ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಹಿನ್ನೋಟ-08 > ಅಣುವಿನಿಂದ ಚಂದಿರನೂರಿಗೆ; ವಿಕೋಪಗಳ ನಡುವೆ ಭರವಸೆಯ ಒಸಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುವಿನಿಂದ ಚಂದಿರನೂರಿಗೆ; ವಿಕೋಪಗಳ ನಡುವೆ ಭರವಸೆಯ ಒಸಗೆ
ನಕ್ಸಲ್ ರಗಳೆ
ಒರಿಸ್ಸಾ, ಛತ್ತೀಸ್‌ಗಢ ಮತ್ತು ಕರ್ನಾಟಕಗಳಲ್ಲಿ ನಕ್ಸಲರು ತಮ್ಮ ಅಟ್ಟಹಾಸವನ್ನು ಮುಂದುವರಿಸಿದ್ದಾರೆ. ಪೊಲೀಸರ ಗಸ್ತು ವಾಹನದ ಮೇಲೆ ನಕ್ಸಲರು ನಡೆಸಿರುವ ಹೊಂಚು ದಾಳಿಯಲ್ಲಿ 15 ಪೊಲೀಸರು ಸಾವನ್ನಪ್ಪಿದ್ದರು. ಅಂತೆಯೇ ಕರ್ನಾಟಕ ಮತ್ತು ಛತ್ತೀಸ್‌ಗಢವೂ ನಕ್ಸಲ್‌ಬಾರಿ ಚಳುವಳಿಯಿಂದ ಮುಕ್ತವಾಗಿಲ್ಲ. ಕರ್ನಾಟಕದಲ್ಲಿ ಇತ್ತೀಚೆಗೆ ಮೂವರು ನಕ್ಸಲರು ಪೊಲೀಸರೊಂದಿಗೆ ನಡೆಸಿರುವ ದಾಳಿಯಲ್ಲಿ ಸಾವನ್ನಪ್ಪಿದ ನೆನಪಿನ್ನೂ ಹಸಿಹಸಿ.

ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ
ನಕ್ಸಲ್ ಹಿಂಸೆಯಂತೆಯೇ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ಒರಿಸ್ಸಾ ಮತ್ತು ಕರ್ನಾಟಕದಲ್ಲಿ ದಾಳಿಗಳು ನಡೆದಿದ್ದು, ಈ ಪ್ರಕರಣವು ಸಂಸತ್ತಿನಲ್ಲಿ ಧ್ವನಿಸಿದ್ದವು. ಒರಿಸ್ಸಾದಲ್ಲಿ ಕಳೆದ ಕ್ರಿಸ್‌ಮಸ್ ಆಚರಣೆ ವೇಳೆಗೆ ಹಿಂದೂ ಸಂಘಟನೆಗಳು ಮತ್ತು ಕ್ರೈಸ್ತರ ನಡುವೆ ಘರ್ಷಣೆಗಳಾಗಿದ್ದು ಹಲವಾರು ಕೈಸ್ತ ಪ್ರಾರ್ಥನಾ ಮಂದಿರಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಡಕಟ್ಟು ಪ್ರದೇಶದ ಆಶ್ರಮವಾಸಿಯಾಗಿದ್ದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಹಾಗೂ ಇತರ ನಾಲ್ವರ ಹತ್ಯೆಯಾಗಿರುವುದು ಈ ಎರಡು ಸಮುದಾಯದ ನಡುವಿನ ಘರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿತ್ತು.
PTI

ಅಂತೆಯೇ ಕರ್ನಾಟಕದ ಮಂಗಳೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಿಂದೂ ದೇವರುಗಳ ವಿರುದ್ಧ ಅವಹೇಳನ ಬರಹಗಳನ್ನು ಪ್ರಕಟಿಸಿ, ಬಲವಂತದ ಮತಾಂತರ ನಡೆಯುತ್ತದೆ ಎಂಬ ಅರೋಪಗಳೊಂದಿಗೆ ಕೆಲವು ಅನಧಿಕೃತ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಲಾಗಿತ್ತು. ಸಾಂಕ್ರಾಮಿಕ ಎಂಬಂತೆ ಈ ಘಟನೆ ಪಕ್ಕದ ಪ್ರದೇಶಗಳಿಗೂ ವ್ಯಾಪಿಸಿ ಗಲಭೆ, ಘರ್ಷಣೆಗಳಿಗೆ ನಾಂದಿಯಾಗಿತ್ತು.

