ಕನ್ನಡಿಗರಾದರೋ ಇದೇ ಢೋಂಗೀ ರಾಜಕೀಯ ನಾಯಕರ ಮತ್ತು ಸ್ವಘೋಷಿತ ಕನ್ನಡ ಹೋರಾಟಗಾರರನ್ನೇ ನೆಚ್ಚಿಕೊಂಡಿದ್ದು, ಕನ್ನಡದ ಸ್ವಾಭಾವಿಕ ಬೆಳವಣಿಗೆಗೆ ಬಿದ್ದ ಬಹುದೊಡ್ಡ ಹೊಡೆತವಾಯಿತು. ಕನ್ನಡ ಪ್ರೇಮವೆಂದರೆ, ಬರೇ ಮುಷ್ಕರ ಹರತಾಳ, ಅಂಗಡಿಗಳಿಗೆ ಕಲ್ಲು ಹೊಡೆಯುವುದು ಎಂಬ ಭಾವನೆ ಸಾಮಾನ್ಯ ಕನ್ನಡಿಗರಲ್ಲಿ ಬಂದುಬಿಟ್ಟಿತ್ತು. ಆದರೆ ಬದಲಾಗುತ್ತಿರುವ ಜಾಗತಿಕ ಪರಿಸರಕ್ಕೆ ಅವಕಾಶಕ್ಕೆ ಕನ್ನಡ ತನ್ನನ್ನು ತಾನು ಇಮ್ಮಡಿಗೊಳಿಸಿಕೊಂಡು ಸ್ವಸಾಮರ್ಥ್ಯದಿಂದ ಎದ್ದು ನಿಲ್ಲನಿಲ್ಲ.
ಕರ್ನಾಟಕದಲ್ಲಿ ಇರುವ ರಾಜಕೀಯ ಅಸ್ಥಿರತೆಯ ಲಾಭವನ್ನು ಚೆನ್ನಾಗಿಯೇ ಬಳಸಿಕೊಂಡಿರುವ ನೆರೆರಾಜ್ಯಗಳು ಮತ್ತು ರಾಷ್ಟ್ರೀಯ ರಾಜಕೀಯ ಪಕ್ಷಗಳು ಕರ್ನಾಟಕದ ಪಾಲು ಕಸಿದು ರಾಜಕೀಯ ಲಾಭ ಪಡೆಯುತ್ತಿವೆ. ಜೊತೆಗೆ ಎಲ್ಲ ಕ್ಷೇತ್ರಗಳಲ್ಲೂ ಇಂದು ಪಟ್ಟಭದ್ರ ಹಿತಾಸಕ್ತಿಗಳು ಪ್ರವೇಶಿಸುತ್ತಿರುವುದು ದೇಶದ ಸಮಗ್ರ ಅಭಿವೃದ್ಧಿಗೂ ತೊಡಕಾಗಿದೆ.
ಆದ್ದರಿಂದ ಜನಸಾಮಾನ್ಯರಿಗೆ ಹತ್ತಿರವಾದ ಭಾಷೆಯಲ್ಲಿ ವ್ಯವಹರಿಸುವುದು ಬದಲಾದ ಪರಿಸರದ ಅಗತ್ಯವಾಗಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಹಲವು ಹಿರಿಯ ಕಿರಿಯ ಭಾಷೆಗಳಿವೆ ಎಲ್ಲಕ್ಕೂ ತಮ್ಮದೇ ಆದ ವೈಶಿಷ್ಟ್ಯಗಳಿವೆ. ಭಾಷೆಯ ನಾಶವೆಂದರೆ ಅದು ಸಂಸ್ಕೃತಿಯ ನಾಶ ಎಂದೇ ಹೇಳಬೇಕು. ಆದರೆ ಸಂಪರ್ಕ ಮತ್ತು ಏಕತೆಯ ಹೆಸರಿನಲ್ಲಿ ಏಕ ಭಾಷೆಯ ಅಧಿಪತ್ಯ ಸ್ಥಾಪಿಸಹೊರಟಿರುವುದು ಮೂರ್ಖತನದ ದ್ಯೋತಕವಾಗಿದೆ. ಆದ್ದರಿಂದ ಈ ಸವಾಲು ಎದುರಿಸಲು ಕನ್ನಡಿಗರು ತಮ್ಮ ರಾಜಕೀಯ ನಾಯಕರನ್ನು ತಾವೇ ಸಜ್ಜುಗೊಳಿಸಬೇಕಿದೆ.
ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಕಳೆದೆರಡು ಶತಮಾನಗಳಲ್ಲಿ ಆಗಿದ್ದ ಬೆಳವಣಿಗೆ ಪ್ರಮಾಣ ಕಳೆದ ಕೇವಲ ಎರಡು ದಶಕಗಳಲ್ಲಿ ಆಗಿದೆಯೆಂದರೆ ಕನ್ನಡ ನುಡಿಯನ್ನು ಎಷ್ಟು ವೇಗದಲ್ಲಿ ಅಭಿವೃದ್ಧಿಗೊಳಿಸಬೇಕಿದೆ ಎಂಬ ಅರಿವು ನಮಗಾದೀತು. ನಿಜವಾದ ಅಭಿವೃದ್ಧಿಯ ಕಲ್ಪನೆ ಇರುವವರಿಗೆ ಭಾಷೆಯ ಅಭಿವೃದ್ಧಿಯ ಬಗ್ಗೆ ತಿಳಿದಿರುತ್ತದೆ. ಒಂದು ಪ್ರದೇಶದಲ್ಲಿ ಒಂದು ನುಡಿಯನ್ನಾಡುವ ಜನರು ತಮ್ಮದೇ ಆದ ಸಂಪರ್ಕ ಮತ್ತು ಸಂವಹನ ಕೌಶಲ್ಯವನ್ನು ಮೈಗೂಡಿಸಿಕೊಂಡಿರುತ್ತಾರೆ. ಆ ಪ್ರದೇಶದ ಎಲ್ಲರೂ ಏಕಕಾಲಕ್ಕೆ ಮತ್ತೊಂದು ನಡೆ-ನುಡಿಯನ್ನು ಕಲಿಯುವುದೆಂದರೆ ಅದು ಕದಡಿದ ನೀರಿನಲ್ಲಿ ಮೀನು ಹಿಡಿಯುವುದು ಎಂದೇ ಅರ್ಥೈಸಬೇಕು. ಸರ್ಕಾರ ಇದನ್ನು ಅರಿತುಕೊಂಡು ಕನ್ನಡ ಸಹಜ ಬೆಳವಣಿಗೆಗೆ ಪ್ರಾಮಾಣಿಕ ಪ್ರೋತ್ಸಾಹ ನೀಡಬೇಕಿದೆ.
'ಇತಿಹಾಸದ ಅರಿವಿದ್ದವನು ಇತಿಹಾಸ ನಿರ್ಮಿಸಬಲ್ಲ' ಎಂಬ ಮಾತಿನಂತೆ ನಮ್ಮ ನಾಯಕರು ಇತಿಹಾಸದಿಂದ ಪಾಠ ಕಲಿಯುವುದು ಸಾಕಷ್ಟಿದೆ. ಜಗತ್ತಿನ ಅನೇಕ ಚಕ್ರಾಧಿಪತ್ಯಗಳ ಅಳಿವು ಉಳಿವಿನ ಗತಿ ನಿರ್ಧರಿಸುವಲ್ಲಿ ಭಾಷೆ ಮತ್ತು ಸಂವಹನ ನಿರ್ಣಾಯಕ ಪಾತ್ರ ವಹಿಸಿದೆ. ಸಂಪರ್ಕ ಕ್ರಾಂತಿ ಏರ್ಪಟ್ಟಿರುವ ಇಂದಿನ ವಾತಾವರಣದಲ್ಲಿ ಕನ್ನಡವನ್ನು ಮುನ್ನಡೆಸಲು ಕನ್ನಡದ ಮಕ್ಕಳೆಲ್ಲ ಒಂದಾಗಿ ನಿಲ್ಲಬೇಕಿದೆ. |