ಬಾಕ್ಸಿಂಗ್... ವಿಜೇಂದರ್ ಕುಮಾರ್: ವಿಜೇಂದರ್ ಕುಮಾರ್ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಮಿಡ್ಲ್ವೈಟ್ ವಿಭಾಗದಲ್ಲಿ ಕಂಚಿನ ಪದಕ ಪಡೆದದ್ದು ಜೀವಮಾನದ ಶ್ರೇಷ್ಠ ಸಾಧನೆ ಹಾಗೂ ಭಾರತೀಯರಿಗೆ ಸಂಭ್ರಮಿಸಲು ಹುರಿದುಂಬಿಸಿದವರು.ಉಳಿದಂತೆ ಅಖಿಲೇಶ್ ಕುಮಾರ್, ಜಿತೇಂದರ್ ಕುಮಾರ್, ದಿನೇಶ್ ಕುಮಾರ್, ಎ.ಎಲ್. ಲಾಕ್ರಾ ಮುಂತಾದವರು ಉತ್ತಮ ಪ್ರದರ್ಶನ ತೋರಿಸಿದ್ದಾರೆ.ಮೇರಿ ಕಾಮ್: ಈಕೆ ಬಾಕ್ಸಿಂಗ್ನಲ್ಲಿ ಸಾಧಿಸಿದ್ದು ಅಪಾರ. ಅದರಲ್ಲೂ ಈ ವರ್ಷ ಚೀನಾದಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ನಾಲ್ಕನೇ ಬಾರಿ ಚಾಂಪಿಯನ್ ಆಗಿದ್ದು ಹೆಮ್ಮೆ. 2004ರಲ್ಲಿ ಟರ್ಕಿ, 2005ರಲ್ಲಿ ರಷ್ಯಾ, 2007ರಲ್ಲಿ ದೆಹಲಿ, 2008ರಲ್ಲಿ ಚೀನಾ ಹೀಗೆ ಒಟ್ಟು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಪಟ್ಟ ಆಕೆಗೆ ದೊರಕಿತು.ಕುಸ್ತಿ... ಸುಶೀಲ್ ಕುಮಾರ್: ಇವರು ಪುರುಷರ 66 ಕೆ.ಜಿ. ಫ್ರೀ ಸ್ಟೈಲ್ ವಿಭಾಗದಲ್ಲಿ ಕಂಚು ಪಡೆದು ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ 2008ರ ಮೊತ್ತ ಮೂರಾಗುವಂತೆ ನೋಡಿಕೊಂಡವರು. 60 ಕೆ.ಜಿ. ವಿಭಾಗದಲ್ಲಿ ಯೋಗೇಶ್ವರ್ ದತ್ ಮತ್ತು 120 ಕೆ.ಜಿ. ವಿಭಾಗದಲ್ಲಿ ರಾಜೀವ್ ತೊಮರ್ ಭಾಗವಹಿಸಿದ್ದರಾದರೂ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹಾಕಿ... ಈ ವರ್ಷ ಬೇಸರ ಹುಟ್ಟಿಸಿದ್ದು ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ. ಒಲಿಂಪಿಕ್ಸ್ ಇತಿಹಾಸದಲ್ಲಿ ಒಟ್ಟು ಎಂಟು ಚಿನ್ನದ ಪದಕ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಪಡೆದಿದ್ದ ಭಾರತೀಯ ಒಲಿಂಪಿಕ್ಸ್ ತಂಡ ಈ ಬಾರಿ ಅರ್ಹತಾ ಸುತ್ತಿನಲ್ಲೇ ಹೊರಬಿದ್ದು ಅವಮಾನಕ್ಕೊಳಗಾಗುವ ಪ್ರಸಂಗಾವಧಾನತೆ ಒದಗಿ ಬಂದದ್ದು ದುರದೃಷ್ಟವೆನಿಸಿತು. ಒಲಿಂಪಿಕ್ಸ್ನಲ್ಲಿ ಆಡುವ ಅರ್ಹತೆಯನ್ನೇ ಕಳೆದುಕೊಂಡ ತಂಡ ತವರಿನಲ್ಲೇ ಉಳಿಯಬೇಕಾಯಿತು.ಇಂಡಿಯನ್ ಹಾಕಿ ಫೆಡರೇಷನ್ ಅಮಾನತಿಗೊಳಗಾದದ್ದು ಈ ವರ್ಷದ ಮತ್ತೊಂದು ದುರಂತ. ತನ್ನ ಭ್ರಷ್ಟಾಚಾರಗಳಿಂದಾಗಿ ಹೆಸರು ಕೆಡಿಸಿಕೊಂಡ ಇಂಡಿಯನ್ ಹಾಕಿ ಫೆಡರೇಷನ್ನನ್ನು ಇಂಡಿಯನ್ ಒಲಿಂಪಿಕ್ ಅಸೋಷಿಯೇಷನ್ ಏಪ್ರಿಲ್ 28ರಂದು ಅಮಾನತುಗೊಳಿಸಿ ತಾತ್ಕಾಲಿಕ ಸಮಿತಿಯನ್ನು ನೇಮಿಸಿತು. ಜತೆಗೆ ಕೆ.ಪಿ.