ಮುಖ್ಯ ಪುಟ > ವಿವಿಧ > ವೆಬ್ ದುನಿಯಾ ವಿಶೇಷ 07 > ಅವಲೋಕನ-07
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂದ ವರುಷವಿಡೀ ಕಾಡಿದ ಅಣುಬಂಧ
ಯುಪಿಎ ನಿದ್ದೆಗೆಡಿಸಿದ ಎಡಪಕ್ಷಗಳು, ನಂದಿಗ್ರಾಮ, ಮೋದಿ ಮತ್ತು ನಿತಾರಿ
ಚಂದ್ರಾವತಿ ಬಡ್ಡಡ್ಕ
WD
ಇತಿಹಾಸದ ಪಟ್ಟಿಗೆ 2007 ಸೇರುತ್ತಿದೆ. ಎಲ್ಲ ವರ್ಷಗಳಂತೆಯೆ ಈ ವರ್ಷವೂ ಹರ್ಷ-ದುಃಖ, ಏರು-ಪೇರುಗಳನ್ನು ತನ್ನ ಉದರದಲ್ಲಿ ತುಂಬಿಸಿಕೊಳ್ಳುತ್ತಾ ಮುನ್ನಡೆದಿದೆ. ಕಾಲದ ತೆಕ್ಕೆಗೆ ಜಾರುತ್ತಿರುವ 2007ರ ಕೊನೆಯ ಮೆಟ್ಟಿಲಲ್ಲಿ ನಿಂತು ಹಿಂತಿರುಗಿ ನೋಡಿದರೆ ಸುದ್ದಿಗಳ ಬುತ್ತಿಯೊಳಗೆ ಹಲವಾರು 'ಐಟಂ'ಗಳಿವೆ. ರಾಜಕೀಯ, ಸಾಮಾಜಿಕ, ವೈಜ್ಞಾನಿಕ ಹೀಗೆ ಎಲ್ಲ ರಂಗಗಳಲ್ಲೂ ಏಳು ಬೀಳುಗಳಿವೆ.

ಈ ವರ್ಷ ದೇಶದ ಘಟನೆಗಳ ಕುರಿತು ಅವಲೋಕಿಸಿದಾಗ ತಟ್ಟೆಂದು ಗೋಚರವಾಗುವುದು, ಉತ್ತರ ಪ್ರದೇಶದ ನಿತಾರಿ ಸರಣಿ ಕೊಲೆ ಪ್ರಕರಣ, ಪಶ್ಚಿಮ ಬಂಗಾಳದ ನಂದಿಗ್ರಾಮ ಹಿಂಸಾಚಾರ, ಭಾರತ-ಅಮೆರಿಕ ಅಣುಒಪ್ಪಂದ ಕುರಿತು ರಾಜಕೀಯ ಪಕ್ಷಗಳ ಹಗ್ಗಜಗ್ಗಾಟ, ರಾಷ್ಟ್ರ ಕಂಡ ಪ್ರಥಮ ಮಹಿಳಾ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಕಂಡ ಪ್ರಥಮ ದಲಿತ ಮುಖ್ಯ ನ್ಯಾಯಾಧೀಶ, ಉಪಗ್ರಹ ತಂತ್ರಜ್ಞಾನದಲ್ಲಿ ಬರೆದ ಹೊಸ ಇತಿಹಾಸ, ಕ್ಷಿಪಣಿ ತಂತ್ರಜ್ಞಾನದ ಉನ್ನತಿ, ಪಂಜಾಬ್, ಗುಜರಾತ್, ಉತ್ತರ ಖಂಡ, ಹಿಮಾಚಲ ಪ್ರದೇಶಗಳ ಚುನಾವಣೆ, ರಾಜ್ಯ ಹಿಂದೆಂದೂ ಕಾಣದ ಕರ್ನಾಟಕದ ಕೆಟ್ಟಾ-ಕೊಳಕಾ 'ರಾಡಿಕೀಯ'....... ಹೀಗೆ ಸಾಗುತ್ತದೆ.