ಒರಿಸ್ಸಾದಲ್ಲಿ ಚರ್ಚುಗಳ ಮೇಲೆ ನಡೆದ ದಾಳಿಯ ವೇಳೆಗೆ ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಆರೋಪವು ಸಾರ್ವಜನಿಕ ಖಂಡನೆಗೀಡಾಗಿತ್ತು. ಪೊಲೀಸರು ಸನ್ಯಾಸಿನಿಯ ದೂರು ದಾಖಲಿಸಿಕೊಂಡಿಲ್ಲ ಎಂಬ ಆರೋಪಗಳು ವಿವಾದಕ್ಕೆಡೆ ಮಾಡಿದ್ದವು. ಆದರೆ, ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಯಿತು, ಠಾಣೆಗೆ ದೂರು ನೀಡಲು ತೆರಳಿದಾಗ ಹಾಕಿಕೊಳ್ಳಲು ಬಟ್ಟೆಯನ್ನೂ ನೀಡಿಲ್ಲ, ತಾನು ಪೆಟ್ಟಿಕೋಟಿನಲ್ಲೇ ತೆರಳಬೇಕಾಯಿತು ಎಂದೆಲ್ಲ ಪತ್ರಿಕಾಗೋಷ್ಠಿಯಲ್ಲಿ ಬರೆದು ತಂದ ಹೇಳಿಕೆಯನ್ನು ಓದಿದ್ದ ಅದೇ ಸನ್ಯಾಸಿನಿ, ಪೊಲೀಸರಿಗೆ ಹೇಳಿಕೆ ನೀಡಿದಾಗ ಇದಕ್ಕೆ ವ್ಯತಿರಿಕ್ತ ಎಂಬಂತಹ ಹೇಳಿಕೆ ನೀಡಿದ್ದರು. "ತನ್ನ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ, ತಾನು ಆತನಿಂದ ತಪ್ಪಿಸಿಕೊಳ್ಳಲು ಸೆಣಸಾಡಿದೆ. ಬಳಿಕ ಮತ್ತಿಬ್ಬರು ಅತ್ಯಾಚಾರ ಎಸಗಲು ಮುಂದಾದಾಗ ಹಿಂದೂ ಒಬ್ಬ ನನ್ನನ್ನು ರಕ್ಷಿಸಿದ್ದು, ಸಾಮೂಹಿಕ ಅತ್ಯಾಚಾರವಾಗುವುದನ್ನು ತಪ್ಪಿಸಿದ" ಎಂಬ ಹೇಳಿಕೆ ನೀಡಿದ್ದಾರೆ. ಈ ಎರಡು ಹೇಳಿಕೆಯನ್ನು ಗಮನಿಸಿದಾಗ ಒಟ್ಟಾರೆ ಘಟನೆಯ ಮೇಲೆಯೇ ಸಂಶಯ ಹುಟ್ಟಿಕೊಳ್ಳುತ್ತದೆ.

ಉಗ್ರರ ದಾಳಿಗಳು
ರಾಷ್ಟ್ರವು ವರ್ಷವಿಡೀ ಭಯೋತ್ಪಾದನಾ ದಾಳಿಯಿಂದ ನಲುಗಿ ಹೋಗಿದೆ. ದೆಹಲಿ, ಮುಂಬೈ, ಬೆಂಗಳೂರು, ಗುವಾಹತಿ, ಅಹಮದಾಬಾದ್, ಲಕ್ನೋ, ಜೈಪುರ ಸೇರಿದಂತೆ ರಾಷ್ಟ್ರದ ಉದ್ದಗಲದಲ್ಲಿ ಉಗ್ರರು ದಾಳಿ ನಡೆಸುತ್ತಲೇ ಹೋದರು. (ಭಯೋತ್ಪಾದನಾ ದಾಳಿಯ ಕುರಿತೇ ಈ ವಿಶೇಷ ಪುಟದಲ್ಲಿ ಮತ್ತೊಂದು ಲೇಖನವಿದೆ) ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಆಗದ ಷಂಡತನ, ಕೊಳಕು ರಾಜಕೀಯದಿಂದಾಗಿ ಅದೆಷ್ಟೋ ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿರುವುದು 2008ರ ಇನ್ನೊಂದು ವಿಪರ್ಯಾಸ.
ND

