ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯ ನೃತ್ಯಕ್ಕೆ ಜಾಗತಿಕ ಮನ್ನಣೆ ದೊರಕಿಸಿದ ಗುರು ಗೋಪೀನಾಥ್  Search similar articles
ಟಿ.ಶಶಿಮೋಹನ
Guru Gopinath and Tangamani as Shiva-Parvathi
WD
ಭಾರತದ ನೃತ್ಯ ಕ್ಷೇತ್ರದಲ್ಲಿ ಗುರು ಗೋಪೀನಾಥ್ ಅವರದು ಅಚ್ಚಳಿಯದ ಹೆಸರು. ಅದ್ಭುತ ನೃತ್ಯಪಟುವಾಗಿದ್ದ ಅವರು ಶಾಸ್ತ್ರೀಯ ನರ್ತನ ಕ್ಷೇತ್ರದ ಸರಿಸಾಟಿಯಿಲ್ಲದ ಪ್ರತಿಭೆಯಾಗಿದ್ದರು. 2008ರ ಜೂನ್ 24ರಂದು ಅವರ ಜನ್ಮಶತಮಾನೋತ್ಸವ. ಅತ್ಯುತ್ತಮ ನಟ, ಕೋರಿಯೋಗ್ರಾಫರ್ ಕೂಡ ಆಗಿದ್ದ ಗುರು ಗೋಪೀನಾಥ್ ಅವರು 30-40ರ ದಶಕದಲ್ಲಿ ಹಿಂದಿಯ ಖ್ಯಾತ ನೃತ್ಯ ನಿರ್ದೇಶಕ ಉದಯ ಶಂಕರ್ ಅವರಿಗೆ ಸಾಟಿಯಾಗಿದ್ದರು. ದೆಹಲಿಯ ರಾಮ್‌ಲೀಲಾ ಉತ್ಸವಕ್ಕೆ ಈಗಿನ ರೂಪ ಬಂದಿರುವುದು ಗೋಪೀನಾಥ್ ಅವರ ನೃತ್ಯ ನಿರ್ದೇಶನದಿಂದಾಗಿಯೇ ಎಂಬ ಹೆಗ್ಗಳಿಕೆಯಿದೆ.

ಚೆನ್ನೈಯಲ್ಲಿ ನಟನ ನಿಕೇತನ ಎಂಬ ನೃತ್ಯ ಶಾಲೆಯನ್ನೂ ಸ್ಥಾಪಿಸಿರುವ ಅವರಿಗೆ ಬಂಗಾಳದ ರವೀಂದ್ರ ಭಾರತಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ಗೋಪೀನಾಥ್ ಅವರ ಪ್ರಾರಂಭಿಕ ಪ್ರಯತ್ನದ ಫಲವಾಗಿ ಕೇರಳದ ಕಥಕ್ಕಳಿಯು ಅತ್ಯಂತ ಜನಪ್ರಿಯ ಮಟ್ಟಕ್ಕೇರಿತು ಎಂದೂ ಹೇಳಲಡ್ಡಿಯಿಲ್ಲ. ಪಾರಂಪರಿಕ ಕಥಕ್ಕಳಿಗೆ ಹೊಸತನ ನೀಡಿ, ಕಥಕ್ಕಳಿ ನಟನಂ ಮತ್ತು ಬಳಿಕ ಕೇರಳ ನಟನಂ ಎಂಬ ಶೈಲಿಯನ್ನು ನೀಡಿದವರು ಅವರು. ಆದರೆ ಕಥಕ್ಕಳಿಯ ಮೂಲ ಆಶಯ ಮತ್ತು ಸಾರಕ್ಕೆ ಧಕ್ಕೆ ಬಾರದಂತೆ ನೋಡಿಕೊಂಡಿರುವುದು ಅವರ ಪ್ರಯೋಗಶೀಲತೆಗೆ ಸಾಕ್ಷಿ.

