ರಜನಿ ಭಟ್ "ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ"
ಇದು ಭಾರತೀಯ ಸಂಪ್ರದಾಯವನ್ನು ಬಿಂಬಿಸುವ, ಮಹಿಳೆಯರಿಗೆ ನೀಡಿದ ಸ್ಥಾನಮಾನವೇನೆಂಬುದನ್ನು ಉಲ್ಲೇಖಿಸುವ ಉಕ್ತಿ. ಇದೇ ಕಾರಣಕ್ಕಾಗಿಯೇ ಇರಬಹುದು ಮಹಿಳೆಯನ್ನು ಪ್ರತಿಯೊಂದು ಕುಟುಂಬದಲ್ಲಿ ಗೌರವಾದರಗಳಿಂದ ನೋಡುವುದು. ಅಂದರೆ "ಎಲ್ಲಿ ಸ್ತ್ರೀ ಗೌರವಿಸಲ್ಪಡುತ್ತಾಳೊ ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾರೆ" ಎನ್ನುವ ಪೂಜ್ಯ ಭಾವನೆ ಭಾರತೀಯರಲ್ಲಿ ನೆಲೆಸಿದೆ.
ಆದರೆ ಇಂದಿಗೂ ಮಹಿಳೆ ತನ್ನ ಸ್ವಾತಂತ್ರ್ಯ ಹಾಗೂ ಹಕ್ಕುಗಳಿಗಾಗಿ ಹೋರಾಡುತ್ತಲೇ ಮುಂದುವರಿಯಬೇಕಾಗಿದೆ. ಅದಕ್ಕೊಂದು ಸ್ಪಷ್ಟ ಉದಾಹರಣೆ, ಭಾರತದ ಪ್ರಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರು ತಮ್ಮ ಸಾಧನೆಯ ಹಾದಿಯಲ್ಲಿ ಅನುಭವಿಸಿದ ನೋವುಗಳು. ಸ್ವತಃ ಐಪಿಎಸ್ ಅಧಿಕಾರಿಯಾಗಿದ್ದ ಬೇಡಿಯವರನ್ನೇ ಆ ಪುರುಷ ಸಮಾಜ ಲಿಂಗ ತಾರತಮ್ಯದ ಮೂಲಕ ಅಪಮಾನಕ್ಕೆ ಈಡು ಮಾಡಿತ್ತು. ಆ ಕಾರಣಕ್ಕಾಗಿಯೇ ನಿಷ್ಠಾವಂತ ಅಧಿಕಾರಿಯಾಗಿದ್ದ ಬೇಡಿ ಅವರು ಪುರುಷ ಸಮಾಜದ ಲಿಂಗತಾರತಮ್ಯದ ವಿರುದ್ಧ ಸಿಡಿದೆದ್ದು, ತಮ್ಮ ಕೆಲಸಕ್ಕೆ (ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಕ್ಕೆ ಅವರು ನೀಡಿದ ಕಾರಣ ಉನ್ನತ ವ್ಯಾಸಂಗದ ಬಗ್ಗೆ) ರಾಜೀನಾಮೆ ನೀಡುವಂತಾಗಿರುವುದು ದುರಂತವಲ್ಲದೆ ಇನ್ನೇನು ?
ಪುರುಷ ಸಮಾಜ ನಿರಂತರವಾಗಿ ಮಹಿಳೆಯನ್ನು ಶೋಷಣೆಗೆ, ದಬ್ಬಾಳಿಕೆಗೆ ಒಳಪಡಿಸುತ್ತಲೇ ಬಂದಿದೆ. ಆ ಕಾರಣಕ್ಕಾಗಿಯೇ ಇಂದಿಗೂ ಮಹಿಳೆ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾದ ಸ್ಥಿತಿ ಬಂದಿದ್ದು, ಮಹಿಳೆಯರ ಸ್ಥಾನಮಾನ ಸೇರಿದಂತೆ ಆಕೆಯ ರಕ್ಷಣೆ ಕುರಿತಾದ ವಿಚಾರದಲ್ಲಿ ಮತ್ತಷ್ಟು ವಿಮರ್ಶಿಸಬೇಕಾಗಿದೆ.