ಯಾವತ್ತೋ ಸತ್ತುಹೋಗಿರುವ ಬಾಬರನೆಂಬೋ ಮುಸ್ಲಿಮ, ರಾಮ ಹುಟ್ಟಿದ ಅಯೋಧ್ಯೆಯಲ್ಲಿದ್ದ ದೇವಾಲಯವನ್ನು ಕೆಡವಿ ಮಸೀದಿ ಕಟ್ಟಿದ ಎಂಬ ಕಾರಣಕ್ಕೆ ಸದರೀ ಬಾಬರನ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಹೊರಟು, ಈಗ್ಗೆ ಹದಿನಾರು ವರ್ಷದ ಹಿಂದೆ ಅಲ್ಲಿದ್ದ ಪುರಾತನ ಮಸೀದಿಯನ್ನು ಕೆಡವಿರುವುದು, ಕಾಂದಹಾರ್ ವಿಮಾನ ಅಪಹರಣವಾದಾಗ, ಒತ್ತೆಯಾಳುಗಳಾಗಿದ್ದ ಪ್ರಯಾಣಿಕರ ಸುರಕ್ಷೆಯ ಹಿನ್ನೆಲೆಯಲ್ಲಿ ಅಪಹರಣಕಾರರ ಬೇಡಿಕೆಗೆ ತಲೆಬಾಗಿ ಸೆರೆಯಲ್ಲಿದ್ದ ಉಗ್ರ ಮಸೂದ್‍‌ನನ್ನು ಬಿಡುಗಡೆ ಮಾಡಿರುವುದು, ಸಂಸತ್ ಮೇಲೆ ದಾಳಿ ನಡೆಸಿರುವ ರೂವಾರಿ ಅಫ್ಜಲ್ ಗುರು ಎಂಬಾತನ ವಿರುದ್ಧ ಸರ್ವೋಚ್ಛ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ಜಾರಿಗೆ ತರಲು ಆತ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಕ್ಷಮಾದಾನ ಅರ್ಜಿಯ ನೆಪ ಒಡ್ಡುತ್ತಿರುವುದು, ವಿಧ್ವಂಸಕ ಕಾರ್ಯಗಳನ್ನು ನಡೆಸಿರುವ ದುರುಳರ ಮಾನವಹಕ್ಕುಗಳ ಸಂರಕ್ಷಣೆಯ ಬಗ್ಗೆ ವ್ಯಕ್ತವಾಗುವ ಪ್ರತಿಭಟನೆಗಳು ಮತ್ತು ಒಟ್ಟಾರೆಯಾಗಿ ವೋಟ್‌ಬ್ಯಾಂಕ್ ರಾಜಕೀಯ - ಈ ಎಲ್ಲವುಗಳ ಫಲ ಎಂಬಂತೆ ಈ ವರ್ಷದ ನವೆಂಬರ್ 26ರಂದು ಮುಂಬೈಯಲ್ಲಿ ಹಿಂದೆಂದೂ ನಡೆಯದಿರುವಂತೆ ದಾಳಿ ನಡೆದು ಹೋಯಿತು.