ನಿತಾರಿ ಸರಣಿ ಕೊಲೆ
ಕಳೆದ 2006ರ ಕೊನೆಯಲ್ಲಿ ಬಯಲಿಗೆ ಬಂದ ಉತ್ತರ ಪ್ರದೇಶದ ನೋಯ್ಡಾದ ನಿತಾರಿ ಎಂಬಲ್ಲಿನ ಸರಣಿ ಕೊಲೆ ಪ್ರಕರಣ ರಾಷ್ಟ್ರವನ್ನೇ ತಲ್ಲಣಗೊಳಿಸಿತ್ತು. ಚರಂಡಿಯಲ್ಲಿ ಮಾನವಮೂಳೆ ಪತ್ತೆಯಾದಾಗ ಈ ಅಮಾನುಷ ಪ್ರಕರಣ ಹೊರಜಗತ್ತಿಗೆ ಗೊತ್ತಾಗಿತ್ತು. ನಿತಾರಿಯ ನಿವಾಸಿ ಮೋನಿಂಧರ್ ಸಿಂಗ್ ಪಂಧೇರ್ ಹಾಗೂ ಆತನ ಕೆಲಸದಾಳು ಸುರೀಂದರ್ ಕೋಲಿ ಸುಮಾರು 20ಕ್ಕಿಂತಲೂ ಅಧಿಕ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಪಂಧೇರ್‌ನ ಒಂಟಿ ಬಂಗಲೆಯ ಹಿಂದಿನ ಚರಂಡಿಯಲ್ಲಿ ಗೋಣಿಚೀಲದಲ್ಲಿ ಕಟ್ಟಿ ಎಸೆದ ಮೂಳೆಗಳು ಪತ್ತೆಯಾಗಿದ್ದವು. ಈ ಪ್ರದೇಶದ ಮಕ್ಕಳು ಕಾಣೆಯಾಗುತ್ತಿದ್ದ ಬಗ್ಗೆ ದೂರುಗಳು ದಾಖಲಾಗುತ್ತಿದ್ದರೂ, ಅವರು ಎಲ್ಲಿ ಹೋಗುತ್ತಿದ್ದರೆಂಬ ಅಂಶ ಪತ್ತೆ ಆಗಿರಲಿಲ್ಲ. ಬಾಲಕಿಯರನ್ನು ಮತ್ತು ಮಹಿಳೆಯರನ್ನು ಆಮಿಷ ಒಡ್ಡಿ, ಕೋಲಿ ಬಂಗಲೆಗೆ ಕರೆದೊಯ್ಯುತ್ತಿದ್ದ. ಈ ಧೂರ್ತರ ಕುಕೃತ್ಯಕ್ಕೆ ಬಲಿಯಾದ ಹೆಚ್ಚಿನ ಬಾಲಕಿಯರು ಮತ್ತು ಮಹಿಳೆಯರು ಕೊಳಗೇರಿ ನಿವಾಸಿಗಳು.

ಈ ಪ್ರಕರಣದ ಕುರಿತಂತೆ ರಂಗುರಂಗಿನ ವಿಷಯಗಳು ಬಿತ್ತರಗೊಂಡಿದ್ದರೂ ನಿಖರವಾದ ವಿಚಾರಗಳು ಇನ್ನೂ ಗೊತ್ತಾಗಿಲ್ಲ. ಉದ್ಯಮಿ ಪಂಧೇರ್ ಮತ್ತು ಆತನ ಆಳು ಕೋಲಿ ಮಹಿಳೆಯರನ್ನು ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದರು, ಅಂಗಾಂಗ ಮಾರಾಟಕ್ಕಿಳಿದಿದ್ದರು, ದೊಡ್ಡದೊಡ್ಡ ವ್ಯಕ್ತಿಗಳ ಮೋಜಿಗೆ ಮಹಿಳೆಯರನ್ನು ಒಪ್ಪಿಸುತ್ತಿದ್ದರು, ಕೋಲಿ ಒಬ್ಬ ನರಮಾಂಸ ಭಕ್ಷಕ, ವಿಕೃತ ಕಾಮಿ - ಎಂಬೆಲ್ಲ ಸುದ್ದಿಗಳು ಬಿತ್ತರವಾಗಿದ್ದವು.

ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಬಿಐ ಸಲ್ಲಿಸಿರುವ ಎರಡು ಕಂತಿನ ದೋಷಾರೋಪಣೆ ಪಟ್ಟಿಯಲ್ಲೂ ಪಂಧೇರ್ ಮೇಲೆ ಯಾವುದೇ ದೋಷ ಹೊರಿಸದಿರುವುದು ವ್ಯವಸ್ಥೆಯ ವ್ಯಂಗ್ಯ. ಈ ಮಧ್ಯೆ, ಆತ ಬಣ್ಣದ ಬದುಕಿಗೆ ಅಡಿ ಇಡಲು ಸಜ್ಜಾಗುತ್ತಿದ್ದಾನೆ ಎಂದು ವರದಿಯಾಗಿದೆ. ಪಂಧೇರ್ ವಿರುದ್ಧ ದೂರು ನೀಡಿದ್ದ, ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ, ಕೊಲೆಯಾದ ಹುಡುಗಿ ಪಾಯಲ್ ಎಂಬಾಕೆಯ ತಂದೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಹಿಂಜರಿದು ತಿರುಗಿ ಬಿದ್ದಿದ್ದಾನೆ.