ಅವರು ಮೂಲತಃ ಕಥಕ್ಕಳಿಯಲ್ಲಿ ಸುಮಾರು 200 ವರ್ಷಗಳ ಇತಿಹಾಸವಿರುವ ಮನೆತನಕ್ಕೆ ಸೇರಿದವರು. ಶ್ರೇಷ್ಠ ಕಥಕ್ಕಳಿ ಕಲಾವಿದ ಚಂಪಾಕ್ಕುಳಂ ಪಾಚು ಪಿಳ್ಳೈ ಅವರು ಗೋಪೀನಾಥರ ಹಿರಿಯ ಸಹೋದರ. ಕಥಕ್ಕಳಿಯ ದಕ್ಷಿಣಾದಿ ಮತ್ತು ಉತ್ತರಾದಿ ಚಿಟ್ಟ (ಶೈಲಿ)ಗಳೆರಡರಲ್ಲೂ ಅವರು ಪಳಗಿದವರು.

30ರ ದಶಕದ ಆದಿಭಾಗದಲ್ಲೇ ಭಾರತೀಯ ನೃತ್ಯ ಶೈಲಿಯನ್ನು ವಿದೇಶದಲ್ಲೂ ಪ್ರಚುರ ಪಡಿಸಿದವರಲ್ಲಿ ಗೋಪಿನಾಥ್ ಪ್ರಮುಖರು. ಅವರು ತಮ್ಮದೇ ಆದ ಕಥಕ್ಕಳಿ ಶೈಲಿಯಿಂದ ಪ್ರಸಿದ್ಧರಾಗಿದ್ದು, ಇದನ್ನು ಸರಳೀಕೃತ ಕಥಕ್ಕಳಿ ಎಂದೂ ಕರೆಯಬಹುದಾಗಿದೆ.

ಸಾಂಪ್ರದಾಯಿಕತೆಗೆ ಭಂಗ ತಾರದೆ, ಕಥಕ್ಕಳಿಯನ್ನು ಹಾಳುಗೆಡಹದೆ, ಹೊಸತನ ಬಿಂಬಿಸುವ ಶೈಲಿಯ ಮೂಲಕ ಅದನ್ನು ಪ್ರಸಿದ್ಧಿಗೆ ತಂದಿರುವುದು ಗೋಪೀನಾಥರ ಹೆಗ್ಗಳಿಕೆ.

1908ರ ಜೂನೇ 24ರಂದು ಪೆರುಮನ್ನೂರ್ ತರವಾಡು ಮನೆತನದ ಮಾಧವಿ ಅಮ್ಮ ಮತ್ತು ಕೈಪ್ಪಿಲ್ಲಿ ಶಂಕರ ಪಿಳ್ಳೈ ಪುತ್ರರಾಗಿ ಕೇರಳದ ಅಲೆಪ್ಪಿ ಜಿಲ್ಲೆಯ ಚಂಪಾಕ್ಕುಳಂನಲ್ಲಿ ಜನಿಸಿದ ಗೋಪೀನಾಥ್ ಮನೆತನ ಕಥಕ್ಕಳಿ ಮತ್ತು ಕೃಷಿಗೆ ಹೆಸರಾಗಿತ್ತು. 13ರ ವಯಸ್ಸಿಗೇ ಕಥಕ್ಕಳಿ ಆರಂಭಿಸಿದ ಅವರು 12 ವರ್ಷಗಳ ಕಾಲ ಶ್ರೇಷ್ಠ ಕಥಕ್ಕಳಿ ಗುರುಗಳಾದ ಚಂಪಾಕ್ಕುಳಂ ಪರಮು ಪಿಳ್ಳೈ, ಮತ್ತೂರು ಕುಂಜುಪಿಳ್ಳ ಪಣಿಕ್ಕರ್, ತಕಾಳಿ ಕೇಶವ ಪಣಿಕ್ಕರ್ ಅವರಿಂದ ಕಲಿತರು. ಮೋಹಿನಿಯಾಟ್ಟಂನ ಶ್ರೇಷ್ಠ ಕಲಾವಿದೆ ಮತ್ತು ಕೇರಳ ನಟನಂ ಪ್ರವೀಣೆ ಮುತಕ್ಕಳ್ ತಂಗಮಣಿ ಅಮ್ಮ ಅವರನ್ನು ವಿವಾಹವಾದ ಅವರಿಗೆ ನಾಲ್ವರು ಮಕ್ಕಳಿದ್ದಾರೆ.