ಚೆನ್ನಾಗಿ ಅಭ್ಯಾಸ ನಡೆಸಿದ ಕ್ರೀಡಾಪಡುಗಳು ಆಟದ ಅಂಗಳಕ್ಕೆ ಇಳಿದಷ್ಟೇ ಸಲೀಸಾಗಿ ಮುಂಬೈಯನ್ನು ತಮ್ಮ ಆಡುಂಬೊಲವಾಗಿ ಮಾಡಿಕೊಂಡ ತರಬೇತುಗೊಂಡ ಬೆರಳೆಣಿಕೆಯ ಹತ್ತು ಮಂದಿ ಉಗ್ರರು ಸಲೀಸಾಗಿ ಎಲ್ಲೆಂದರಲ್ಲಿ ನುಗ್ಗಿ ಗುಂಡು, ಗ್ರೆನೇಡುಗಳನ್ನು ಹಾರಿಸಿದ ಪರಿ ಇಷ್ಟುದೊಡ್ಡ ರಾಷ್ಟ್ರದ ಭದ್ರತಾ ವ್ಯವಸ್ಥೆಯನ್ನು ಅಣಕಿಸಿ ಅಣಕಿಸಿ ನಕ್ಕಿತು. ದಾಳಿಕೋರರ ದೇಹಭಾಷೆಯು ಇಲ್ಲಿ ಏನೂಮಾಡಿದರೂ ದಕ್ಕಿಸಿಕೊಂಡೇವೂ ಎಂಬಂತಿತ್ತು. ಪ್ರತಿಯೊಂದು ವಿಚಾರವನ್ನು, ತಮ್ಮ ದಾಳಿಯ ಗುರಿಗಳನ್ನು ಚೆನ್ನಾಗಿ ಅಭ್ಯಸಿಸಿದ್ದ ಉಗ್ರ ಹುಡುಗರು ಅತ್ಯಂತ ಹರ್ಷದಿಂದ, ಲವಲವಿಕೆಯಿಂದ, ಆತ್ಮವಿಶ್ವಾಸದಿಂದ ಲೀಲಾಜಾಲವಾಗಿ ತಮ್ಮ ದುಷ್ಕೃತ್ಯವನ್ನು ನಡೆಸುತ್ತಿದ್ದರು ಎಂದು ಇವರ ದಾಳಿಯಿಂದ ಪಾರಾದವರು ಹೇಳಿಕೊಳ್ಳುತ್ತಿದ್ದಾರೆ. ನಮ್ಮ ಭದ್ರತಾ ಮತ್ತು ಬೇಹುಗಾರಿಕಾ ವ್ಯವಸ್ಥೆಯು ಈ ಉಗ್ರರ ಭಯೋತ್ಪಾದನಾ ಬದ್ಧತೆಯಿಂದ ಕಲಿಯಬೇಕಿರುವುದು ಬಹಳಷ್ಟಿದೆ ಎಂಬ ಸಂದೇಶ ರವಾನೆಯಾಗಿದೆ.

ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಲು ಹಾಕಲು ಹೊರಟಿರುವ ನಮ್ಮ ರಾಜಕೀಯ ಪಕ್ಷಗಳು ಸಾರ್ವಜನಿಕರಿಂದ ಛೀ..ಥೂ ಎಂಬುದಾಗಿ ಉಗಿಸಿಕೊಂಡಿದ್ದಾರೆ. ಇದೀಗ ಜ್ಞಾನೋದಯವಾದಂತೆ ಸರಕಾರವೂ ಉಗ್ರರ ವಿರುದ್ಧ ಉಗ್ರ ಕ್ರಮಕೈಗೊಳ್ಳಲು ಮುಂದಾಗಿದೆ ಮತ್ತು ವಿರೋಧ ಪಕ್ಷಗಳೂ ಬೆಂಬಲ ಸೂಚಿಸಿವೆ. ಕಾನೂನು ಕಠಿಣಗೊಳಿಸಿದೆ, ರಾಷ್ಟ್ರೀಯ ತನಿಖಾ ಏಜೆನ್ಸಿ ಹುಟ್ಟು ಪಡೆದಿದೆ. ಪಾಕಿಸ್ತಾನದೊಂದಿಗಿನ ಸಂಬಂಧ ಸಂಪೂರ್ಣ ಹದಗೆಟ್ಟಿದೆ.