ಹೆಣ್ಣು ಎಲ್ಲಿಲ್ಲ, ಹೆಣ್ಣಿಗಾಗಿ ಯಾರು ಆತುರ ಪಟ್ಟಿಲ್ಲ, ಹೆಣ್ಣಿಗೋಸ್ಕರ ಯಾರು ಜೀವನವನ್ನೇ ಕೊಟ್ಟಿಲ್ಲ, ಹೆಣ್ಣು ಯಾವ ಕ್ಷೇತ್ರದಲ್ಲಿ ಸಾಧನೆಗೈದಿಲ್ಲ... ಇನ್ನೊಂದರ್ಥದಲ್ಲಿ ಹೇಳಬೇಕೆಂದರೆ ಇಂದು ಜಗತ್ತಿದೆಯೆಂದರೆ ಅದು ಹೆಣ್ಣಿನಿಂದ. ಯಾಕೆಂದರೆ ಹೆಣ್ಣನ್ನು ಪ್ರಕೃತಿಗೆ ಹೋಲಿಸಿದ್ದಾರೆ. ಪ್ರಕೃತಿಯ ನಾಶ ಸರ್ವನಾಶ ಹೇಗೆಯೋ ಹೆಣ್ಣಿಗೂ ಅದೇ ತರ. ಅದಕ್ಕಾಗಿಯೇ ಹಿರಿಯರು ಹಿಂದೆ ಹೇಳಿದ್ದಾರೆ. ಒಂದು ಹೆಣ್ಣನ್ನು ಗೌರವಿಸಿ, ಪ್ರೀತಿಸಿ, ಆದರಿಸಿ.
ಹೆಣ್ಣು ಇಂದು ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾಳೆ. ಪುರುಷರಿಗೆ ಆಕೆ ಯಾವುದರಲ್ಲಿ ಸರಿಸಮಾನಳಲ್ಲ? ಹಿಂದಿನ ಕಾಲದಿಂದ ಹಿಡಿದು ಇಂದಿಗೂ ಹೆಣ್ಣು ದುಡಿಯದ ಕ್ಷೇತ್ರವಿಲ್ಲ. ಮೈತ್ರೇಯಿ, ಗಾರ್ಗಿಯಂತಹ ಮಹಿಳೆ ವಿದ್ವತ್ತಿನ ಇನ್ನೊಂದು ಪ್ರತೀಕ. ಮಹಾಭಾರತದ ಕಾಲದಲ್ಲಿ ಕುಂತಿ. ಆಕೆ ತನ್ನ ಮಕ್ಕಳನ್ನು ಸಾಕಿದ ಪರಿ, ಅವರನ್ನು ಯುದ್ಧಕ್ಕೆ ಹುರಿದುಂಬಿಸಿದ ರೀತಿ ನಿಜಕ್ಕೂ ಅದ್ಭುತ. ಸೀತೆ ರಾಮನಿಗಾಗಿ ಕಾದಿದ್ದು, ತಾಳ್ಮೆಯ ಇನ್ನೊಂದು ಪ್ರತೀಕ.
ಇದೆಲ್ಲಾ ಪ್ರಾಚೀನ ಕಾಲವಾಯಿತು. ಮಧ್ಯಮ ಕಾಲದಲ್ಲಿ, ಶಿವಾಜಿಯನ್ನು ಬೆಳೆಸಿದ ಜೀಜಾಬಾಯಿಯ ಸಾಧನೆ ನಿಜಕ್ಕೂ ವರ್ಣಿಸಲಸದಳ. ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಇವರೆಲ್ಲಾ ಈ ದೇಶಕ್ಕಾಗಿ ಹೋರಾಡಿದ ವೀರ ಮಹಿಳೆಯರು.
|