ನಾಗೇಂದ್ರ ತ್ರಾಸಿ ದೇಶ-ವಿದೇಶಗಳಲ್ಲೂ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿ ಇಂದು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಖಾಸಗಿಯಾಗಿ ನಡೆಯುತ್ತಿದ್ದ ಚೌತಿ ಸಂಭ್ರಮಕ್ಕೆ ಅಂದು ದೇಶಪ್ರೇಮಿಗಳಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಲು 1893ರಲ್ಲಿ ಬಾಲಗಂಗಾಧರ್ ತಿಲಕ್ ಅವರು ಮಹಾರಾಷ್ಟ್ರದಲ್ಲಿ ಅದಕ್ಕೊಂದು ನೂತನ ಸ್ವರೂಪ ನೀಡಿದರು.
WD
ಬಳಿಕ ಗಣೇಶನ ಹಬ್ಬ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿ, ರಾಷ್ಟ್ರೀಯ ಹಬ್ಬವಾಗಿರುವುದು ಇತಿಹಾಸ. ಸ್ವಾತಂತ್ರ್ಯದ ಬಳಿಕವೂ ಧಾರ್ಮಿಕವಾಗಿ ಬಹಳಷ್ಟು ಮಹತ್ವ ಪಡೆದ ಗಣೇಶೋತ್ಸವನ್ನು ಇಂದು ಬೀದಿ-ಬೀದಿಗಳಲ್ಲಿ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಣೇಶೋತ್ಸವ ಮುಂಬೈಯಲ್ಲಿ ತಿಲಕರ ನೇತೃತ್ವದಲ್ಲಿ ಪಡೆದ ಮಹತ್ವಕ್ಕೂ ಇಂದು ಮಹಾರಾಷ್ಟ್ರದಲ್ಲಿ ಕೋಟ್ಯಂತರ ರೂಪಾಯಿಗಳ ವಂತಿಗೆ(ಹಫ್ತಾ)ವಸೂಲಿಯೊಂದಿಗೆ ನಡೆಯುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಭಯ-ಭಕ್ತಿ, ಶ್ರದ್ಧೆ, ಧರ್ಮಕ್ಕೆ ಮಹತ್ವ ಇಲ್ಲ, ಪ್ರತಿಷ್ಠೆ-ಹಣಬಲ-ತೋಳ್ಬಲವೇ ಪ್ರಧಾನ.
ಅದೇ ರೀತಿ ಹತ್ತಿಪ್ಪತ್ತು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಾಗಲಿ, ಪಟ್ಟಣದಲ್ಲಾಗಲಿ ನಿಸರ್ಗಕ್ಕೆ ಯಾವುದೇ ಧಕ್ಕೆ ತಾರದ ರೀತಿಯಲ್ಲಿ ಕುಂಬಾರರು ಜೇಡಿಮಣ್ಣಿನಲ್ಲಿ ತಯಾರಿಸಿದ ಗಣಪನ ಮೂರ್ತಿ ಪೂಜಿಸಲ್ಪಡುತ್ತಿತ್ತು. ಕಾಲಚಕ್ರ ಉರುಳಿದ ಹಾಗೆ ಗಣೇಶೋತ್ಸವ ಕೂಡ ನವ್ಯ ಹಾದಿ ತುಳಿದ ಪರಿಣಾಮ ಇವತ್ತು ಜೇಡಿಮಣ್ಣಿನ ಗಣೇಶನ ಮೂರ್ತಿಗೂ ಬೆಲೆ ಇಲ್ಲದಂತಾಗಿದೆ.
ಅದರ ಬದಲು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಮೂಲಕ ಗಣಪತಿ ಮೂರ್ತಿಯನ್ನು ತಯಾರಿಸಲಾಗುತ್ತಿದೆ. ಆ ಮೂರ್ತಿಗೆ ಕೆಮಿಕಲ್ ಬಣ್ಣಗಳನ್ನು ಉಪಯೋಗಿಸಲಾಗುತ್ತದೆ. ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಗಣಪನ ಮೂರ್ತಿಗೆ ಮೆಟಲ್ಸ್ಗಳನ್ನ ಉಪಯೋಗಿಸುತ್ತಾರೆ. ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಜೇಡಿಮಣ್ಣಿನ ಗಣಪತಿ ಮೂರ್ತಿ ಅಲ್ಲಲ್ಲಿ ಕಾಣಸಿಗುತ್ತದೆ, ಆದರೆ ನಗರ-ಮಹಾನಗರಗಳಲ್ಲಿನ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ರಾರಾಜಿಸುವ ಗಣಪನ ಹುಟ್ಟು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ನದ್ದು.