ಈ ಎಲ್ಲ ಘಟನೆಗಳನ್ನು ಕಂಡ ಜನಸಾಮಾನ್ಯನಿಗೆ ಉಗ್ರವಾದ, ಭಯೋತ್ಪಾದನೆ ಅಥವಾ ಆತಂಕವಾದವೆಂಬ ಶಬ್ದ ಈಗ ಅತ್ಯುಗ್ರವಾಗಿ ಕೇಳಿ ಭಯ ಇಲ್ಲವೇ ಆತಂಕ ಹುಟ್ಟಿಸದೇ, ಅತ್ಯಂತ ಸಹಜ ಶಬ್ದ ಎಂಬಂತೆ ಕಿವಿಯ ತಮಟೆಗೆ ಅಪ್ಪಳಿಸುತ್ತದೆ.

ಹಿಂದೂ ಭಯೋತ್ಪಾದನೆ
ಮಾಲೆಗಾಂವ್‌ನಲ್ಲಿ ಸೆಪ್ಟೆಂಬರ್ 29ರಂದು ನಡೆಸಿರುವ ಬಾಂಬ್ ದಾಳಿಯ ಹಿಂದೆ ಹಿಂದೂ ಸಂಘಟನೆ ಅಭಿನವ್ ಭಾರತ್ ಎಂಬುದರ ಕೈವಾಡ ಇದೆ ಎಂಬುದಾಗಿ ತನಿಖೆಯಲ್ಲಿ ಪತ್ತೆಯಾಗಿರುವುದು ಭಯೋತ್ಪಾದನೆಯ ಪಟ್ಟಿಗೆ ಹಿಂದೂ ಭಯೋತ್ಪಾದನೆ ಎಂಬ ಹೆಸರು ಸೇರಿಕೊಂಡಿತು. ಸಾಧ್ವಿ ಪ್ರಜ್ಞಾ (ಪ್ರಗ್ಯಾ) ಸಿಂಗ್ ಠಾಕೂರ್ ಎಂಬಾಕೆಯ ದ್ವಿಚಕ್ರವಾಹನವನ್ನು ಬಳಸಿ ಸ್ಫೋಟ ನಡೆಸಲಾಗಿದೆ ಎಂದು ತಿಳಿದ ಮುಂಬೈ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇದರ ಎಳೆಯನ್ನು ಹಿಡಿದು ಸುಮಾರು ಹನ್ನೊಂದು ಜನರನ್ನು ಬಂಧಿಸಿದೆ. ಬಂಧಿತರಲ್ಲಿ ದಯಾನಂದ ಪಾಂಡೆ ಎಂಬ ಸ್ವಯಂ ಘೋಷಿತ ಸ್ವಾಮೀಜಿ, ಸೇವಾನಿರತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್, ಅಭಿನವ ಭಾರತ್‌ನ ಇತರ ಕಾರ್ಯಕರ್ತರು ಸೇರಿದ್ದಾರೆ. ಸ್ಫೋಟಕ್ಕೆ ಬಳಸಿರುವ ಈ ದ್ವಿಚಕ್ರವಾಹನವನ್ನು ತಾನು ಮಾರಾಟ ಮಾಡಿದ್ದೇನೆ ಎಂಬುದು ಸಾಧ್ವಿ ಹೇಳಿಕೆ.
PTI

ಬೇರಾವ ಬಾಂಬ್ ಸ್ಫೋಟ ಪ್ರಕರಣಕ್ಕಿಂತ ಹೆಚ್ಚಿನ ಆಸಕ್ತಿಯಿಂದ, ಚುರುಕಿನಿಂದ ಪ್ರಕರಣದ ಹಿಂದೆ ಪೊಲೀಸರು ಮುರಕ್ಕೊಂಡು ಬಿದ್ದಿರುವುದು, ತನಿಖೆಯ ವೇಗ, ಮಾಧ್ಯಮಗಳಿಗೆ ಸೋರುತ್ತಿದ್ದ ವಿಚಾರಗಳು, ನ್ಯಾಯಾಲಯಗಳಲ್ಲಿ ನೀಡುತ್ತಿದ್ದ ಹೇಳಿಕೆಗಳು, ಈ ಪ್ರಕರಣದ ಆರೋಪಿಗಳ ಮಾನವಹಕ್ಕುಗಳ ಬಗ್ಗೆ ಯಾರೂ ವಹಿಸದ ಕಾಳಜಿ ಎಲ್ಲವುಗಳೂ ಪ್ರಕರಣವನ್ನು ಭೇದಿಸಿ ಆರೋಪಿಗಳಿಗೆ ಶಿಕ್ಷೆ ನೀಡುವ ಧಾವಂತದ ಹಿಂದೆ ಬೇರೇನೋ ಇದೆ ಎಂಬ ವಾಸನೆ ಹೊರಡುವಂತೆ ಮಾಡಿತ್ತು. ಪೋಟಾ ಕಾಯ್ದೆಯನ್ನು ವಿರೋಧಿಸುತ್ತಲೇ ಬಂದಿದ್ದ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವಿರುವ ಮಹಾರಾಷ್ಟ್ರದ ಪೋಲೀಸರು ಈ ಆರೋಪಿಗಳ ಮೇಲೆ ಪೋಟಾ ಕಾಯ್ದೆಯಂತಹ ಮೋಕೋ ಕಾನೂನನ್ನು ಹೇರಿದ್ದಾರೆ. ಈ ಮೂಲಕ ಬಿಜೆಪಿಗೆ 'ಹೆಂಗೆ?' ಎಂಬ ಲುಕ್ ಕೊಟ್ಟಿತು.

