ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ನಗರಕ್ಕೆ ಬಂದ ಹಿನ್ನೆಲೆಯಲ್ಲಿ ಆಯೋಗವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ನಗರದಿಂದ ಹೊರಗೆ ಹೋಗುವಂತೆ ಆದೇಶಿಸಿದ ಘಟನೆ ಇಂದು (ಶುಕ್ರವಾರ) ಜರುಗಿತು.
ದೇವೇಗೌಡರು ಇಂದು ಹೊಳೆನರಸೀಪುರದಿಂದ ಹಾಸನದಲ್ಲಿರುವ ಜೆಡಿಎಸ್ ಮುಖಂಡ ಎಚ್.ಕೆ. ಜವರೇಗೌಡರ ಮನೆಗೆ ಆಗಮಿಸಿ, ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸುವ ಹಾಗೂ ಪತ್ರಕರ್ತರನ್ನು ಭೇಟಿ ಮಾಡಲಿದ್ದಾರೆ ಎಂಬ ಸುಳಿವನ್ನು ಪಡೆದ ಚುನಾವಣಾ ಅಧಿಕಾರಿಗಳು ಗೌಡರಿಗೆ ನಗರ ತೆರವುಗೊಳಿಸಲು ಸೂಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದರು.
ಈ ಹಿನ್ನೆಲೆಯಲ್ಲಿ ಗೌಡರು ನಗರದಿಂದ ಹೋಗದಿದ್ದಲ್ಲಿ, ಅವರ ವಾಹನವನ್ನು ಜಪ್ತಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರ ಈ ಕ್ರಮಕ್ಕೆ ಗೌಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಾವು ಕಾನೂನು ಜಾರಿಗೊಳಿಸುವುದರಲ್ಲಿ ಹಿಂದೆ ಬೀಳುವುದಿಲ್ಲ. ಬೇಕಾದರೆ ಆಯೋಗವನ್ನು ಸಂಪರ್ಕಿಸಿ ಎಂದು ಜಿಲ್ಲಾಧಿಕಾರಿ ಗೌಡರಿಗೆ ತಿಳಿಸಿದಾಗ ಗೌಡರು ತಮ್ಮ ನಿರುಪಾಯವಾಗಿ ವಾಹನದೊಂದಿಗೆ ವಾಪಾಸ್ ಹೋಗಬೇಕಾಯಿತು.
|