ಮುಖ್ಯ ಪುಟ » ವಿವಿಧ » ವೆಬ್ ದುನಿಯಾ ವಿಶೇಷ 07 » ಗೆಳೆಯರ ದಿನ » ಹಳೆಯ ಗೆಳೆಯರ ಮರೆಯಬಹುದೇ..... (Friendship Day | Pals | Friends)
 
ಗೆಳೆಯರೇ ಶ್ರೇಷ್ಠ
WD
'ಹಳೆಯ ಕೆಳೆಯರ ಮರೆಯ ಬಹುದೇ ಕಳೆದ ಹಿಂದಿನ ದಿನಗಳಾ.... ' ಕನ್ನಡದ ಈ ಕವಿಯುಲಿ, ಗೆಳೆತನದ ಹರಹನ್ನು ಅರಿತವರಿಗಷ್ಟೇ ಅನುಭವವಾಗುವ ಸಾಲುಗಳು.

ಇಂದು ಆಚರಿಸುವ 'ಫ್ರೆಂಡ್‌ಶಿಪ್ ಡೇ' ಎಂಬ ಗೆಳೆಯರ ದಿನ ಈ ಭಾವನಾತ್ಮಕ ಸಂಬಂಧದ ವಾಣಿಜ್ಯೀಕರಣವಿರಬಹುದು.

ಆದರೆ ಪರಸ್ಪರ ಪೈಪೋಟಿ, ಕಿತ್ತಾಟ, ಥಳುಕಿನ ಈ ಯುಗಧರ್ಮದಲ್ಲಿ ಗೆಳೆತನದ ನವಿರು-ಭಾವನೆಗಳನ್ನು ಅರ್ಥೈಸುವವರು ಇರಬಹುದೇ...? ಇದ್ದಾರೆ ಲೈಮ್‌ಲೈಟ್‌ನಲ್ಲಿ ಕಾಣಲಾರರು ಅಷ್ಟೇ...

ಗೆಳೆಯರಲ್ಲಿ ಹಲವು ವಿಧ `ಅಂವ ನನ್‌ ಚಡ್ಡೀ ಗೆಳ್ಯಾ' ಅನ್ನುವಲ್ಲಿನ ಅತ್ಮೀಯತೆ, 'ನಾವಿಬ್ರೂ ಕ್ಲಾಸ್ಮೇಟ್ಸ್' ಅನ್ನುವಲ್ಲಿ ಇರಲು ಸಾಧ್ಯವಿಲ್ಲ ಅಥವಾ 'ಅವ ನಮ್ಮೂರವ' ಅನ್ನುವಲ್ಲೂ ಆ ತಾದಾತ್ಮ್ಯ ಇರಲಾರದು.

ಗೆಳೆತನವನ್ನು ವಿಶಾಲವಾಗಿ ನೆರಳು ಹರಡಿದ ವಟವೃಕ್ಷಕ್ಕೆ ಹೋಲಿಸಿದ ಕವಿಭಾವನೆಯೂ ಈ ಸಂದರ್ಭದಲ್ಲಿ ನೆನಪಾಗುತ್ತದೆ. 'ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು...' ಗೆಳೆಯರು ಎಂದರೆ ಪರಸ್ಪರರಿಗೆ ನೆರಳಾಗುವವರು, ಆ ನೆರಳಿಗೆ ಮೈ ಮರೆಸುವ ಹಿತಾನುಭವವಿರುತ್ತದೆ ಎಂಬುದೂ ಈ ಕವಿವಾಣಿಯಲ್ಲಿ ಅಧ್ಯಾಹಾರ. ಇದನ್ನೇ ಆಂಗ್ಲರು ' ಫ್ರೆಂಡ್ ಇನ್ ನೀಡ್ ಈಸ್ ಎ ಫ್ರೆಂಡ್ ಇಂಡೀಡ್' ಅಂದಿರಬಹುದು.

ಅಂದರೆ ಗೆಳೆತನದಲ್ಲಿ ಸ್ವಾರ್ಥ ಇರಬಹುದೇ ? ಈ ಮೇಲಿನ ಕಾವ್ಯಸಾಲುಗಳು ಅದನ್ನೇ ಹೇಳುತ್ತವೆಯಲ್ಲವೇ? ಇದ್ದರೂ ಇರಬಹುದು.ಅದಕ್ಕಾಗಿಯೇ 'ನಲ್ಲ ನಲ್ಲೆಯರೊಲವು, ಬಂಧು ಬಳಗದ ಬಲವು, ತನ್ನಿಚ್ಛೆ ಪೂರೈಸುವವರ ಛಲವು... ಎಳ್ಳಿನೇಳನಿತಾದರೂ ಸ್ವಾರ್ಥ ಹೊಂದಿಹವು..' ಎಂಬ ಕವಿವಾಣಿ ಉತ್ತರವಾಗಿ ಬಳಸಿಕೊಳ್ಳಬಹುದು ಎಂದನಿಸುತ್ತದೆ.