ಆದರೆ ಮುಂಬೈ ದಾಳಿಯು ರಾಷ್ಟ್ರವನ್ನೇ ನಡುಗಿಸಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದು, ಸದ್ಯಕ್ಕೀಗ ಮಾಲೆಗಾಂವ್ ಸ್ಫೋಟ ಪ್ರಕರಣ ಸುದ್ದಿಯಲ್ಲಿಲ್ಲ. ಈ ಪ್ರಕರಣದ ಬೆನ್ನುಬಿದ್ದು, ಎದ್ದುಬಿದ್ದು ವರದಿ ಮಾಡುತ್ತಿದ್ದ ಮಾಧ್ಯಮಗಳೂ ಈ ಪ್ರಕರಣವನ್ನು ಸದ್ಯದ ಮಟ್ಟಿಗೆ ಮರೆತಂತಿದೆ.

ಯಾರೇ ಆಗಲಿ ವಿಧ್ವಂಸಕ ಕೃತ್ಯಗಳನ್ನು ಮಾಡುವ ಮೂಲಕ ಯಾವುದೇ ಸುಧಾರಣೆ ತರಲು ಸಾಧ್ಯವಿಲ್ಲ. ಉಗ್ರರು ಎಲ್ಲರೂ ಉಗ್ರರೇ. ಅವರು ಜಾತಿ, ಮತ, ಧರ್ಮಗಳನ್ನು ಮೀರಿದವರು. ಎಲ್ಲರ ವಿರುದ್ಧವೂ ಉಗ್ರ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಅನಿವಾರ್ಯ ಮತ್ತು ಅವಶ್ಯಕ ಕೂಡ. ಕೆಲವರ ಮೇಲೆ ಮೃದು ಧೋರಣೆ ಮತ್ತು ಇನ್ನು ಕೆಲವರ ಮೇಲೆ ಕಠಿಣ ಕ್ರಮ ಕೈಗೊಂಡರೆ ಈ ಕುರಿತು ಜನಸಾಮಾನ್ಯರು ಏನೆಂದು ಅರ್ಥೈಸಿಕೊಳ್ಳಬೇಕು?
<< 1 | 2 | 3  >>  
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಾಕ್ಸಿಂಗ್ ವಿಶ್ವ ಚಾಂಪಿಯನ್ ಮೇರಿ ಕಾಮ್
ಆಕೆಯ ಹೆಸರು ಸೈನಾ ನೆಹ್ವಾಲ್....
ಒಲಿಂಪಿಕ್ಸ್‌ನಲ್ಲಿ ಚಿನ್ನದ ದಾಖಲೆ ಬರೆದ 2008
ರಾಜಕೀಯ - ಭಯೋತ್ಪಾದನೆಯ 'ವರ್ಷ'ವಾದ 2008
ಕಾಂಗರೂಗಳ ಸೊಕ್ಕು ಮುರಿದು ಮೆರೆದ ಭಾರತ
2009ರಲ್ಲಿರೋ ರಜಾದಿನಗಳು ಯಾವುವು?