ನಾಳೆ (ಶನಿವಾರ) ನಗರದಲ್ಲಿ ರಾಜ್ಯಮಟ್ಟದ ಯುವ ಕಾಂಗ್ರೆಸ್ ಸಮಾವೇಶ ನಡೆಯಲಿದ್ದು ಇದಕ್ಕಾಗಿ ಭರದಿಂದ ಸಿದ್ಧತೆ ನಡೆದಿದೆ. ಈ ಸಮಾವೇಶದಲ್ಲಿ ರಾಹುಲ್ ಗಾಂಧಿಯವರ ಉಪಸ್ಥಿತಿಯೂ ಇರುತ್ತದೆಯಾದ್ದರಿಂದ ಕಾಂಗ್ರೆಸ್ ಬಲಪ್ರದರ್ಶನಕ್ಕೂ ಇದು ವೇದಿಕೆಯಾಗಲಿದೆ.
ಇದೇ ಸಂದರ್ಭದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಭೈರೇಗೌಡರ ಸಂಪಾದಕತ್ವದಲ್ಲಿ ಸಿದ್ಧಪಡಿಸಲಾದ ಕರ್ನಾಟಕ ಯುವ ಸಂದೇಶ ಎಂಬ ಮಾಸಪತ್ರಿಕೆಯನ್ನು ಬಿಡುಗಡೆ ಮಾಡಲಾಗುವುದೆಂದು ತಿಳಿದುಬಂದಿದೆ.
ರಾಹುಲ್ ಗಾಂಧಿಯವರು ಈಗಾಗಲೇ ಕೈಗೊಂಡಿರುವ ರಾಜ್ಯ ಪ್ರವಾಸವು ಕೊನೆಗೊಳ್ಳುವ ಮುಂಚೆ ನಡೆಯಲಿರುವ ಈ ಸಮಾವೇಶದಲ್ಲಿ ಎರಡು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬ್ಯಾಟರಾಯನಪುರದ ಎಪಿಎಂಸಿ ಮೈದಾನದಲ್ಲಿ ಬೃಹತ್ ವೇದಿಕೆಯೊಂದನ್ನು ನಿರ್ಮಿಸಲಾಗಿದ್ದು, ಸುಮಾರು 55 ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ತುಮಕೂರು, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಈ ಸಮಾವೇಶದಲ್ಲಿ ಭಾಗವಹಿಸಲು ಜನ ಜಮಾವಣೆಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಯಾಗಬಾರದೆಂಬ ದೃಷ್ಟಿಯಿಂದ ಹೊರ ಊರುಗಳಿಂದ ಬರುವ ವಾಹನಗಳು ವರ್ತುಲ ರಸ್ತೆಯ ಮೂಲಕ ಸಮಾವೇಶದ ಸ್ಥಳ ತಲುಪಬೇಕೆಂದು ಈಗಾಗಲೇ ನಿರ್ದೇಶಿಸಲಾಗಿದೆ.
ವಾಹನಗಳ ನಿಲುಗಡೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು ಸಮಾವೇಶದ ಮೈದಾನದಲ್ಲಿ ಒಂದು ಸಾವಿರ ಕಾರುಗಳು ನಿಲ್ಲಬಹುದಾಗಿದೆ. ಸನಿಹದ ಜಿಕೆವಿಕೆ ಹಾಗೂ ಜಕ್ಕೂರು ವಿಮಾನ ನಿಲ್ದಾಣದ ಬಳಿಯ ಮೈದಾನದಲ್ಲಿ ಸುಮಾರು 2 ಸಾವಿರ ಬಸ್, ಮ್ಯಾಕ್ಸಿಕ್ಯಾಬ್ಗಳನ್ನು ನಿಲ್ಲಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
|