ಗೋಪಿನಾಥ್ ಅವರಿಗೆ 1934ರಲ್ಲಿ ಕಲ್ಕತ್ತಾದಲ್ಲಿ ನಡೆದ ಬಂಗಾಳಿ ಸಂಗೀತ ಸಮಾವೇಶದಲ್ಲಿ ಅಭಿನವ ನಟರಾಜ ಬಿರುದು ದೊರೆತಿತ್ತು. ತಿರುವಾಂಕೂರು ಮಹಾರಾಜರ ಆಸ್ಥಾನ ನರ್ತಕರೂ ಆಗಿದ್ದ ಅವರು ಮದ್ರಾಸ್ ಮಲಯಾಳಂ ಸಮಾವೇಶದಲ್ಲಿ ನಟನ ಕಲಾನಿಧಿ ಬಿರುದು, ಕಲಾ ತಿಲಕಂ, ಡಿ.ಲಿಟ್ ಪದವಿ, ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಮುಂತಾದ ಸನ್ಮಾನ, ಬಿರುದು, ಗೌರವಗಳು ಸಂದಿವೆ.

ತಿರುವನಂತಪುರದ ಚಿತ್ರೋದಯ ನರ್ತಕಾಲಯಂನ ಪ್ರಾಂಶುಪಾಲರಾಗಿ, ತಿರುವಾಂಕೂರು ಆಸ್ಥಾನ ವಿದ್ವಾಂಸರಾಗಿ, ನವದೆಹಲಿಯ ಕೇರಳ ಕಲಾ ಕೇಂದ್ರ ಪ್ರಾಂಶುಪಾಲರಾಗಿ, ಮದ್ರಾಸ್ ನಟನ ನಿಕೇತನದ ನಿರ್ದೇಶಕರಾಗಿ, ನವದೆಹಲಿಯ ರಾಮ ಲೀಲಾ ನಿರ್ದೇಶಕರಾಗಿ, ಮದ್ರಾಸ್ ಸಂಗೀತ ನಾಟಕ ಸಂಘದ ಸದಸ್ಯರಾಗಿ, ಕೇಂದ್ರೀಯ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ ಮತ್ತು ಇನ್ನೂ ಹಲವು ಸಾಂಸ್ಕೃತಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಅವರು, ಹಲವು ಕೃತಿಗಳನ್ನೂ ಬರೆದಿದ್ದಾರೆ.

ವಿಶ್ವಾದ್ಯಂತ ಪ್ರವಾಸ ಮಾಡಿ ನೃತ್ಯ ಕಲೆಯನ್ನು ಪ್ರಚುರಪಡಿಸಿರುವ ಅವರ ಬಗ್ಗೆ ರಾಷ್ಟ್ರಕವಿ ರವೀಂದ್ರನಾಥ ಟಾಗೋರ್ ಹೇಳಿದ್ದು ಹೀಗೆ: "ಗೋಪೀನಾಥ್ ಅವರೊಬ್ಬ ನೈತ ಕಲಾವಿದ. ದೇಶದಲ್ಲಿ ನೃತ್ಯವು ಅತ್ಯಂತ ಶ್ರೇಷ್ಠ ಕಲೆ ಎಂಬುದನ್ನು ತಮ್ಮ ಪ್ರದರ್ಶನಗಳ ಮೂಲಕ ಅವರು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ."
ವೀಡಿಯೋ ವೀಕ್ಷಿಸಿ
ಮತ್ತಷ್ಟು
ವೆಬ್‌ದುನಿಯಾ ಬದಲಾಗಿದೆ...
ನಿರೀಕ್ಷಿಸಿ... ವೆಬ್‌ದುನಿಯಾ ಬದಲಾಗುತ್ತಿದೆ...!
ಜನರ ಚಡಪಡಿಕೆಯ ಬೆಂಕಿಗೆ ಪೆಟ್ರೋಲ್!
ಹೊಸ ಸರಕಾರ: ನಿರೀಕ್ಷೆಗಳು ಸಾವಿರ
ನಗರ ಸಭೆಯಿಂದ ಮುಖ್ಯಮಂತ್ರಿ ಗಾದಿಯವರೆಗೆ...  
ಗೆದ್ದ ಮತದಾರ; ಸೋತ ಕುತಂತ್ರ