ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರು ಹಮ್ಮಿಕೊಂಡಿರುವ ರಾಜ್ಯ ಪ್ರವಾಸದಿಂದಾಗಿ ಜೆಡಿಎಸ್ ಹಾಗೂ ಬಿಜೆಪಿಗಳಲ್ಲಿ ನಡುಕ ಹುಟ್ಟಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಾಹುಲ್ ಪ್ರವಾಸ ಇಷ್ಟೊಂದು ಯಶಸ್ವಿಯಾಗುತ್ತದೆ ಎಂದು ಈ ಪಕ್ಷಗಳಿಗೆ ಗೊತ್ತಿರಲಿಲ್ಲವೆನಿಸುತ್ತದೆ. ಆದ್ದರಿಂದಲೇ ಆ ಪಕ್ಷಗಳ ನಾಯಕರು ಹತಾಶಗೊಂಡು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ನುಡಿದರು.
ಬಿಳಿಗಿರಿ ರಂಗನ ಬೆಟ್ಟದ ಪ್ರದೇಶದಲ್ಲಿನ ಸೋಲಿಗರೂ ಸೇರಿದಂತೆ ರೈತರು, ದೀನದಲಿತರು ಹಾಗೂ ಹಿಂದುಳಿದ ವರ್ಗದ ಜನರನ್ನು ಭೇಟಿಮಾಡಿ, ಅವರ ಸಮಸ್ಯೆ ಅರ್ಥಮಾಡಿಕೊಳ್ಳುವಲ್ಲಿ ರಾಹುಲ್ ಯಶಸ್ವಿಯಾಗಿದ್ದಾರೆ. ರಾಹುಲ್ರ ಭೇಟಿಯಿಂದಾಗಿ ಜನ ಮತ್ತೆ ಕಾಂಗ್ರೆಸ್ನತ್ತ ಆಸೆ ಕಂಗಳಿಂದ ನೋಡುತ್ತಿದ್ದಾರೆ ಎಂದು ಉಗ್ರಪ್ಪ ವಿಶ್ಲೇಷಿಸಿದರು.
ರಾಜ್ಯದಲ್ಲಿ ಕಂಡುಬಂದಿರುವ ಅಕಾಲಿಕ ಮಳೆಯಿಂದಾಗಿ ತೊಂದರೆಗೆ ಒಳಗಾಗಿರುವವರ ನೆರವಿಗೆ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷವು ರಾಜ್ಯಪಾಲರಿಗೆ ಈಗಾಗಲೇ ಒತ್ತಾಯಿಸಿದೆ ಎಂದು ಇದೇ ಸಂದರ್ಭದಲ್ಲಿ ಉಗ್ರಪ್ಪ ತಿಳಿಸಿದರು. ಪಕ್ಷದ ಇತರ ಮುಖಂಡರಾದ ಕೆ.ಸಿ.ಕೊಂಡಯ್ಯ, ಅಬ್ದುಲ್ ವಹಾಬ್, ರಾಮಚಂದ್ರಪ್ಪ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
|