ಮುಖ್ಯ ಪುಟ » ವಿವಿಧ » ವೆಬ್‌ದುನಿಯಾ ವಿಶೇಷ 08 » ಗಣೇಶ ಚತುರ್ಥಿ » ಓಂಕಾರ ಸ್ವರೂಪಿ ಗಣನಾಯಕ
 
ಡಾ| ಆರ್.ಸಿ.ಓಝಾ
WD
ಪರಮತತ್ವ ಓಂಕಾರದ ಸಾಕ್ಷಾತ್ ಸ್ವರೂಪ, ಋದ್ಧಿ-ಸಿದ್ಧಿ ದಾಯಕ ಸಚ್ಚಿದಾನಂದ ಸ್ವರೂಪಿ ಶ್ರೀ ಗಣೇಶನ ಸ್ತುತಿಮಾತ್ರದಿಂದಲೇ ಆತ್ಮವು ಆಧ್ಯಾತ್ಮ ಸುಧಾ ಸಿಂಧುವಿನಲ್ಲಿ ಸ್ನಾನ ಮಾಡಿ ಪಾವನವಾದ ಅನುಭೂತಿಯಾಗುತ್ತದೆ. ಶ್ರೀಗಣೇಶನ ಪುಣ್ಯ ಸ್ಮರಣೆಯು ಜೀವನದಲ್ಲಿ ಆತ್ಮಜ್ಞಾನದ ಮಾರ್ಗವನ್ನು ಸುಗಮವಾಗಿಸುತ್ತದೆ.

ಮಹಾಭಾರತದ ರಚನೆಕಾರ ವೇದವ್ಯಾಸ, ಜ್ಞಾನೇಶ್ವರ, ಏಕನಾಥ, ಸ್ವಾಮಿ ರಾಮದಾಸ ಮುಂತಾದ ಅನೇಕ ಸಂತರು ಶ್ರೀ ಗಣೇಶನ ಓಂಕಾರ ಸ್ವರೂಪದ ಗುಣಗಾನ ಮಾಡಿದ್ದಾರೆ. ಸಂತ ತುಳಸೀದಾಸ ತನ್ನ ಪ್ರಖ್ಯಾತ ಕೃತಿ ಶ್ರೀರಾಮಚರಿತ ಮಾನಸದಲ್ಲಿ ಎಲ್ಲಕ್ಕಿಂತ ಮೊದಲಾಗಿ ಶ್ರೀ ಗಣೇಶನಿಗೇ ವಂದಿಸಿದ್ದಾನೆ.

ಪ್ರತಿಯೊಂದು ಮಂಗಳ ಕಾರ್ಯದ ಆರಂಭದಲ್ಲಿ ಶ್ರೀಗಣೇಶನ ಆವಾಹನೆ, ಸಂಸ್ಥಾಪನೆ ಮತ್ತು ಪೂಜೆ ಮಾಡಲಾಗುತ್ತದೆ. ಮಹಾಭಾರತ ಕಾಲಕ್ಕೂ ಬಹು ಹಿಂದೆಯೇ ಗಣೇಶ ಪೂಜೆ ಅಥವಾ ಗಣೇಶ ಚತುರ್ಥಿ ವ್ರತ ಇತ್ತೆಂಬುದಕ್ಕೆ ಪೌರಾಣಿಕ ಪುರಾವೆಗಳಿವೆ. ಸ್ವಯಂ ಭಗವಾನ್ ಶ್ರೀಕೃಷ್ಣನೇ ಗಣೇಶನ ವ್ರತ ಆಚರಿಸಿದ್ದ ಎಂದೂ ಶಾಸ್ತ್ರ-ಪುರಾಣಗಳು ಹೇಳುತ್ತವೆ.

ಗಣೇಶನು ಮಂಗಳಕಾರಕವೂ ನಿಘ್ನ ನಿವಾರಕನೂ ಆಗಿದ್ದಾನೆ ಮತ್ತು ವಿದ್ಯಾ-ಬುದ್ಧಿಯ ಅಭೀಷ್ಟ ಪ್ರದಾಯಕನೂ ಆಗಿದ್ದಾನೆ. ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ಥೀ ತಿಥಿಯಂದು ಭಗವಾನ್ ಗಣೇಶನ ಅವತಾರವಾಯಿತು. ಗಣೇಶ ಪುರಾಣದ ಎರಡನೇ ಅಧ್ಯಾಯದಲ್ಲಿ ಇದರ ಉಲ್ಲೇಖವಿದೆ.

ಶ್ರೀ ಗಣೇಶನಿಗೂ ಹಲವು ನಾಮಗಳಿವೆ. ಗಜಾನನ, ವಿನಾಯಕ, ಗಣೇಶ, ಗಣಪತಿ, ಲಂಬೋದರ, ಗಣೇಶ್ವರ, ಗೌರಿಪುತ್ರ, ಸ್ಕಂದಾಗ್ರಜ, ದಶಾಧ್ಯಕ್ಷ, ಗಣಾಧ್ಯಕ್ಷ, ಇಂದ್ರಶ್ರೀ, ಏಕದಂತ, ಸೂರ್ಯಕರ್ಣ, ಹೇರಂಬ, ಪಾಶಾಂಕುಶಧರ, ನಿರಂಜನ, ವರದ, ಸಿದ್ಧಿದಾಯಕ, ಸುಭಗ, ಕಾಂತ, ವಕ್ರತುಂಡ ಮುಂತಾದ 108 ಹೆಸರುಗಳಿಂದ ಶ್ರೀಗಣೇಶನನ್ನು ಸ್ತುತಿಸಲಾಗುತ್ತದೆ.

ಸಂಕಟ ನಿವಾರಣೆಗಾಗಿ ಶ್ರೀಗಣೇಶನ ಸ್ಮರಣೆ ಮಾಡಿದಲ್ಲಿ ಅದು ರಾಮ ಬಾಣದಂತೆ ಕೆಲಸ ಮಾಡುತ್ತದೆ ಎಂಬುದು ಭಗವದ್ಭಕ್ತರ ನಂಬಿಕೆ. ಇದೇ ಕಾರಣಕ್ಕೆ ಸಂಕಷ್ಟಹರ ಚತುರ್ಥಿ ವ್ರತ ಆಚರಿಸಲಾಗುತ್ತದೆ. ಸೂರ್ಯನ ಎದುರು ಚಂದ್ರನು ಹನ್ನೆರಡನೇ ಅಂಶವಾದಾಗ ಒಂದು ತಿಥಿ ಎಂದು ಪರಿಗಣಿಸಲಾಗುತ್ತದೆ. ಇದರ ಪ್ರಕಾರ, ಹುಣ್ಣಿಮೆಯ 48ರಿಂದ 60 ಅಂಶದ ಚಂದ್ರನ ಕಾಲಘಟ್ಟವನ್ನು ಸಂಕಷ್ಟ ಚತುರ್ಥಿ ತಿಥಿ ಎಂದು ತಿಳಿಯಲಾಗುತ್ತದೆ.

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: