ಗುಲ್ಬರ್ಗ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆ ಕಾಮಗಾರಿಯ ಒಪ್ಪಂದವನ್ನು ಸತ್ಯಂ ಮಾಜಿ ಅಧ್ಯಕ್ಷ ಬಿ. ರಾಮಲಿಂಗ ರಾಜು ಕುಟಂಬದ 'ಮೇತಾಸ್ ಇನ್ಫ್ರಾ' ಸಂಸ್ಥೆಯ ಜತೆ ಮುಂದುವರಿಸಲು ಕರ್ನಾಟಕ ಸರಕಾರ ಒಪ್ಪಿಕೊಂಡಿದೆ.
"ಗುಲ್ಬರ್ಗ ಮತ್ತು ಶಿವಮೊಗ್ಗದ ಎರಡು ವಿಮಾನ ನಿಲ್ದಾಣಗಳ ನಿರ್ಮಾಣ ಕಾಮಗಾರಿಯ ಜವಾಬ್ದಾರಿಯನ್ನು ಮೇತಾಸ್ಗೇ ವಹಿಸಲು ಕರ್ನಾಟಕ ಸರಕಾರ ನಿರ್ಧರಿಸಿದೆ" ಎಂದು ಕಂಪನಿಯು ಮುಂಬೈ ಶೇರು ಮಾರುಕಟ್ಟೆಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.
ಕೇಂದ್ರ ಕಂಪನಿ ವ್ಯವಹಾರಗಳ ಸಚಿವಾಲಯವು ಶಿಫಾರಸ್ಸು ಮಾಡಿದ ನಂತರ ನಾವು ಒಪ್ಪಂದವನ್ನು ಮೇತಾಸ್ ಜತೆಗೆ ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ರಾಜ್ಯ ಸರಕಾರವು ತಿಳಿಸಿತ್ತು.
ಸತ್ಯಂ ಬಹುಕೋಟಿ ಹಗರಣ ಬಯಲಾಗುತ್ತಿದ್ದಂತೆ ಕಂಪನಿ ಬಗ್ಗೆ ಸಂಶಯ ತಳೆದ ಕರ್ನಾಟಕ ಸರಕಾರವು ಮೇತಾಸ್ ಜತೆ ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದಕ್ಕೆ ಸರಿದಿತ್ತು. ಆದರೆ ಕೇಂದ್ರ ಸರಕಾರದ ಕಂಪನಿ ವ್ಯವಹಾರಕಗಳ ಸಚಿವಾಲಯವು ಭರವಸೆ ನೀಡಿದ್ದಲ್ಲದೆ, ಒಂದು ಸಮಿತಿಯನ್ನೂ ರಚಿಸಲಾಗಿದೆ. ಹಾಗಾಗಿ ಒಪ್ಪಂದವನ್ನು ಪುನರೂರ್ಜಿತಗೊಳಿಸಲಾಗಿದೆ. ಕಾಮಗಾರಿಗಳನ್ನು ವರ್ಷದೊಳಗೆ ಪೂರೈಸುವ ಭರವಸೆ ಸರಕಾರಕ್ಕಿದೆ ಎಂದು ಗೃಹ ಸಚಿವ ವಿ.ಎಸ್. ಆಚಾರ್ಯ ತಿಳಿಸಿದ್ದಾರೆ.
ಸಂಸ್ಥೆಯ ಹಣಕಾಸು ಭದ್ರತೆ ಮತ್ತು ನಂಬಿಕೆಗಳ ಬಗ್ಗೆ ಕರ್ನಾಟಕ ಸರಕಾರಕ್ಕಿದ್ದ ಭೀತಿಯನ್ನು ಮೇತಾಸ್ ಇನ್ಫ್ರಾದ ಮಂಡಳಿ ಪರಿಹರಿಸಿದೆ. ನಮ್ಮ ಯೋಜನೆಗಳ ಬಗ್ಗೆ ನಮಗೆ ಭರವಸೆಯಿದೆ. ಸರಕಾರ ಮತ್ತೆ ಒಪ್ಪಂದವನ್ನು ಊರ್ಜಿತಗೊಳಿಸಿರುವುದು ಸಂತೋಷ ತಂದಿದೆ ಎಂದು ಮೇತಾಸ್ ಅಧ್ಯಕ್ಷ ಚಂದರ್ ಶೀಲ್ ಭನ್ಸಾಲ್ ಪ್ರತಿಕ್ರಿಯಿಸಿದ್ದಾರೆ.
ಮೇತಾಸ್ಗೆ ವಹಿಸಲಾಗಿದ್ದ ಮೆಟ್ರೋ ರೈಲು ಯೋಜನೆಯ ಒಪ್ಪಂದವನ್ನು ಮಂಗಳವಾರ ಆಂಧ್ರಪ್ರದೇಶ ಸರಕಾರ ಹಿಂದಕ್ಕೆ ಪಡೆದುಕೊಂಡ ಹೊರತಾಗಿಯೂ ಕರ್ನಾಟಕ ಸರಕಾರ ಈ ನಿರ್ಧಾರಕ್ಕೆ ಬಂದಿದೆ.
|