ಗೆಳೆತನದ ಕುರಿತಾಗಿ ಹೇಳುವಾಗ ಕಥೆಯೊಂದು ನೆನಪಾಗುತ್ತದೆ: ಬಹಳ ಹಿಂದಿನ ಕಾಲ. ರಾಜ್ಯವೊಂದಿತ್ತು. ಅಲ್ಲಿನ ರಾಜ ವೃದ್ಧನಾಗಿದ್ದ, ಈ ಸಂದರ್ಭದಲ್ಲಿ ಆತ ತನ್ನ ಇಬ್ಬರು ಮಕ್ಕಳನ್ನು ಕರೆದು- 'ಮಕ್ಕಳೇ ನನ್ನದೇನು ಇನ್ನು ಹೆಚ್ಚು ದಿನವಿಲ್ಲ. ನಿಮ್ಮಲ್ಲೊಬ್ಬರಿಗೆ ರಾಜ್ಯಾಧಿಕಾರದ ಪಟ್ಟಕಟ್ಟಬೇಕಿದೆ. ಅದಕ್ಕಾಗಿ ಒಂದು ಪರೀಕ್ಷೆ ಮಾಡಬೇಕೆಂದಿರುವೆ. ನೀವಿಬ್ಬರೂ ದೇಶಸಂಚಾರ ಮಾಡಿ ಸಂಪತ್ತು, ಶಕ್ತಿ ಸಂಚಯಿಸಿ ಬನ್ನಿ' ಎಂದು ತಿಳಿಸಿದ.

ಯುವಕರಿಬ್ಬರೂ ಒಂದೊಂದು ದಿಕ್ಕಿಗೆ ಸಂಚಾರ ಹೊರಟರು. ಕೆಲಕಾಲದ ಬಳಿಕ ಮರಳಿ ಬಂದರು. ಅವರಲ್ಲೊಬ್ಬ ಧನಧಾನ್ಯ, ಆಯುಧಗಳನ್ನು ಸಂಗ್ರಹಿಸಿ ತಂದಿದ್ದ- 'ಅಪ್ಪಾ ನೋಡು ಇನ್ನೇನು ನಾನೇ ರಾಜ, ಎಂತಹ ಶಕ್ತಿ ಸಂಚಯ ಮಾಡಿದ್ದೇನೆ' ಎಂದು ತನ್ನ ಹಕ್ಕಿಗಾಗಿ ವಾದಿಸಿದ.

ಇನ್ನೊಬ್ಬ ಬರಿಕೈಯಲ್ಲಿ ಬಂದು ತಂದೆಯ ಮುಂದೆ ನಿಂತ. ಬರಿಗೈಯಲ್ಲಿ ಬಂದು ನಿಂತ ಆತನನ್ನು ಮೊದಲನೆಯಾತ ತಿರಸ್ಕಾರದಿಂದ ನೋಡಿ, ವ್ಯಂಗ್ಯದ ನಗು ನಕ್ಕ. ಆಗ ತಂದೆಯೇ ಮಾತು ಆರಂಭಿಸಿದ- 'ಮಗನೇ ಹೇಗಿತ್ತು ದೇಶಸಂಚಾರ, ನೀನು ಯಾವ ರೀತಿ ಶಕ್ತಿಸಂಗ್ರಹಿಸಿದೆ?'. ಆಗ ಆತ ಉತ್ತರಿಸಿದ- ' ಅಪ್ಪಾ.. ಭೌತಿಕವಾಗಿ ನಾನೇನನ್ನೂ ಸಂಗ್ರಹಿಸಿಲ್ಲ... ಆದರೆ ಹೋದಲ್ಲೆಲ್ಲಾ ನನಗಾಗಿ ಪ್ರಾಣತ್ಯಾಗ ಮಾಡಲೂ ಸಿದ್ಧರಾದ ಗೆಳೆಯರನ್ನು ಹೊಂದಿದ್ದೇನೆ... ಅಷ್ಟೇ' ಎಂದು ಅಪ್ಪನ ಮುಖ ನೋಡಿದ.