ಸಂಸತ್ತಿನಲ್ಲಿಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ, 2008-09ನೇ ಸಾಲಿನ ಬಜೆಟ್ ಮಂಡನೆ ಕುರಿತು ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಡಳಿತ ಪಕ್ಷಗಳು ಜನಪರ ಎಂದು ಹೇಳಿಕೆ ನೀಡಿದರೆ, ಬಜೆಟ್ ನಿರಾಶದಾಯಕ ಎಂಬುದು ವಿರೋಧ ಪಕ್ಷಗಳ ಉತ್ತರ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಜೆಟ್ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ, ರೈತರಿಗೆ ನಿರೀಕ್ಷಿತ ಮಟ್ಟದಲ್ಲಿ ಸಾಲ ಮನ್ನಾ ಮಾಡಿಲ್ಲ. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಮಾತ್ರ ಸಾಲ ಮನ್ನಾ ಮಾಡಲಾಗಿದ್ದು, ತಾರತಮ್ಯ ನೀತಿ ಅನುಸರಿಸಿದೆ ಎಂದು ಆರೋಪಿಸಿದರು.
ರೈತರಿಗೆ ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕುಗಳ ಸಾಲ ಮನ್ನಾ ಮಾಡಬೇಕು ಹಾಗೂ ದೇಶದ ಎಲ್ಲಾ ರೈತರಿಗೆ ಸಾಲಮನ್ನಾ ಯೋಜನೆಯ ಲಾಭ ಸಿಗಬೇಕೆಂದು ಬಿಜೆಪಿ ದೇಶಾದ್ಯಂತ ಹೋರಾಟ ನಡೆಸಲಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್, ರೈತರಿಗೆ ನೀಡಿರುವ ಸಾಲ ಮನ್ನಾ ಯೋಜನೆ ಸ್ವಾಗತಾರ್ಹ. ಇದನ್ನು ಎಲ್ಲಾ ವರ್ಗದ ರೈತರಿಗೆ ವಿಸ್ತರಿಸಬೇಕೆಂದು ಆಗ್ರಹಿಸಿದರು.
ಬಡ ರೈತರ ನೆರವಿಗೆ ಧಾವಿಸಬೇಕೆಂದು ಈಗಾಲಾದರೂ ಯುಪಿಎ ಸರ್ಕಾರದ ಅರಿವಿಗೆ ಬಂದಿರುವುದು ಒಂದು ಉತ್ತಮ ಬೆಳವಣಿಗೆ. ಹಾಗಂತ ರೈತರನ್ನು ವಿಭಜಿಸಿ, ಸೌಲಭ್ಯ ವಂಚಿತರನ್ನಾಗಿ ಮಾಡಬಾರದೆಂದು ಮನವಿ ಅವರು ಮಾಡಿದರು.
|