ಇಷ್ಟರಲ್ಲಿ ಸಮಾಧಾನಕರ ವಿಚಾರವೆಂದರೆ, ಪಂಧೇರ್ ಮೇಲೆ ಯಾವುದೇ ಆರೋಪ ಹೊರಿಸದಿರಲು ಕಾರಣವೇನು ಎಂಬುದಾಗಿ ಸುಪ್ರೀಂ ಕೋರ್ಟ್ ಸಿಬಿಐಯನ್ನು ಪ್ರಶ್ನಿಸಿದೆ.

ನಂದಿಗ್ರಾಮ ಹಿಂಸಾಚಾರ
ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಸರ್ಕಾರದ ವಿಶೇಷ ಆರ್ಥಿಕ ವಲಯಕ್ಕೆ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾದಾಗ ರೈತರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿದ್ದು, ಪ್ರತಿಭಟನೆ ವಿಕೋಪಕ್ಕೆ ಹೋಗಿತ್ತು. ತೃಣಮೂಲ ಕಾಂಗ್ರೆಸ್ ಪಕ್ಷದ ಬೆಂಬಲದ ಭೂಮಿ ಉಚ್ಚಡ್ ಪ್ರತಿರೋಧ್ ಸಮಿತಿ ವತಿಯಿಂದ ನಡೆದ ಪ್ರತಿಭಟನೆ ಆಡಳಿತಾರೂಢ ಸಿಪಿಎಂನೊಂದಿಗೆ ತಿಕ್ಕಾಟ ಉಂಟು ಮಾಡಿದ್ದು, ಮಾರ್ಚ್ ತಿಂಗಳಲ್ಲಿ ನಡೆದ ಗೋಲಿಬಾರ್‌ನಲ್ಲಿ 14 ಮಂದಿ ಹತರಾಗಿದ್ದರು.

ವಿಶೇಷ ಆರ್ಥಿಕ ವಲಯಕ್ಕೆ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ತೃಣಮೂಲ ಕಾಂಗ್ರೆಸ್ಸಿನ ನಾಯಕಿ ಮಮತಾ ಬ್ಯಾನರ್ಜಿ 25 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆಡಳಿತಾರೂಢ ಸಿಪಿಎಂ ಕಾರ್ಯಕರ್ತರು ವಿವಾದಿತ ಭೂಮಿಯಲ್ಲಿ ಸಾಕಷ್ಟು ಹಿಂಸಾಚಾರ ನಡೆಸಿದ್ದು, ಗ್ರಾಮಸ್ಥರಿಗೆ ಇನ್ನಿಲ್ಲದ ಹಿಂಸೆ ನೀಡಿ ಮನಬಂದಂತೆ ವರ್ತಿಸಿರುವುದು ರಾಷ್ಟ್ರವ್ಯಾಪಿ ಟೀಕೆಗೆ ಗುರಿಯಾಗಿದೆ.

ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಸರ್ಕಾರ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸಿದೆ. ಈ ವಿಚಾರ ಸಂಸತ್ತಿನ ಹಲವು ಗಂಟೆಗಳನ್ನು ತಿಂದು ಹಾಕಿತ್ತು. ಎಲ್ಲವೂ ಆದ ಬಳಿಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ನಂದಿಗ್ರಾಮ ವಿಚಾರದಲ್ಲಿ ಸರ್ಕಾರದ ವೈಫಲ್ಯದ ಕುರಿತು ತಪ್ಪೊಪ್ಪಿಕೊಂಡಿದ್ದರು.

