ್ಕತೊಡಗಿದವು.
ಕಮಲತ್ತೆ ಹಾಗೇ ನಿಂತರು, ತಾನು ಮಂಟಪದ ಒಳಗಿದ್ದೇನೆಯೋ ತಿಳಿಯಲಿಲ್ಲ ಅವರಿಗೆ ಒಂದುಕ್ಷಣ. ಎಲ್ಲರೂ ಮಹಾಸಂಭ್ರಮದಿಂದ ಇಡೀ ಮದುವೆ ತಮ್ಮ ಕಾಲ ಮೇಲೇ ನಿಂತಹಾಗೆ ಸರಬರ ಓಡಿಯಾಡುವವರೇ...
ಅವರ ಕಣ್ಣ ಮುಂದೆ ಯಾರೋ ನಾಗಮುರಿಗೆ ಎತ್ತಿಕೊಂಡು ಬಂದ ಹಾಗೆ ಅಷ್ಟೇ ಕಾಣಿಸಿತು. ಅದೂ ಮಸುಕು ಮಸುಕು....ಅದರ ಬಗ್ಗೆ ಯಾರಾದರೂ ಮಾತನಾಡಬಹುದೆಂದು ಕಾದರು....ಕಾದರು.....ಕಾದರು.....
ಆಗ ಪಕ್ಕದಲ್ಲೇ ಹೊರಟ ಒಂದು ಕೀರಲು ಧ್ವನಿ ಅವರ ಕಿವಿಗೆ ಬಿತ್ತು. ''...ಅದೆಂತಾ ಹುಡುಗಿಯ ಕೈಗೆ ಈಗ ಹಾಕುತ್ತಿರುವುದು....'' ಕೇಳಿದವರು ಯಾರೆಂದು ಧ್ವನಿಯಿಂದ ಗುರುತಿಸುವುದು ಸಾಧ್ಯವಿರಲಿಲ್ಲ. ಕಣ್ಣಿನಿಂದಂತೂ ಇನ್ನೂ ಅಸಾಧ್ಯವಾದದ್ದು. ಆದರೂ ಅವರು ಒಮ್ಮೆ ತಲೆ ಸಂಪೂರ್ಣ ಹೊರಳಿಸಿ ಮಗ್ಗುಲಿಗೇ ತಿರುಗಿನಿಂತು ನೋಡಿದರು.
ಈಗ ಇನ್ನಾರೋ ಉತ್ತರಿಸುತ್ತಿದ್ದರು. ನಾಗಮುರಿಗೆ ಅಂತೆ...! ಆ ಹುಡುಗಿಯ ಅಜ್ಜಿ ಕಡೆಯದಂತೆ. ''ದೇವರೇ?'' ಕೇಳಿದವಳು ಉದ್ಗರಿಸಿ, ಸ್ವಲ್ಪ ಹೊತ್ತಿನ ನಂತರ, ''....ಈಗಿನ ಕಾಲದಲ್ಲೂ ಇವೆಲ್ಲಾ ಬೇಕಾ....?'' ಎಂದು ಕೇಳಿದ್ದು ಕಿವಿಗೆ ಬಿದ್ದು, ಕಮಲತ್ತೆಯ ರಕ್ತ ಸರ್ರನೆ ಕುದ್ದು ಹೋಯಿತು.
''ಯಾರೋ ಮಾಡಿಸುವ ಯೋಗ್ಯತೆ ಇಲ್ಲದವಳು ಆಡಲಿಕ್ಕೆ ಏನಡ್ಡಿ....'' ಎಂದು ಮನಸ್ಸಿನಲ್ಲೇ ಹಲ್ಲು ಮುಡಿ ಕಚ್ಚಿದರು. ಆಗ-ಅದಾಗ ಮಗ್ಗುಲಲ್ಲೇ ಚಿರಪರಿಚಿತವಾದ ಒಂದು ಧ್ವನಿ ಅವರ ಕಿವಿ ಸೀಳಿತು.
