ನವೆಂಬರ್ 1 ಬಂತೆಂದರೆ ಕರ್ನಾಟಕದಲ್ಲಿ ಸಂಭ್ರಮದ ವಾತಾವರಣ. ಅಂದು ಸರ್ಕಾರಿ ಕಚೇರಿಗಳಿಗೆ ರಜೆ. ಕನ್ನಡ ಸಂಘಟನೆಗಳು ಕನ್ನಡ ಮಂತ್ರವನ್ನು ಪಠಿಸುತ್ತವೆ. ಎಲ್ಲೆಲ್ಲೂ ಕನ್ನಡ ನಾಟಕಗಳು, ಸಮಾರಂಭಗಳು ನಡೆಯುತ್ತವೆ. ಆದರೆ ವರ್ಷಕ್ಕೊಮ್ಮೆ ರಾಜ್ಯೋತ್ಸವ ಆಚರಿಸಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಬಗ್ಗೆ ಭಾಷಣ ಬಿಗಿದು, ನಾಟಕ, ಸಮಾರಂಭಗಳನ್ನು ಏರ್ಪಡಿಸಿ ಸಂಭ್ರಮದಲ್ಲಿ ಮುಳುಗುವ ನಾವು ಬಳಿಕ ಕನ್ನಡವನ್ನು ಮರೆತೇ ಬಿಡುತ್ತೇವೆ.
ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಹೊರರಾಜ್ಯದವರು ಪ್ರವೇಶಿಸಿದರೆ ಇದು ಕರ್ನಾಟಕದ ರಾಜಧಾನಿಯೇ ಎನ್ನುವ ಅನುಮಾನ ಅವರಿಗೆ ಮೂಡಬಹುದು.
ಬೆಂಗಳೂರು ಬಹುಭಾಷಾಪಂಡಿತರ ಬೀಡಾಗಿರುವುದು ಪರಭಾಷಿಕರಿಗೆ ಸಂವಹನ, ವ್ಯವಹಾರ ಸುಲಭವೆನಿಸುತ್ತಿದೆ. ತಮ್ಮ ಮಾತೃಭಾಷೆಯಲ್ಲೇ ವ್ಯವಹರಿಸುತ್ತಾ, ಕನ್ನಡಕಲಿಯುವ ಗೋಜಿಗೇ ಹೋಗದ ಪರಭಾಷಿಕರೂ ಇದ್ದಾರೆ. ತೆಲುಗು ಭಾಷಿಕರೊಂದಿಗೆ ತೆಲುಗಿನಲ್ಲಿ, ತಮಿಳುಭಾಷಿಕರೊಂದಿಗೆ ತಮಿಳಿನಲ್ಲಿ, ಹಿಂದಿ ಭಾಷಿಕರೊಂದಿಗೆ ಹಿಂದಿಯಲ್ಲಿ ಸಂಭಾಷಿಸುತ್ತಾ, ಕಡೆಗೆ ಮನೆಯಲ್ಲಿ ಮಕ್ಕಳೊಂದಿಗೆ ಇಂಗ್ಲೀಷ್ ಮಾತನಾಡುತ್ತಾ ಕನ್ನಡವನ್ನು ಮೂಲೆಗುಂಪು ಮಾಡುವ ಕನ್ನಡಿಗರೂ ನಮ್ಮಲ್ಲಿದ್ದಾರೆ.
ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಓದುವ ಕನ್ನಡಿಗ ಮಕ್ಕಳನ್ನು ನೀವು ಮಾತನಾಡಿಸಿ ನೋಡಿ, ಅವರು ಕನ್ನಡಮಾತನಾಡಲು ತಡವರಿಸುವುದು ಕಂಡುಬರುತ್ತದೆ. ಶಾಲೆಗಳಲ್ಲಿ ಕನ್ನಡಮಾತನಾಡಿದರೆ ದಂಡವಿಧಿಸುವುದು ಬೇರೆ ವಿಚಾರ. ಆದರೆ ತಂದೆತಾಯಿಯರು ಕೂಡ ಕನ್ನಡದಲ್ಲಿ ಮಾತನಾಡುವುದನ್ನು ಮನೆಯಲ್ಲಿ ಸರಿಯಾಗಿ ಕಲಿಸುವುದಿಲ್ಲ. ಮಮ್ಮಿ, ಡ್ಯಾಡಿ ಸಂಸ್ಕೃತಿಯನ್ನೇ ಮಕ್ಕಳಲ್ಲಿ ರೂಢಿಸುವ ಹಿರಿಯರು ಮಕ್ಕಳೊಂದಿಗೆ ಇಂಗ್ಲಿಷ್ನಲ್ಲಿ ಮಾತನಾಡುತ್ತಾ ಕನ್ನಡ ಭಾಷೆಗೆ ಕೊಡಲಿಪೆಟ್ಟು ಹಾಕುತ್ತಾರೆ. ಕನ್ನಡ ಮಾತನಾಡಿದರೆ ತಮ್ಮ ಗೌರವಕ್ಕೆ ಕುಂದು ಎನ್ನುವ ಭಾವನೆ ಕೆಲವು ಪ್ರತಿಷ್ಠಿತ ವರ್ಗದ ಕನ್ನಡಿಗರಲ್ಲಿ ಇರುತ್ತದೆ.
ಕನ್ನಡ ಎಂದರೆ ಎನ್ನಡ ಎನ್ನುವ ಪರಭಾಷಿಕರು ಕನ್ನಡ ಕಲಿಯಲೇಬೇಕಾದ ಅನಿವಾರ್ಯ ಸ್ಥಿತಿಯನ್ನು ಸರ್ಕಾರ ಮತ್ತು ಜನತೆ ನಿರ್ಮಿಸಬೇಕಾಗಿದೆ. ಕನ್ನಡದ ಬಗ್ಗೆ ತಾತ್ಸಾರ ಮನೋಭಾವ ತಾಳದೇ ಕನ್ನಡವೇ ನನ್ನುಸಿರು ಎನ್ನುವ ಭಾವನೆ ಕನ್ನಡಿಗರಲ್ಲಿ ಮೂಡಬೇಕು. ಹೀಗಾದಾಗ ಮಾತ್ರ ರಾಜ್ಯೋತ್ಸವ, ಕನ್ನಡ ಉತ್ಸವಗಳು ಅರ್ಥಪೂರ್ಣವೆನಿಸುತ್ತವೆ. |