ಫಲಿತಾಂಶಗಳು ಹೊರಬರಲಾರಂಭಿಸಿರುವಂತೆ ಬಿಜೆಪಿಯ ದೆಹಲಿ ಮುಖ್ಯಾಲಯ ಮತ್ತು ಕರ್ನಾಟಕ ಮುಖ್ಯ ಕಚೇರಿಯಲ್ಲಿ ಸಡಗರದ ವಾತಾವರಣವಿದೆ. ಸರಕಾರ ರಚನೆಗೆ ರಾಜ್ಯಪಾಲರು ತಮಗೇ ಆಹ್ವಾನ ನೀಡಬೇಕು ಎಂದು ಬಿಜೆಪಿ ಮುಖಂಡ ಪ್ರಕಾಶ್ ಜಾವಡೇಕರ್ ಈಗಾಗಲೇ ಹೇಳಿಕೆ ನೀಡಿದ್ದಾರೆ.
ಬಿಜೆಪಿಯು ಅಧಿಕಾರಕ್ಕೇರದಂತೆ ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಜತೆಗೆ ಹೋಗಲಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದರೆ, ಜೆಡಿಎಸ್ ಜೊತೆ ಕೈಜೋಡಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಅಂತೆಯೇ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಕೂಡ, ಜೆಡಿಎಸ್ ಜತೆ ಕೈಜೋಡಿಸುವ ಪ್ರಸ್ತಾಪ ಅತ್ಯಂತ ಸಹಜ ಎಂಬ ಹೇಳಿಕೆಯನ್ನೂ ನೀಡಿದ್ದಾರೆ.
ಜೆಡಿಎಸ್ ಮುಖಂಡ ಎಚ್.ಡಿ.ದೇವೇಗೌಡ ಆರಂಭದಲ್ಲಿ ಜೆಡಿಎಸ್ಗೆ ಹಿನ್ನಡೆಯಾಗಿದೆ ಎಂದು ಒಪ್ಪಿಕೊಂಡಿದ್ದಾರಾದರೂ ಸೋಲೊಪ್ಪಿಕೊಂಡಿಲ್ಲ.
ಜೆಡಿಎಸ್ ಪಕ್ಷವು ಜಾತ್ಯತೀತ ಮತಗಳ ವಿಭಜನೆಗೆ ಕಾರಣವಾಯಿತು ಎಂಬ ಪ್ರತಿಕ್ರಿಯೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷವಂತೂ ಬಹುತೇಕ ಸೋಲೊಪ್ಪಿಕೊಂಡಂತಾಗಿದೆ.
|