''ಅಲ್ಲಾ ಅತ್ತೆಗೆ ಈ ವಯಸ್ಸಿನಲ್ಲೂ ಇದೆಂತಾ ಹುಚ್ಚು....! ತಮ್ಮ ಮಗನನ್ನ ಕಳೆದುಕೊಂಡ ನೆನಪೂ ಇವರಿಗಿಲ್ಲವಾ....! '' ಯಾರದು? ಭಾವಯ್ಯನವರ ಸೊಸೆಯೇ-ವಾಸಂತಿ ಸ್ವರ ತರವಿದೆ....? ಹದಿನಾಲ್ಕು ಸಾವಿರ ದುಡ್ಡು ಕೊಡಲಾಗದೇ ಅವನ ಕೊಲೆಯಾಯಿತು.... ಇಲ್ಲಿ ನೋಡಿದರೆ, ಅದಕ್ಕೆ ಇಪ್ಪತ್ತು ಸಾವಿರ ಅನ್ನುವರಪ್ಪ, ಅವನ ಜೀವನದ ಬೆಲೆಯೇ ಇದೆ ಅದರೊಳಗೆ....'' ಕಮಲತ್ತೆ ಯಾರೋ ಚಾಟಿಯಿಂದ ಹೊಡೆದಂತಾಗಿ, ಮತ್ತೊಂದು ಮಗ್ಗುಲಿಗೆ ಹೊರಳಿ ನೋಡಿದರು. ಅಲ್ಲಿ ಅವರಿಗೆ ಯಾರೂ ಕಾಣಲಿಲ್ಲ. ಹೇಳಿದವಳು ವಾಸಂತಿಯೇ....ಜಲಜಾಳೇ....ಸುಮತಿಯೇ ಒಂದೂ ಅವರಿಗೆ ತಿಳಿಯಲಿಲ್ಲ.
ಗಡಚಿಕ್ಕುವ ಮಂಟಪ ಸದ್ದು ಒಂದು ಕಡೆ. ಕಣ್ಣು ಕೋರೈಸುವ ನಾನಾ ಬಣ್ಣದ ಪುಟ್ಟ ಪುಟ್ಟ ಬಲ್ಬಿನ ದೀಪಗಳು ಮತ್ತೊಂದೆಡೆ...ಅನೇಕ ವರುಷಗಳಿಂದ ತಾವು ಭದ್ರ ಮಾಡಿ, ಊರೂರು ಸುತ್ತಿ ಕಡೆಗೆ ಉಡುಪಿಯ ಬಳಿಯ ಅಕ್ಕಸಾಲಿಯ ಕೈಯಲ್ಲಿ ಮಾಡಿಸಿದ ಹಳೇಕಾಲದ ನಾಗಮುರಿಗೆ ಮಾತ್ರ ಅವರ ಮಂದ ಕಣ್ಣುಗಳ ಮುಂದೆ ಅಪ್ಪಳಿಸುವ ಹಾಗೆ ಮೆರೆಯುತ್ತಿತ್ತು.
ಜಡೆಯಂತೆ ಸಣ್ಣ ಹೆಣಿಗೆಯ ಒತ್ತು ನೇಯ್ಗೆ ಬಾಲದ ತುದಿವರೆಗೂ ಇಡಿಸಿದ ಮಿಣಿ ಮಿಣಿ ಮಿನುಗುವ, ಚಿಕ್ಕ ಚಿಕ್ಕ ಮೆಣಸಿನ ಗುಂಡುಗಳು, ತಲೆ ಭಾಗದಲ್ಲಿ ಹೆಡೆ ಎತ್ತಿ ಐದು ಬೆರಳಿನಂತೆ ಇಷ್ಟಗಲ ಬಿಚ್ಚಿನಿಂತ ನಾಗರ... ತಮ್ಮ ಐದು ಗಂಡು ಮಕ್ಕಳ ತಲೆಯೂ ಅಲ್ಲಿ ಮಿಂಚುತ್ತಿರುವ ಹಾಗೆ... ಆದರೆ ಮಧ್ಯದ ಒಂದು ಬೆರಳು ಹೇಗೋ ಮೊಟಕಾಗಿದೆ.... ಹೆಡೆಯ ನೆತ್ತಿಯ ಮೇಲೆ ಕೂರಿಸಿದ್ದ ಕೆಂಪು ಹರಳಿನ ಪ್ರಜ್ವಲ ಬೆಳಕು ಅದರ ಮೇಲೆ ಮಾತ್ರ ಬಿದ್ದು ಮೊದಲೇ ಮೊಟಕಾದ ಆ ಬೆರಳಿನ ಮೇಲೆ ಇದ್ದಕ್ಕಿದ್ದಂತೆ ಓಕುಳಿಯಾಡುತ್ತಿರುವ ರಕ್ತ.... ಈಗ ಬಾಲದ ತುತ್ತತುದಿಯಲ್ಲಿ ಇರಿಸಿದ ಆ ನಾಲ್ಕೇ ನಾಲ್ಕು ಮುತ್ತುಗಳು ನಾಲ್ಕು ಹೆಣ್ಣು ಮಕ್ಕಳಂತೆ ಬಳುಕುತ್ತಾ ಮುಂದೆ ಸರಿಯುತ್ತಿವೆ.... ಬಾಲ ಸ್ವಲ್ಪ ಆಡಿದರೂ ಸಾಕು, ಅದರ ತಾಳಕ್ಕೆ ತಕ್ಕ ಹಾಗೆ ನೇತಾಡುತ್ತಾ ಲಯಬದ್ಧವಾಗಿ ತಲೆದೂಗುವ ಆ ಮುತ್ತಿನಲ್ಲಿ- ಅರೇ, ಹೌದಲ್ಲ ಒಂದು ಒಡೆದುಕೊಂಡಿದೆ.....