ಎಸ್. ಗಿಲ್ ಅವರನ್ನು ಕೂಡ ವಜಾಗೊಳಿಸಿತ್ತು. ಯಾವುದೇ ಗಮನಾರ್ಹ ಗೆಲುವುಗಳನ್ನು ದಾಖಲಿಸದ ಭಾರತೀಯ ಹಾಕಿ ಗಮನ ಸೆಳೆದದ್ದು, ಕೇವಲ ತನ್ನ ವಿವಾದಗಳಿಂದಾಗಿ ಮಾತ್ರ.ಚೆಸ್... ಚೆಸ್ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ತನ್ನ ಪಟ್ಟಕ್ಕೆ ತೊಂದರೆಯಾಗದಂತೆ ನೋಡಿಕೊಂಡದ್ದು ಈ ವರ್ಷದ ಅವರ ಸಾಧನೆ. ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್ ಅವರನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ಶಿಪ್ ತನ್ನಲ್ಲೇ ಇರುವಂತೆ ಮಾಡಿದರು. ಆ ಮೂಲಕ ಚೆಸ್ನ ಎಲ್ಲಾ ವಿಧದ ಆಟಗಳಲ್ಲಿ ಚಾಂಪಿಯನ್ ಆದ ದಾಖಲೆಯನ್ನೂ ಅವರು ನಿರ್ಮಿಸಿದ್ದಾರೆ. ವೈಟ್ಲಿಫ್ಟಿಂಗ್... ಒಲಿಂಪಿಕ್ಸ್ನಲ್ಲಿ ಭಾಗವಹಿಸಬೇಕಾಗಿದ್ದ ಮೋನಿಕಾ ದೇವಿಯವರನ್ನು ಬೀಜಿಂಗ್ಗೆ ಹೊರಡುವ ಕೇವಲ 30 ನಿಮಿಷಗಳ ಮೊದಲು ಉದ್ದೀಪನಾ ದ್ರವ್ಯ ಸೇವನೆಯ ಕಾರಣವೊಡ್ಡಿ ಪ್ರವಾಸವನ್ನು ತಡೆ ಹಿಡಿಯಲಾಯಿತು. ಅವರ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ತನ್ನ ತೀಟೆ ತೀರಿಸಿಕೊಂಡಿತ್ತು. ನಂತರ ಅಲ್ಲಿ ನಡೆದ ರಾಜಕೀಯ ನಡೆಗಳ ಬಗ್ಗೆ ಪ್ರತಿಭಟನೆಗಳು ಹೆಚ್ಚಾದಂತೆ ಮೋನಿಕಾ ನಿರ್ದೋಷಿ ಎಂದು ಘೋಷಿಸಿ, ಇಂದೇ ಆಕೆ ಬೀಜಿಂಗ್ಗೆ ತೆರಳಲಿದ್ದಾರೆ ಎಂದು ಹೇಳಲಾಯಿತು. ಆದರೆ ಮರುದಿನ ಅಸೋಸಿಯೇಷನ್ ಹೇಳಿಕೆಯೇ ಬೇರೆಯಾಗಿತ್ತು. ಆಯ್ಕೆ ಪ್ರಕ್ರಿಯೆಗಳು ಮುಗಿದ ಕಾರಣ ಮೋನಿಕಾ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿ ಕೈ ತೊಳೆದುಕೊಂಡಿತು. ಮಣಿಪುರ ಮುಖ್ಯಮಂತ್ರಿಯವರು ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ ನಂತರವೂ ಈ ವಿಚಾರದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ.ಏಪ್ರಿಲ್-ಮೇ ತಿಂಗಳಿನಲ್ಲಿ ಜಪಾನ್ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಭಾರತದ ವೈಟ್ ಲಿಫ್ಟರುಗಳು ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಪಡೆಯುವ ಮೂಲಕ ಐದನೇ ಸ್ಥಾನ ಗಳಿಸಿದ್ದರು. ಆದರೆ ಇಲ್ಲಿ ಕೂಡ ಭಾರತಕ್ಕೆ ಕಾಡಿದ್ದು ಅದೇ ಉದ್ದೀಪನಾ ದ್ರವ್ಯ ಪರೀಕ್ಷೆ. 75 ಕೆ.ಜಿ. ವಿಭಾಗದ ಕವಿತಾ ದೇವಿ ಉದ್ದೀಪನಾ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದ ಕಾರಣ ಆಕೆಯನ್ನು ಕ್ರೀಡಾಕೂಟಕ್ಕೆ ಸೇರಿಸಿಕೊಳ್ಳದೆ ಭಾರತಕ್ಕೆ ವಾಪಸು ಕಳುಹಿಸಲಾಗಿತ್ತು. |