ಸಂಬಂಧ ಕಡಿದ ಅಣುಬಂಧ
ಈ ವರ್ಷ ರಾಷ್ಟ್ರದ ಗಮನ ಸೆಳೆದ ಇನ್ನೊಂದು ಪ್ರಮುಖ ವಿಚಾರವೆಂದರೆ, ಉದ್ದೇಶಿತ ಭಾರತ-ಅಮೆರಿಕ ಅಣುಒಪ್ಪಂದ. ಈ ಒಪ್ಪಂದದ ಅಂಶಗಳು ಪಾರದರ್ಶಕವಾಗಿಲ್ಲ, ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆಯುಂಟುಮಾಡುವಂತಹವು ಮತ್ತು ಇದಕ್ಕೆ ಸಹಿಮಾಡಿದಲ್ಲಿ ನಮ್ಮ ಅಣುನೀತಿಯ ಜುಟ್ಟನ್ನು ಅಮೆರಿಕದ ವಶಕ್ಕೆ ಒಪ್ಪಿಸಿದಂತಾಗುತ್ತದೆಂದು ಕೇಂದ್ರದ ಆಡಳಿತಾರೂಢ ಯುಪಿಎ ಮೈತ್ರಿಕೂಟದ ಮಿತ್ರಪಕ್ಷ, ಬಾಹ್ಯ ಬೆಂಬಲ ನೀಡುತ್ತಿರುವ ಎಡಪಕ್ಷಗಳು ಕೇಂದ್ರದ ಕ್ರಮಕ್ಕೆ ತೀವ್ರ ದಾಳಿಮಾಡಿವೆ. ಕನಿಷ್ಠ ಹತ್ತು ಬಾರಿಯಾದರೂ, ಬೆಂಬಲ ವಾಪಾಸು ಪಡೆಯುವ ಬೆದರಿಕೆ ಹಾಕಿದ್ದವು.

ಈ ಅಣುಒಪ್ಪಂದವು ವಿರೋಧ ಪಕ್ಷಗಳಿಂದಲೂ ಟೀಕೆಗೆ ಒಳಗಾಗಿದ್ದು, ಮನಮೋಹನ್ ಸಿಂಗ್ ಸರ್ಕಾರ, ಹಾಗೂ ವೈಯಕ್ತಿಕವಾಗಿ ಮನಮೋಹನ್ ಸಿಂಗ್ ಅವರೂ ನಿರಾಸೆಗೊಂಡಿದ್ದರು. ಅಣು ಒಪ್ಪಂದದ ಕುರಿತಂತೆ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯೊಂದಿಗೆ ಮಾತುಕತೆಯೇ ನಡೆಸಬಾರದು ಎಂಬ ವಿರೋಧ ವ್ಯಕ್ತಪಡಿಸಿದ್ದ ಎಡಪಕ್ಷಗಳು, ಸಂಸತ್‌ನ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಪಟ್ಟು ಸಡಿಲಿಸಿ ಕೊಂಚ ಮೃದು ಧೋರಣೆ ವ್ಯಕ್ತಪಡಿಸಿದ್ದವು.

ನಂದಿಗ್ರಾಮ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ಚಾ..ಚೂ ಎಂದಿರಲಿಲ್ಲ. ಅಧಿವೇಶನ ಮುಗಿಯುತ್ತಲೇ ಮತ್ತೆ ಕಟುನಿಲುವು ತಳೆದ ಕಮ್ಯೂನಿಸ್ಟ್ ಪಕ್ಷ, ಒಂದು ಹಂತದಲ್ಲಿ ಮಧ್ಯಂತರ ಚುನಾವಣೆಗೆ ಸಿದ್ಧ ಎಂದು ಹೇಳಿತು. ಬಳಿಕ ಹಾಗೆ ಹೇಳಿಯೇ ಇಲ್ಲ, ಮಾಧ್ಯಮಗಳು ತನ್ನ ಹೇಳಿಕೆಯನ್ನು ತಿರುಚಿವೆ ಎಂದು ತಿಪ್ಪೆ ಸಾರಿತ್ತು. ಅದೇನಿದ್ದರೂ, ಈ ಅಣುಬಂಧ ಯಾವ ಕ್ಷಣದಲ್ಲೂ ರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆಯನ್ನು ತಂದಿಕ್ಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
  1 | 2 | 3 | 4  >> 
ಮತ್ತಷ್ಟು
2007: ಏರಿದ ಮೆಟ್ಟಿಲುಗಳ ಮರೆಯುವ ಮುನ್ನ...
ಸಾನಿಯಾ ಮತ್ತು 2007
2007: ಘರ್ಜಿಸಿದ ಬಂಗಾಳದ ಹುಲಿ ಗಂಗೂಲಿ
ಫುಟ್ಬಾಲ್‌ಗೆ ಸವಿನೆನಪಿನ ವರುಷದ ಹರುಷ
ದೇಶವ ಸೆಳೆಯಿತು ಗಮನ- ವೇಣುಗೋಪಾಲ್-ರಾಮದಾಸ್ ಕದನ
ಭಾರತ- ಚೀನಾ ಬಾಂಧವ್ಯ ವೃದ್ಧಿ, ಪರಮಾಣು ಬಾಂಧವ್ಯದತ್ತ ಕೆಂಗಣ್ಣು