ಆಗಲೇ ಬಿರುಕು ಬಿಟ್ಟ ಅದು ಕತ್ತಲ ಆಳದಲ್ಲಿ ಎಲ್ಲವೂ ಪೊಳ್ಳು-ಖಾಲಿ ಎಂದು ತೋರಿಸುತ್ತಿದೆ......ಬಿಚ್ಚಿದ ಹೆಡೆಯ ಮಧ್ಯದಲ್ಲಿರುವ ಕರಿಮಚ್ಚೆಯ ಜಾಗದಲ್ಲಿ ವಿ ಆಕಾರದಲ್ಲಿ ಕೂರಿಸಿರುವ ಕೆಂಪು ಹರಳುಗಳು ಥಳಥಳ ಹೊಳೆದು, ಕೆಂಗಣ್ಣಾಗಿ, ಇನ್ನೊಂದು ಕ್ಷಣದಲ್ಲಿ ಭುಸುಗುಡುತ್ತಾ, ಇಡೀ ಮಂಟಪದ ಸುತ್ತಾ, ಅತ್ತಿಂದಿತ್ತ ಇತ್ತಿಂದತ್ತ ಹರಿದಾಡುತ್ತಾ, ಕ್ಷಣದಲ್ಲಿ ಎಲ್ಲವನ್ನೂ ಧ್ವಂಸ ಮಾಡುವಂತೆ ನಾಲಿಗೆ ಚಾಚುತ್ತಿದೆ. ಅದರ ಕಣ್ಣು ಅತ್ತಿತ್ತ ಚಲಿಸಿ- ಹೌದಲ್ಲ- ಈಗ ಸ್ಥಿರವಾಗಿ ತಮ್ಮತ್ತಲೇ ನೆಟ್ಟಿದೆ. ತಾವೀಗ ಓಡಬೇಕು....ಓಡಬೇಕು...
ಅವರು ಬಾಯಿ ತೆರೆದರು. ತಮ್ಮ ಸೊಸೆಯಂದಿರನ್ನು ಕೂಗಬೇಕು ಎಂದುಕೊಂಡರು. ತಮ್ಮ ಗಂಡುಮಕ್ಕಳನ್ನು ಕರೆಯಬೇಕು ಎಂದುಕೊಂಡರು. ಮಸುಕಾದ ತಮ್ಮ ಕಣ್ಣಿಗೆ ಏನೂ ಕಾಣದಂತಾಗಿ,ಕೈ ಅಡ್ಡ ಹಿಡಿದು, ಯಾರು....ಯಾರು.....ಯಾರಲ್ಲಿ....ಎಂದು ತೊದಲಲು ಹೋದವರಿಗೆ ಇದ್ದಕ್ಕಿದ್ದಂತೇ ಬಾಯಿ ಗೊರ.....ಗೊರ...ಅಂತೆನ್ನಿಸಿ, ಶಾರದೇ....ಶಾರದೇ....ಶಾರದೇ...ಎಂದು ತಾವು ಕರೆಯುತ್ತಿರುವುದು ಯಾರನ್ನು ಎಂಬುದು ತಮಗೇ ತಿಳಿಯದಂತೆ. ಅಂಥಾ ಒಬ್ಬಳು ಆ ಮನೆಯಲ್ಲಿ ಹುಟ್ಟಿದ್ದಳೇ ಇಲ್ಲವೇ ಎಂಬುದರ ಅರಿವು ಇರದವರಂತೆ ಬಾಯಿ ತುಂಬಾ ಕರೆಯುತ್ತಾ....ಅಥವಾ ಕರೆಯುತ್ತಿರುವವರಂತೆ ಬಾಯಿ ಅಲ್ಲಾಡಿಸುತ್ತಾ.... ತುಂಬಿದ ಮದುವೆಯ ಮನೆಯಲ್ಲಿ ಒಂದು ಶೂನ್ಯ ನೋಟ ಚೆಲ್ಲಿ ಮಂಕಾಗಿ, ಪೆಚ್ಚಾಗಿ, ಮಿಣಿಮಿಣಿಯಾಗಿ ನಿಂತವರು-ಹಾಗೇ ನಿಂತಿದ್ದರು...
|